ಕಾಂಗ್ರೆಸ್ ನಾಯಕ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಚಿತ್ತಾಪುರ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಮಣಿಕಂಠ ರಾಠೋಡ್ ಅವರ ನಡುವಿನ ರಾಜಕೀಯ ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ. ಅದರಲ್ಲಿ ಗುಲ್ಬರ್ಗ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರು ಮಣಿಕಂಠ ರಾಠೋಡ್ ಅವರ ಜೊತೆಗೆ ಮಾತಾಡಿರುವ ಆಡಿಯೋ ಈಗ ವೈರಲ್ ಆಗಿದ್ದು, ಅದರ ಸತ್ಯಾಸತ್ಯತೆ ಏನು ಎಂಬ ಬಗ್ಗೆ ಪೀಪಲ್ ಮೀಡಿಯಾ ನಡೆಸಿದ ಒಂದು FACT CHECK ತನಿಖಾ ವರದಿ ಹೀಗಿದೆ.
ಮಣಿಕಂಠ ರಾಠೋಡ್ ಹಿನ್ನೆಲೆ ನೋಡಿದಾಗ ಈ ವ್ಯಕ್ತಿ ರಾಜಕೀಯವಾಗಿ ಬಿಜೆಪಿ ಪಕ್ಷದವರಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಹಾಗಾಗೇ ಪ್ರಿಯಾಂಕ್ ಖರ್ಗೆ ವಿರುದ್ಧ ನಿರಂತರವಾಗಿ ಒಂದಿಲ್ಲೊಂದು ಆರೋಪ ಪ್ರತ್ಯಾರೋಪ ನಡೆಯುತ್ತಲೇ ಇದೆ. ಕಳೆದ ನವೆಂಬರ್ ನಲ್ಲೂ ಕೂಡಾ ಈ ವ್ಯಕ್ತಿ ಬಹಿರಂಗ ಪತ್ರಿಕಾಗೋಷ್ಠಿಯಲ್ಲೂ ‘ಪ್ರಿಯಾಂಕ್ ಖರ್ಗೆಗೆ ಶೂಟ್ ಮಾಡಲೂ ನಾವು ರೆಡಿ’ ಎಂಬಂತೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.
ರಾಜಕೀಯದ ಹೊರತಾಗಿಯೂ ಈ ವ್ಯಕ್ತಿ ಕಡೆಯಿಂದ ವಿವಾದಾತ್ಮಕ ವಿಚಾರಗಳಿವೆ. ಪೊಲೀಸ್ ಇತಿಹಾಸದಲ್ಲಿ ಇವರೊಬ್ಬ ರೌಡಿಶೀಟರ್ ಸಾಲಿಗೆ ಸೇರಿದ್ದು 30 ಕ್ಕೂ ಹೆಚ್ಚು ಕ್ರಿಮಿನಲ್ ಹಾಗೂ ಅಪರಾಧ ಪ್ರಕರಣಗಳಲ್ಲಿ ಇವರ ಹೆಸರು ಇದೆ ಎಂಬುದು ಪೊಲೀಸ್ ಮೂಲಗಳಿಂದ ಬಂದ ಮಾಹಿತಿಯಾಗಿದೆ. ಅಷ್ಟೆ ಅಲ್ಲದೇ ಇಂತಹ ಪ್ರಕರಣಗಳಿಗೇ ಸಂಬಂಧಿಸಿದಂತೆ ಪೊಲೀಸರ ಕಡೆಯಿಂದ ಒಂದು ವರ್ಷ ಕಾಲ ಶಿವಮೊಗ್ಗಕ್ಕೆ ಗಡಿಪಾರಿಗೆ ಗುರಿಯಾಗಿದ್ದಾರೆ. ಮತ್ತು ಪ್ರತಿನಿತ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಾದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಕೂಡಾ ಇವರಾಗಿದ್ದಾರೆ.
