ಹುಡುಗೀಯರೇ ಸೇರಿ ಗೌರಿ ಗಣೇಶ ಕೂರಿಸಿರುವ ಐತಿಹಾಸಿಕ ಘಟನೆ
ಗುಡುಗುಡು ಅಂಕಲ್ ಖ್ಯಾತಿಯ ಮೊಹಮ್ಮದ್ ಅವರ ವಿಶೇಷ ಪ್ರೀತಿ ಮತ್ತು ಬೆಂಬಲ
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಬೆಂಕೀಕೆರೆ ಗ್ರಾಮದ ಈ ಬಾರಿಯ ಗೌರಿ ಗಣೇಶ ಹಬ್ಬ ಹಲವು ವಿಶೇಷತೆಗೆ ಕಾರಣವಾಗಿದೆ. ಮಹಿಳೆಯರು ಪೂಜೆ ಮಾಡಬಾರದು, ಗರ್ಭಗುಡಿ ಪ್ರವೇಶ ಮಾಡಬಾರದು ಎಂಬ ಹಲವು ವಾದಗಳಿವೆ. ಮಹಿಳೆಯರ ಮುಟ್ಟನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಭಾರತದಂತಹ ದೇಶದಲ್ಲಿ ಮಹಿಳೆಯರು ದೇವಾಲಯದ ಪ್ರವೇಶ ಮಾಡುವುದನ್ನು ನಿಷೇಧಿಸಿರುವ, ಕೆಲ ಪ್ರಕರಣಗಳು ಸುಪ್ರೀಮ್ ಕೋರ್ಟ್ ಮೆಟ್ಟಿಲೂ ಏರಿರುವ ಸನ್ನಿವೇಶಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಮನುಷ್ಯ ನಿರ್ಮಿತ ಈ ಚೌಕಟ್ಟಗಳನ್ನು ತಿಳಿಯದ, ಅಸಮಾನತೆಯನ್ನು ಆಚರಣೆ ಮಾಡದ, ನಿಶ್ಕಲ್ಮಶ ಮುಗ್ದ ಮನಸ್ಸಿನ ಈ ಗ್ರಾಮದ ಪುಟಾಣಿ ಹೆಣ್ಣಮಕ್ಕಳು ಗ್ರಾಮದ ಮೂಲೆಯೊಂದರಲ್ಲಿ ಗೌರಿ ಗಣೇಶ ಕೂರಿಸಿದ್ದಾರೆ. ಗಂಡಸರೇ ಸೇರಿ ಪೆಂಡಾಲ್ ಕಟ್ಟಿ, ಕುಣಿದು ಕುಪ್ಪಳಿಸಿ ಹಬ್ಬ ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆ ಅಪವಾದದಂತೆ ಇಲ್ಲಿನ ಹುಡುಗೀಯರೇ ಸೇರಿ ಗ್ರಾಮದ ಮಟ್ಟಕ್ಕೆ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ
ಗುಡುಗುಡು ಅಂಕಲ್ ಖ್ಯಾತಿಯ ಮೊಹಮ್ಮದ್ ಅಣ್ಣನ ಗಣಪತಿ ಪ್ರೀತಿ.
ರಾಜ್ಯದಲ್ಲೀಗ ಹಬ್ಬ-ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚಾಗಿದೆ. ಗಲಭೆಗಳಲ್ಲಿ ಯುವಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅನ್ಯಧರ್ಮೀಯರ ಮೇಲೆ ದ್ವೇಷ ಹರಡಿಸುತ್ತಿರುವ ಹೊತ್ತಲ್ಲಿ ಗಾರ ಕೆಲಸದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಅವರು ಬೆಂಕೀಕೆರೆಯಲ್ಲಿ ಈ ಮಕ್ಕಳ ಜೊತೆ ಸೇರಿ ಪ್ರೀತಿಯನ್ನು ಹಂಚುತ್ತಿದ್ದಾರೆ. ಮಕ್ಕಳ ಗಣಪತಿ ಪೆಂಡಾಲ್ ಅನ್ನು ಇವರೇ ಕಟ್ಟಿದ್ದು ಅಲ್ಲದೆ ಹಣ್ಣು ಸಿಹಿತಿನಿಸುಗಳನ್ನು ತಂದು ಕೊಟ್ಟಿದ್ದಾರೆ. ಗಣಪತಿಗೆ ಹಾರ ತರಲು ತಮ್ಮದೇ ಗಾಡಿಯಲ್ಲಿ 70 ಕಿಮಿ ದೂರದ ದಾವಣಗೆರೆಗೆ ಹೋಗಿ ಹೂವಿನ ಹಾರ ತಂದಿದ್ದಾರೆ. ಪೆಂಡಾಲ್ ಮತ್ತಷ್ಟು ಚೆನ್ನಾಗಿ ಕಾಣಲು ಲೈಟಿನ ಸರ, ಉಸ್ರುಬುಲ್ಡೆ (ಬಲೂನ್) ಗಳನ್ನು ಕಟ್ಟಿದ್ದಾರೆ. ಮಕ್ಕಳು ಪ್ರೀತಿಯಿಂದ ಭಾರತದ ಧ್ವಜವನ್ನೂ ಕಟ್ಟಿದ್ದಾರೆ. ಮೊಹಮ್ಮದ್ ಅವರು ಭಕ್ತಿಯಿಂದ ಗಣಪತಿಗೆ ಕೈ ಮುಗಿಯುತ್ತಾರೆ, ಮಂಗಳಾರತಿ- ತೀರ್ಥ ಪಡೆಯುತ್ತಾರೆ. ಮಕ್ಕಳೆಲ್ಲಾ ಸಂಜೆಯ ಮೇಲೆ ಮನೆಗೆ ಹೋದಾಗ ಗಣಪತಿಯ ಮುಂದೆ ಹಚ್ಚಿಟ್ಟುರವ ದೀಪ ಆರದಂತೆ ನೋಡಿಕೊಳ್ಳಲು ಅವರೇ ಪೆಂಡಾಪ್ ಮುಂದೆ ಮಲಗುತ್ತಿದ್ದಾರೆ.
