ಹೈದರಾಬಾದ್: ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಂಗಿರುವ ಲಾಡ್ಜ್ ಮೇಲೆ ಪೊಲೀಸ್ ದಾಳಿ ನಡೆದಿದೆ. ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ಸಲುವಾಗಿ ಹೈದರಾಬಾದಿನಲ್ಲಿ ತಂಗಿರುವ ಅವರು ಅಕ್ರಮ ಹಣ ಸಾಗಣೆ ಮಾಡುತ್ತಿದ್ದಾರೆನ್ನುವ ಅನುಮಾನದ ಮೇಲೆ ಈ ದಾಳಿ ಎಸಗಲಾಗಿದೆ.
ಆದರೆ ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಮೊತ್ತ ಸಿಗದೆ ಬರಿಗೈಯಲ್ಲಿ ಹಿಂದಿರುಗಿದ್ದಾರೆಂದು ಸಚಿವರು ತಿಳಿಸಿದ್ದಾರೆ. ಜಮೀರ್ ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು ಬಿಆರ್ಎಸ್ ಮತ್ತು ಬಿಜೆಪಿ ತೆಲಂಗಾಣದಲ್ಲಿ ಕಾಂಗ್ರೆಸ್ ಜನಪ್ರಿಯತೆ ಕಂಡು ಕಂಗಾಲಾಗಿದ್ದು, ನಮ್ಮ ಸರ್ಕಾರ ಬರಬಹುದೆನ್ನುವ ಭಯದಲ್ಲಿ ಇದನ್ನೆಲ್ಲ ಮಾಡುತ್ತಿವೆ ಆದರೆ ನಾವು ಇದಕ್ಕೆಲ್ಲ ಹೆದರುವುದಿಲ್ಲ. ತೆಲಂಗಾಣದಲ್ಲಿ ನಾವು ಸರ್ಕಾರ ಸ್ಥಾಪಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ತೆಲಂಗಾಣ ರಾಜ್ಯವು ಈ ತಿಂಗಳ 30ರಂದು ಚುನಾವಣೆ ಎದುರಿಸುತ್ತಿದ್ದು, ರಾಜ್ಯದಲ್ಲಿ ಬಿರುಸಿನಿಂದ ಪ್ರಚಾರ ನಡೆಯುತ್ತಿದೆ. ಬಿಆರ್ಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು ಬಿಜೆಪಿ ಕೂಡಾ ಒಂದಷ್ಟು ಸೀಟ್ ಪಡೆಯುವ ಪ್ರಯತ್ನದಲ್ಲಿದೆ.