ಮಣಿಕಂಠ ರಾಠೋಡ್ ಬಗ್ಗೆ ಇಷ್ಟು ವಿವರವಾದ ಮಾಹಿತಿ ಹಿಂದೆ ಪ್ರಮುಖ ಕಾರಣವಿದೆ. ಸಾಕಷ್ಟು ಕ್ರಿಮಿನಲ್ ಹಿನ್ನೆಲೆ, ರಾಜಕೀಯವಾಗಿಯೂ ಮೇಲಿಂದ ಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಜೊತೆಗೆ ಕ್ರಿಮಿನಲ್ ಪ್ರಕರಣಗಳ ಕಾರಣಕ್ಕೇ ಗಡಿಪಾರಿಗೆ ಒಳಗಾದ ಇಂತಹ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಜೊತೆಗೆ ಅವರ ಜೊತೆಗೆ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದರಲ್ಲಿ 3 ಲಕ್ಷ ಲಂಚ ಕೇಳಿದ ಗಂಭೀರ ಆರೋಪ ಮಾಡಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ವಿವರವಾಗಿ ಮಾಹಿತಿ ಕಲೆ ಹಾಕಲು ಪೀಪಲ್ ಮೀಡಿಯಾ ನೇರವಾಗಿ ಕಮೀಷನರ್ ರವಿಕುಮಾರ್ ಅವರ ಪತ್ನಿ ರೂಪಾಲಿ ನಾಯಕ್ ಅವರ ಬಳಿ ಮಾತನಾಡಿತು.
ರೂಪಾಲಿ ನಾಯಕ್ ಒಂದಷ್ಟು ಕಾಲದಿಂದ ಹಲವಷ್ಟು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಯುವ, ಸ್ಥಳೀಯ ಪ್ರತಿಭೆಗಳಿಗೆ ಸಾಕಷ್ಟು ವೇದಿಕೆ ಕಲ್ಪಿಸಿದ ಹಿನ್ನೆಲೆಯವರು. ಮತ್ತು ಇವರ ಪತಿ ಕಮೀಷನರ್ ರವಿಕುಮಾರ್ ಕೂಡಾ ಇಲ್ಲಿಯವರೆಗೂ ಒಂದೇ ಒಂದು ಕಪ್ಪುಚುಕ್ಕೆ ಪಡೆಯದೇ ಒಳ್ಳೆಯ ಹೆಸರು ಗಳಿಸಿಕೊಂಡು ಬಂದ ಹಿನ್ನೆಲೆಯವರಾಗಿದ್ದವರು. ಈ ಹಿಂದೆ ಡಿಜಿಪಿ ಹುದ್ದೆಯಲ್ಲಿದ್ದು ದಕ್ಷ ಪ್ರಾಮಣಿಕ ಅಧಿಕಾರಿ ಎನಿಸಿಕೊಂಡವರು. ಆದರೆ ಕ್ರಿಮಿನಲ್ ಗಳ ಪಾಲಿಗೆ ಯಾವುದೇ ಕಾರಣಕ್ಕೂ ಮುಲಾಜಿಗೆ ಒಳಗಾಗುವ ವ್ಯಕ್ತಿಯಲ್ಲ ಎಂಬುದು ಇವರ ಪೊಲೀಸ್ ಟ್ರಾಕ್ ರೆಕಾರ್ಡ್ ನಲ್ಲೇ ಮನೆಮಾತಾದ ವ್ಯಕ್ತಿ.
