ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಯಿಂದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗಂಭೀರ ಆರೋಗ್ಯ ಸಮಸ್ಯೆ ನಡುವೆಯೇ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಬಗ್ಗೆಯೂ ಮೂಲಗಳಿಂದ ತಿಳಿದುಬಂದಿದೆ.
ಆದರೆ ದಾವೂದ್ ಇಬ್ರಾಹಿಂ ಸಹಾಯಕರ ಪ್ರಕಾರ ವಿಷಪ್ರಾಶನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯ ದೃಢೀಕರಣವಿಲ್ಲ. ಎರಡು ದಿನಗಳ ಹಿಂದೆಯೇ ಈತ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆ ಒಳಗೆ ಬಿಗಿ ಬಂದೋಬಸ್ತ್ ನಲ್ಲಿ ಇರಿಸಲಾಗಿದೆ.
ಆತ ದಾಖಲಾಗಿರುವ ಆಸ್ಪತ್ರೆ ಇಡೀ ಮಹಡಿಯಲ್ಲಿ ಆತ ಒಬ್ಬನೇ ರೋಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆ ಮುಖ್ಯ ವೈದ್ಯರು ಮತ್ತು ಮನೆಯ ಸದಸ್ಯರಿಗಷ್ಟೆ ಆ ಮಹಡಿಗೆ ಪ್ರವೇಶವಿದೆ ಎನ್ನಲಾಗಿದೆ.
ಇನ್ನು ವಿಷಪ್ರಾಶನದ ಬಗ್ಗೆ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಮೂಲಗಳಿಂದ ಆತನ ಆಪ್ತ ವಲಯದಿಂದಲೇ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.