ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ಎಸ್ಎಸ್ (RSS) ಪಥಸಂಚಲನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮತಿ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಮಕ್ಕಳು ಸಹ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದ ಅವರು, “ಬಿಜೆಪಿ ನಾಯಕರ ಮಕ್ಕಳು ಆರ್ಎಸ್ಎಸ್ಗೆ ಹೋಗುತ್ತಾರೆ. ಸಿ.ಟಿ. ರವಿ ಅವರ ಮಕ್ಕಳು ಹೋಗಿದ್ದರು, ನನ್ನ ಮಕ್ಕಳು ಹೋಗಿದ್ದರು,” ಎಂದರು. ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಸವಾಲೆಸೆದ ಅಶೋಕ್, “ನೀವು ರಸ್ತೆ ಚಳುವಳಿ ಮಾಡಿದ್ರಾ? ನಿಮ್ಮವರು ಮಾಡಿದ್ರಾ? ಹನುಮಧ್ವಜ ಹೋರಾಟದಲ್ಲಿ ನನ್ನ ಮಗ ಭಾಗಿಯಾಗಿದ್ದ. ನಿಮ್ಮ ಮಕ್ಕಳು ದಲಿತ ಸಂಘಟನೆ ಪರವಾಗಿ ಭಾಗವಹಿಸಿದ್ದಾರಾ?” ಎಂದು ಪ್ರಶ್ನಿಸಿದರು.
‘2028ಕ್ಕೆ ಕಾಂಗ್ರೆಸ್ ಬ್ಯಾನ್ ಮಾಡುತ್ತೇವೆ’
ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅಶೋಕ್, “ಮುಂದಿನ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಆಗ ನಾವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತೇವೆ,” ಎಂದು ಸ್ಫೋಟಕ ಹೇಳಿಕೆ ನೀಡಿದರು. ಶಾಸಕ ಕೆ.ಎನ್. ರಾಜಣ್ಣ ಅವರ ನಮಾಜ್ ಹೇಳಿಕೆ ಬಗ್ಗೆಯೂ ಪ್ರಸ್ತಾಪಿಸಿದ ಅವರು, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೂ ಸಹ ