ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ 3 ರಾಜ್ಯಗಳ ಸೋಲು ಮತ್ತು ಇನ್ನು ಕೆಲವೇ ತಿಂಗಳಲ್ಲಿ ಶುರುವಾಗುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಂದು ತಂತ್ರಗಾರಿಕೆಗೆ ಮುಂದಾಗಿದೆ. ಆ ಮೂಲಕ ಭಾರತದ ಪೂರ್ವದಿಂದ ಪಶ್ಚಿಮಕ್ಕೆ ಈ ಯಾತ್ರೆ ನಡೆಯುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ.
ಬಿಜೆಪಿ ಪಕ್ಷದ ಕೋಮುವಾದಿ ರಾಜಕಾರಣ, ನಿರುದ್ಯೋಗ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಈಶಾನ್ಯದಿಂದ ಪ್ರಾರಂಭಿಸುವ ಈ ಯಾತ್ರೆ, ಈಶಾನ್ಯ ರಾಜ್ಯಗಳಿಂದ ಗುಜರಾತ್ ಗೆ ಬಂದು ತಲುಪುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪಕ್ಷದ ಮುಂಬರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಸಿಡಬ್ಲ್ಯೂಸಿಯನ್ನು ಸಹ ನಡೆಸಲಿದೆ ಎಂದು ವರದಿಗಳು ಸಿಕ್ಕಿವೆ.
ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದರು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 4,000 ಕಿಮೀ ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಮುಕ್ತಾಯವಾಯಿತು.
2024 ರ ಪ್ರಾರಂಭದಲ್ಲಿ ಶುರುವಾಗುವ ಭಾರತ್ ಜೋಡೋ ಯಾತ್ರೆಯ ಸಂಪೂರ್ಣ ರೂಪುರೇಷೆ, ಸಮಿತಿಗಳು ಸಧ್ಯದಲ್ಲೇ ರಚನೆಯಾಗುವ ಬಗ್ಗೆ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಡಿಸೆಂಬರ್ 21 ರಂದು ನಡೆಯುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅರುಣಾಚಲ ಪ್ರದೇಶದಿಂದ ಗುಜರಾತ್ ವರೆಗೂ ನಡೆಯುವ ಭಾರತ್ ಜೋಡೋ ಯಾತ್ರೆ 2.0 ಉತ್ತರ ಪ್ರದೇಶದ ಹೆಚ್ಚಿನ ಜಿಲ್ಲೆಗಳಲ್ಲಿ ಸಾಗಿ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ತನ್ನ ಯಾತ್ರೆ ಮುಂದುವರೆಸಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ನಡೆದ ಭಾರತ್ ಜೋಡೋ ಯಾತ್ರೆಯ ಪರಿಣಾಮ ಕರ್ನಾಟಕದಲ್ಲಿ ಅಭೂತಪೂರ್ವಕವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು ಎಂದು ಅಂದಾಜಿಸಲಾಗಿದೆ. ಆದರೆ ಇದನ್ನೇ ಮಧ್ಯಪ್ರದೇಶ ಹಾಗೂ ಛತ್ತೀಸಗಡದ ವಿಚಾರಕ್ಕೆ ಹೋಲಿಕೆ ಮಾಡಲಾಗದು. ಇದೇ ಕಾರಣಕ್ಕೆ ಭಾರತ್ ಜೋಡೋ ಯಾತ್ರೆ 2.0 ಆದಷ್ಟು ಬೇಗನೆ ಶುರುವಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.