ಇನ್ನು ಈ ಆಡಿಯೋ ಕಾಲ್ ವದಂತಿಗೆ ಸಂಬಂಧಿಸಿದಂತೆ ಕಲಬುರಗಿ ದಸರಾ ಹಿನ್ನೆಲೆಯ ದಾಂಡ್ಯಾ ಕಾರ್ಯಕ್ರಮಕ್ಕೆ ರೂಪಾಲಿ ನಾಯಕ್ ಹೆಚ್ಚಿನ ಜವಾಬ್ದಾರಿ ತಗೆದುಕೊಂಡಿರುತ್ತಾರೆ. ಹಾಗಾಗಿ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಪ್ರಚಾರಕ್ಕೆ ಬಂದು ಮನೆಮಾತಾಗಿರುವ ಸೆಲೆಬ್ರಿಟಿ ಮಂಗ್ಲಿ ಬಾಯಿ ಅವರನ್ನು ಕರೆಸುವ ಬಗ್ಗೆಯೂ ಆಯೋಜಕರಲ್ಲಿ ಚರ್ಚೆ ನಡೆದಿದೆ. ಆ ಸಮಯಕ್ಕೆ ಒಂದಷ್ಟು ಕಾರ್ಯಕ್ರಮದ ಕಾರಣಕ್ಕೆ ಮಂಗ್ಲಿ ಬಾಯಿ ಅವರ ಸಂಪರ್ಕ ಗಿಟ್ಟಿಸಿದ್ದ ಮಣಿಕಂಠ ರಾಠೋಡ್ ಮಂಗ್ಲಿ ಬಾಯಿ ಅವರ ಕರೆಸುವ ಜವಾಬ್ದಾರಿ ನಾನು ತಗೆದುಕೊಳ್ಳುತ್ತೇನೆ. ಉಳಿದ ಪೇಮೆಂಟ್ ವಿಚಾರಗಳನ್ನ ನೀವುಗಳೇ ಮಾತನಾಡಬೇಕು ಎಂದಿದ್ದಾರೆ.
ನಂತರ ಮಂಗ್ಲಿ ಬಾಯಿ ಕಾರ್ಯಕ್ರಮಕ್ಕೆ ಒಪ್ಪಿ 3 ಲಕ್ಷ ಪೇಮೆಂಟ್ ಗೆ ಬರುವ ಬಗ್ಗೆ ಮಾತುಕತೆ ಮುಗಿದಿರುತ್ತದೆ. ಇದರ ಮಾಹಿತಿ ನೀಡಲು ರೂಪಾಲಿ ನಾಯಕ್ ಅವರು ಮಣಿಕಂಠ ರಾಠೋಡ್ ಅವರ ಜೊತೆಗೆ ಮಾತನಾಡಿದ ಆಡಿಯೋ ಈಗ ಕನ್ನಡದ ವಿವಿಧ ದೃಶ್ಯ ಮಾದ್ಯಮಗಳ ಮೂಲಕ ವೈರಲ್ ಆಗುತ್ತಿದೆ. ಈ ಬಗ್ಗೆ ಪೀಪಲ್ ಮೀಡಿಯಾಗೆ ಸ್ಪಷ್ಟನೆ ನೀಡಿದ ರೂಪಾಲಿ ನಾಯಕ್ ಇದಿಷ್ಟು ಬಿಟ್ಟರೆ ಮತ್ತೆ ಯಾವ ಭ್ರಷ್ಟಾಚಾರವೂ ಇಲ್ಲ, ಏನೂ ಇಲ್ಲ. ತನ್ನ ಕ್ರಿಮಿನಲ್ ಚಟುವಟಿಕೆಗೆ ಕಮೀಷನರ್ ರವಿಕುಮಾರ್ ಬ್ರೇಕ್ ಹಾಕಿದ ಮತ್ತು ಗಡಿಪಾರಿಗೆ ವ್ಯವಸ್ಥೆ ಮಾಡಿದ ಕಾರಣಕ್ಕೆ ರವಿಕುಮಾರ್ ಮೇಲೆ ಇಲ್ಲದ ಆರೋಪ ಮಾಡಿದ್ದಾರೆ. ಜೊತೆಗೆ ದಸರಾ ಸಂದರ್ಭದಲ್ಲಿ ಅತಿಥಿಗಳ ಕರೆಯಲು ಮಾತನಾಡಿದ ಆಡಿಯೋ ಇಟ್ಟು ಭ್ರಷ್ಟಾಚಾರದ ವಿಚಾರಕ್ಕೆ ತಳುಕು ಹಾಕುವುದು ಎಷ್ಟು ಸರಿ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
‘ಬೇಕಾದರೆ ಈ ಬಗ್ಗೆ ತನಿಖೆ ಕೂಡಾ ನಡೆಯಲಿ. ಅದಕ್ಕೆ ಬೇಕಾದ ಸಾಕ್ಷ್ಯ ಕೊಡಲು ನಾನು ಸಿದ್ಧಳಿದ್ದೇನೆ. ಇವರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ನನ್ನ ಹೆಸರು ಕೆಡಿಸುವ ಕಾರ್ಯ ದಯವಿಟ್ಟು ನಿಲ್ಲಿಸಲಿ ಎಂದು ಮಣಿಕಂಠ ರಾಠೋಡ್ ಮತ್ತು ಮಾಧ್ಯಮಗಳ ಬಗ್ಗೆ ರೂಪಾಲಿ ನಾಯಕ್’ ಕಿಡಿಕಾರಿದ್ದಾರೆ.
