Home ಬೆಂಗಳೂರು ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅಪಮಾನ ಆರೋಪ: ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ವಿರುದ್ಧ ಮಲ್ಲೇಶ್ವರಂ ಠಾಣೆಗೆ ದೂರು

ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅಪಮಾನ ಆರೋಪ: ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ವಿರುದ್ಧ ಮಲ್ಲೇಶ್ವರಂ ಠಾಣೆಗೆ ದೂರು

0

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಹಾಗೂ ರಾಷ್ಟ್ರಗೀತೆ ಗಾಯನದ ವೇಳೆ ಅಶಿಸ್ತು ತೋರಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಎನ್. ರವಿಕುಮಾರ್ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಅವರ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳ ನಿಯೋಗವು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ನೀಡಿದೆ. ಆಗಸ್ಟ್ 15 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಗಾಯನದ ವೇಳೆ ಎನ್. ರವಿಕುಮಾರ್ ಅವರು ನಿಯಮಾನುಸಾರ ನಡೆದುಕೊಳ್ಳದೆ, ಆರ್‌ಎಸ್‌ಎಸ್ ನಮಸ್ತೆ ಭಂಗಿಯಲ್ಲಿ ನಿಲ್ಲುವ ಮೂಲಕ ರಾಷ್ಟ್ರೀಯ ಗೌರವಗಳಿಗೆ ಅಪಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಸ್ವತಃ ರಾಷ್ಟ್ರೀಯ ಗೌರವಗಳಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ದೂರಲಾಗಿದ್ದು, ಧ್ವಜ ಸಂಹಿತೆ ಉಲ್ಲಂಘನೆ ಹಾಗೂ ರಾಷ್ಟ್ರಗೀತೆಗೆ ಅಗೌರವ ತೋರಿದ ಪ್ರಕರಣದಡಿ ಎನ್. ರವಿಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

You cannot copy content of this page

Exit mobile version