ದೆಹಲಿ: ಚುನಾವಣೆಯಲ್ಲಿ ಮತಗಳ ಕಳ್ಳತನ ಮಾಡಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಅಧಿಕಾರದಲ್ಲಿರುವ ಬಿಜೆಪಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದೆ ಎಂದು ಮತ್ತೊಮ್ಮೆ ಆರೋಪಿಸಿದರು. ಚುನಾವಣೆಗಳು ಯಾವಾಗ ನಡೆದರೂ, ಅದರ ದಿನಾಂಕವನ್ನು ಚುನಾವಣಾ ಆಯೋಗದ ಬದಲಿಗೆ ಬಿಜೆಪಿಯೇ ನಿರ್ಧರಿಸುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು. ಮತಗಳ ಕಳ್ಳತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಏಕೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಪ್ರಶ್ನಿಸಿದರು. ‘ವೋಟರ್ ಅಧಿಕಾರ ಯಾತ್ರೆ’ಯ ಭಾಗವಾಗಿ ಬಿಹಾರದಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ ಅವರು ಮಂಗಳವಾರ ಮಧುಬನಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಎನ್ಡಿಎ ಸರ್ಕಾರ ಇನ್ನೊಂದು 40 ವರ್ಷ ಅಧಿಕಾರದಲ್ಲಿ ಇರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ, ಇದು ಅವರಿಗೆ ಹೇಗೆ ಗೊತ್ತು ಎಂದು ರಾಹುಲ್ ಪ್ರಶ್ನಿಸಿದರು. ಮತಗಳನ್ನು ಕದಿಯುವ ಮೂಲಕ ಎಷ್ಟು ವರ್ಷಗಳಾದರೂ ಅಧಿಕಾರದಲ್ಲಿ ಇರಬಹುದು ಎಂದು ವ್ಯಂಗ್ಯವಾಡಿದರು. ಕೆಲವು ವರ್ಷಗಳ ಹಿಂದೆ ಗುಜರಾತ್ ಚುನಾವಣೆಯಲ್ಲಿ ಆರಂಭವಾದ ಈ ಮತಗಳ ಕಳ್ಳತನ ಈಗ ಕೇಂದ್ರ ಸರ್ಕಾರದವರೆಗೆ ತಲುಪಿದೆ ಎಂದು ಅವರು ಹೇಳಿದರು. ಪ್ರತಿ ರಾಜ್ಯದಲ್ಲಿಯೂ ಚುನಾವಣೆಗೆ ಮೊದಲು ಚುನಾವಣಾ ದಿನಾಂಕಗಳನ್ನು ಕಡ್ಡಾಯವಾಗಿ ಬದಲಾಯಿಸಲಾಗುತ್ತದೆ ಎಂದು ಆರೋಪಿಸಿದರು.
ಈ ಬಗ್ಗೆ ಯಾರೂ ಪ್ರಶ್ನಿಸದಂತೆ ಮತ್ತು ಎಷ್ಟು ಅಕ್ರಮಗಳು ನಡೆದರೂ ಚುನಾವಣಾ ಆಯೋಗದ ವಿರುದ್ಧ ಪ್ರಕರಣ ದಾಖಲಿಸದಂತೆ ಕಾನೂನು ತಂದಿದ್ದಾರೆ ಎಂದು ರಾಹುಲ್ ಹೇಳಿದರು. ಮಹಾರಾಷ್ಟ್ರ, ಕರ್ನಾಟಕ, ಮಣಿಪುರದಂತಹ ರಾಜ್ಯಗಳಲ್ಲಿ ಎಲ್ಲಿ ಹೊಸ ಮತದಾರರು ಬಂದಿದ್ದಾರೋ ಅಲ್ಲಿ ಬಿಜೆಪಿಗೆ ವಿಜಯ ಸಾಧಿಸಿದೆ ಎಂದು ಹೇಳಿದರು. ಚುನಾವಣಾ ಆಯೋಗದ ಅಧಿಕಾರಿಗಳು ಒಂದು ಬಾರಿ ಅಲ್ಲ, ಎರಡು ಬಾರಿ ಯೋಚಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು. ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಿದವರ ವಿರುದ್ಧ ಯಾವುದೇ ಸಮಯದಲ್ಲಿಯಾದರೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಹಾರದ ಜನರ ಮತದಾನ ಹಕ್ಕನ್ನು ರಕ್ಷಿಸಲು ‘ಇಂಡಿಯಾ’ ಒಕ್ಕೂಟ ಎಷ್ಟಾದರೂ ದೂರ ಹೋಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಆರೆಸ್ಸೆಸ್ ಸಂವಿಧಾನವನ್ನು ಎಂದಿಗೂ ಗೌರವಿಸಿಲ್ಲ, ಅದು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದರು. ಈಗ ನಾವು ಮತದಾನದ ಹಕ್ಕನ್ನು ಕಳೆದುಕೊಂಡರೆ, ಸಂವಿಧಾನವನ್ನು ಎಂದಿಗೂ ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.