“ನಿನಿಗ್ಯಾಕಣ್ಣ ಇದೆಲ್ಲಾ, ಈ ಮಕ್ಳು ಸುಮ್ಮನೆ ನಿಮ್ ದುಡ್ಡೆಲ್ಲಾ ಖರ್ಚು ಮಾಡಿಸ್ತಾರೆ ನೋಡಿ” ಅಂತ ಗ್ರಾಮಸ್ತರು ಹೇಳಿದ ಮಾತಿಗೆ “ಹಬ್ಬ ಏನ್ ದಿನಾ ಬರಲ್ಲ, ಮಕ್ಳು ಎಷ್ಟು ಖುಷಿ ಆಗಿದ್ದಾರೆ ನೋಡಿ. ಏನ್ ಮೂರ್ನಾಕ್ ಸಾವ್ರ ಖರ್ಚಾಗುತ್ತಾ? ಆಗ್ಲಿ ಬಿಡಿ” ಎಂದು ದಿನಕ್ಕೆ 500 ರೂ ಕೂಲಿ ಪಡೆಯುವ ಮೊಹಮ್ಮದ್ ಅವರು ಉತ್ತರಿಸುತ್ತಾರೆ. ಅಲ್ಲದೇ ಈ ಹಿಂದೆಯೂ ಗಣಪತಿ ಹಬ್ಬಗಳಲ್ಲಿ ತಾವು ಭಾಗಿಯಾಗಿದ್ದ ಅನುಭವಗಳನ್ನು ಅಭಿಮಾನದಿಂದ ಹಂಚಿಕೊಳ್ಳುತ್ತಾರೆ.
ಗಣಪತಿ ಪೆಂಡಾಲ್ ನ ವಿಶೇಷತೆಗಳೇನು?
ಗ್ರಾಮದಲ್ಲಿ ಸುಮಾರು 8 ಸಮುದಾಯಗಳಿವೆ, ಎಲ್ಲರೂ ತಮ್ಮ ತಮ್ಮ ಸಮುದಾಯದ ಸ್ನೇಹಿತರು ಸೇರಿಕೊಂಡು ಗಣಪತಿ ಕೂರಿಸುತ್ತಾರೆ. ಆದರೆ ಈ ಹೆಣ್ಣುಮಕ್ಕಳ ಗಣಪತಿ ಪೆಂಡಾಲ್ ನಲ್ಲಿ ಬಹುತೇಕ ಎಲ್ಲಾ ಸಮುದಾಯದ ಮಕ್ಕಳು ಸೇರಿಕೊಂಡು ಆಚರಣೆ ಮಾಡುತ್ತಿದ್ದಾರೆ. ದೇವರ ಮಂತ್ರಗಳು ತಿಳಿಯದ ಈ ಮಕ್ಕಳು ಕೈ ಮುಗಿದು ದೇಶಭಕ್ತಿ ಗೀತೆ ಮತ್ತು ನಾಡ ಗೀತೆಗಳನ್ನು ಹಾಡುತ್ತಾರೆ. ತಮ್ಮ ಟೀಚರ್ ಹೇಳಿಕೊಟ್ಟಿರುವ “ನಮ್ಮ ದೇಶವು ಪ್ರೀತಿಯ ಪ್ರತಿರೂಪವು” ಎನ್ನುವ ಹಾಡು ಗಮನ ಸೆಳೆಯುತ್ತಿದೆ.
ಡಿಜೆ, ಡ್ರಮ್ ಸೆಟ್, ವಿಚಿತ್ರ ಚಿತ್ರಗೀತೆಗಳ ಯಾವ ಹಂಗು ಇಲ್ಲದೆ ತಮಗೆ ತಿಳಿದಷ್ಟು ಜಾನಪದ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾರೆ. ಬಂದವರಿಗೆ ಕಾರ ಮಂಡಿಕ್ಕಿ ಕೊಡುತ್ತಾರೆ.
ಒಟ್ಟಾರೆಯಾಗಿ ಗಲಭೆ, ದ್ವೇಷ ಅಸೂಯೆ, ಶ್ರೇಷ್ಠತೆ ಯಾವುದೂ ಇಲ್ಲದೆ ಪ್ರೀತಿ ಸೌಹಾರ್ದತೆ ಹಂಚುವ ಇಂತಹ ಪರಂಪರೆ ಮುಂದುವರೆಯಲಿ. ಮಕ್ಕಳ ಹಾಡಿನ ಸಾಲುಗಳು ಹೇಳುವ “ಈ ನಮ್ಮ ದೇಶವು, ಪ್ರೀತಿಯ ಪ್ರತಿ ರೂಪವು” ಎಲ್ಲರಿಗೂ ಆದರ್ಶವಾಗಲಿ.
-ಸರೋವರ್ ಬೆಂಕೀಕೆರೆ.