ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವಿರುದ್ಧ ವಿವಿಧೆಡೆ ಅವಹೇಳನಕಾರಿ ಪೋಸ್ಟರ್ಗಳನ್ನು ಅಂಟಿಸಿದ ಬೆನ್ನಲ್ಲೇ ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜೆಡಿಎಸ್ ಮುಖಂಡರ ದೂರಿನ ಆಧಾರದ ಮೇಲೆ ಪೊಲೀಸರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯದರ್ಶಿ ಎಸ್ ಮನೋಹರ್ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ನ.20ರಂದು ರಾಜಾಜಿನಗರ, ಶೇಷಾದ್ರಿಪುರಂ ಮತ್ತಿತರ ಪ್ರದೇಶಗಳಲ್ಲಿ ಕುಮಾರಸ್ವಾಮಿ ಅವರ ವಿವಿಧ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ‘ವಿದ್ಯುತ್ ಕಳ್ಳ’ ಎಂದು ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದ ಪೋಸ್ಟರುಗಳು ಜೆಡಿಎಸ್ ಕಚೇರಿಯ ಕಾಂಪೌಂಡ್ ಕಾಣಿಸಿತ್ತು. ಈ ಹಿಂದೆಯೂ ಇದೇ ರೀತಿಯ ಪೋಸ್ಟರುಗಳನ್ನು ಹಾಕಲಾಗಿತ್ತು.
ಜೆಡಿಎಸ್ ಮುಖಂಡರು ಬುಧವಾರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಜೆಡಿಎಸ್ ಮುಖಂಡ ರಮೇಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಕೆಪಿಸಿಸಿ ಕಾರ್ಯದರ್ಶಿ ಎಸ್ ಮನೋಹರ್, ಕಾರ್ತಿಕ್ ಡಿ, ದರ್ಶನ್ ಗೌಡ, ಅರ್ಜುನ್ ಡಿ ಗೌಡ, ಸಂತೋಷ್ ಮತ್ತು ಇತರರನ್ನು ಹೆಸರಿಸಿದ್ದಾರೆ. ಐಪಿಸಿ ಸೆಕ್ಷನ್ 153(ಎ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ ಮತ್ತು ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು).
ದೀಪಾವಳಿ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ವಿದ್ಯುತ್ ಕಂಬದಿಂದ ವಿದ್ಯುತ್ ಹರಿದು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 68 ಸಾವಿರ ದಂಡ ವಿಧಿಸಿದ್ದು, ಅದನ್ನು ಕುಮಾರಸ್ವಾಮಿ ಪಾವತಿಸಿದ್ದಾರೆ.
ತಮ್ಮ ವಿರುದ್ಧ ಅಂಟಿಸಿರುವ ಪೋಸ್ಟರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ವಿಚಾರವಾಗಿ ಮಂಗಳವಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದೂಷಿಸಿದರು ಮತ್ತು ಅವರು ‘ನೀಲಿ ಚಿತ್ರಗಳನ್ನು’ ತೋರಿಸಿ ಜೀವನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
“ಅವರು ನೀಲಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜೀವನ ನಡೆಸಿದವರು. ಅಂತಹ ವ್ಯಕ್ತಿಯ ಮನಸ್ಸಿನಲ್ಲಿ, ಇನ್ನೇನು ಬರುತ್ತದೆ? ಅವರು ಮಾತ್ರವೇ ಅಂತಹ ಪೋಸ್ಟರ್ಗಳನ್ನು ಅಂಟಿಸಲು ಸಾಧ್ಯ” ಎಂದು ಕುಮಾರಸ್ವಾಮಿ ಹೇಳಿದ್ದರು.
ಡಿ ಕೆ ಶಿವಕುಮಾರ್ ಈ ಆರೋಪವನ್ನು ತಳ್ಳಿಹಾಕಿದ್ದು, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.