ಇಲ್ಲಿ ಲಂಬಾಣಿ ನುಡಿಯಲ್ಲಿರುವ ಆಡಿಯೋ ತುಣುಕನ್ನು ಪೀಪಲ್ ಮೀಡಿಯಾ ಪರಿಶೀಲಿಸಿದೆ. ಅದರಲ್ಲಿ ರೂಪಾಲಿ ನಾಯಕ್ ಒಂದೆರಡು ಬಾರಿ ಕಾರ್ಯಕ್ರಮದ ಬಗ್ಗೆ ಮಾತಾಡಿದ್ದಾರೆ. ಸೆಲೆಬ್ರಿಟಿ ಎಂದು ಹೇಳಿದ್ದಾರೆ. ಅದು ಯಾವುದೋ ವೈಯಕ್ತಿಕ ವ್ಯವಹಾರ ಎನ್ನಲು ಯಾವುದೇ ಆಧಾರವಿಲ್ಲ. ಮಾಧ್ಯಮಗಳು ಈ ಆಡಿಯೋವನ್ನು ಸಂದರ್ಭದಿಂದ ಹೊರಗಿಟ್ಟು ಇದೊಂದು ಭ್ರಷ್ಟಾಚಾರ ಪ್ರಕರಣ ಎನ್ನುವಂತೆ ಪ್ರಸಾರ ಮಾಡಿವೆ. ಹಾಗಾದರೆ ಇದರಲ್ಲಿ ಮಣಿಕಂಠ ರಾಠೋಡ್ ಉದ್ದೇಶ ಏನಿರಬಹುದು.? ಸುಮಾರು ಎರಡು ತಿಂಗಳ ಹಿಂದೆ ಮಾತನಾಡಿದ ಆಡಿಯೋ ಇಟ್ಟು ಕಮೀಷನರ್ ಹೆಸರು ಕೆಡಿಸುವ ಉದ್ದೇಶದ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಂಕ್ಷಿಪ್ತವಾಗಿ ರೂಪಾಲಿ ನಾಯಕ್ ಅವರು ಕೊಟ್ಟ ಮಾಹಿತಿಯಂತೆ ಸ್ಪಷ್ಟವಾಗಿ ಇದೊಂದು ಹಿಟ್ ಅಂಡ್ ರನ್ ಕೇಸ್ ಅನ್ನೋದರಲ್ಲಿ ಎರಡು ಮಾತಿಲ್ಲ.
ಈ ಮೂಲಕ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿದ ಮಣಿಕಂಠ ರಾಠೋಡ್ ಗೆ ರಾಜಕೀಯವಾಗಿ ತಲೆದಂಡ ತೆರಬಹುದೇ? ಗೊತ್ತಿಲ್ಲ. ಆದರೆ ಕಳೆದ ಒಂದು ವಾರದಿಂದ ಬಿಜೆಪಿ ಪಕ್ಷಕ್ಕೆ ಸೇರುತ್ತಿರುವ ಕ್ರಿಮಿನಲ್ ಗಳ ಪಟ್ಟಿ ಮಾಡ್ತಾ ಹೋದರೆ ಆ ಪಟ್ಟಿಯಲ್ಲಿ ಮಣಿಕಂಠ ರಾಠೋಡ್ ಹೆಸರೂ ಸೇರ್ಪಡೆ ಆಗಲಿದೆ. ಆಡಳಿತಾರೂಢ ಬಿಜೆಪಿಗೆ ಇಂತವರೇ ಬೇಕಾ ಎಂಬುದು ಪ್ರಶ್ನಾರ್ಹ ವಿಚಾರವಾಗಿದೆ.