ಬೆಂಗಳೂರು : ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿರುವ ʼದಲಿತ ಸಾಂಸ್ಕೃತಿಕ ಪ್ರತಿರೋಧʼ ಸಮಾವೇಶಕ್ಕೆ ಬೆಂಬಲವಾಗಿ ಭಾನುವಾರದಂದು ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ.
ಡಿಸೆಂಬರ್ 4, ಸಂಜೆ 5 ಗಂಟೆಗೆ ಟ್ವಿಟರ್ ಅಕೌಂಟ್ ಇರುವ ಸಮಾಜಮುಖಿ ಸ್ನೇಹಿತರೆಲ್ಲರೂ ಸೇರಿ ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ʼದಲಿತ ಸಾಂಸ್ಕೃತಿಕ ಪ್ರತಿರೋಧʼಕ್ಕೆ ಎಲ್ಲರೂ ಬೆಂಬಲ ನೀಡುವಂತೆ ಟ್ವಿಟರ್ ಆಂದೋಲನ ನಡೆಸಲಾಗುತ್ತಿದೆ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್ 6ರಂದು “ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ” ಹಮ್ಮಿಕೊಂಡಿದ್ದು, ದೇಶದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ಹಾಳು ಮಾಡುತ್ತಿರುವ RSS, BJP ದುರಾಡಳಿತದ ವಿರುದ್ದ ಜನರೊಡನೆ ಧ್ವನಿ ಎತ್ತಲು ರಾಜ್ಯ ಮಟ್ಟದ ʼದಲಿತ ಸಾಂಸ್ಕೃತಿಕ ಪ್ರತಿರೋಧʼ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು, ಇದಕ್ಕೆ ಬೆಂಬಲವಾಗಿ ನಾಳೆ ಸಂಜೆ ಟ್ವಿಟರ್ ಸ್ಟಾರ್ಮ್ ಮಾಡಲಾಗತ್ತಿದ್ದು, ಸಂವಿಧಾನ ರಕ್ಷಣೆಗಾಗಿ ಜೊತೆಯಾಗಿ ಪ್ರೀತಿ ಹಂಚಲು ಕೈ ಜೋಡಿಸಿ ಎಂದು ಕೋರಿದ್ದಾರೆ.
ಡಿಸೆಂಬರ್ 6 ರಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಹಮ್ಮಿಕೊಂಡಿರುವ ದಲಿತರ ಸಾಂಸ್ಕೃತಿಕ ಪ್ರತಿರೋಧ ಐಕ್ಯತಾ ಸಮಾವೇಶ ಕರ್ನಾಟಕದಲ್ಲಿ ಈಗಾಗಲೇ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ನಾಡಿನ ಮೂಲೆಮೂಲೆಗಳಿಂದ ಜನ ಇದರಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.
ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಕೋಮುವಾದ, ಜಾತಿವಾದಗಳ ವಿರುದ್ಧ ದಲಿತರು ಒಂದಾಗಿ ನಡೆಸುತ್ತಿರುವ ಈ ಸಮಾವೇಶದಲ್ಲಿ ನಾಡಿನ ಎಲ್ಲಾ ಜಾತಿಗಳ ಪ್ರಗತಿಪರರು ಭಾಗವಹಿಸುತ್ತಿದ್ದಾರೆ.