ರಾಜ್ಯ ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಬುಗಿಲೇಳುತ್ತಿದೆ. ಅದರಲ್ಲೂ ಜೆಡಿಎಸ್ ಜೊತೆಗಿನ ಮೈತ್ರಿ ಕಾರಣಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದವರಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಬಿಜೆಪಿ ಪಕ್ಷದ ವಿರುದ್ಧ ಕೆಂಡ ಕಾರುತ್ತಲೇ ಬರುತ್ತಿದ್ದಾರೆ.
ಈಗ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಪಕ್ಷದ ವೇದಿಕೆ ಹಂಚಿಕೊಂಡಿದ್ದಾರೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್. ಸಧ್ಯ ಈ ಒಂದು ಬೆಳವಣಿಗೆ ಬಿಜೆಪಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಸಮಾಧಾನ ಇರುವುದು ನಿಜ. ಅದರ ಜೊತೆಗೆ ಬಿಜೆಪಿ ಪಕ್ಷ ಈಗ ಎಸ್.ಟಿ ಸೋಮಶೇಖರ್ ಮೇಲೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.
ಅಂದಹಾಗೆ ಇದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ಪದ್ಮನಾಭನಗರದ ಸ್ಥಳೀಯ ಪ್ರಭಾವಿ ಮುಖಂಡರಾಗಿರುವ ಎಲ್.ಶ್ರೀನಿವಾಸ್ ಅವರ 60 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮ ಖಾಸಗಿ ಆದರೂ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಫೋಟೊ ಇದ್ದ ವೇದಿಕೆ.
ಮೇಲಾಗಿ ವೇದಿಕೆಯ ತುಂಬೆಲ್ಲಾ ಇದ್ದದ್ದು ಕಾಂಗ್ರೆಸ್ ನಾಯಕರೇ. ಅದರಲ್ಲಿ ಪ್ರಮುಖವಾಗಿ ಸಚಿವ ರಾಮಲಿಂಗಾರೆಡ್ಡಿ, ಸಂಸದರಾದ ಡಿ.ಕೆ.ಸುರೇಶ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ದಂಡೇ ಕಾರ್ಯಕ್ರಮದಲ್ಲಿತ್ತು.
ಸಧ್ಯ ಈ ಒಂದು ಬೆಳವಣಿಗೆ ಈಗ ಬಿಜೆಪಿ ಪಾಳಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಎಸ್.ಟಿ.ಸೋಮಶೇಖರ್ ಕೂಡಾ ಆಗಿದ್ದಾಗಲಿ ಎಂದು ಯಾವ ಮುಲಾಜೂ ಇಲ್ಲದೆ ಕಾಂಗ್ರೆಸ್ ಪಕ್ಷದ ವೇದಿಕೆ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ನೋಡಿದರೆ ಎಸ್.ಟಿ.ಸೋಮಶೇಖರ್ ಸಧ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಿರಬಹುದು ಎಂಬ ಅನುಮಾನ ಮೂಡದಿರದು.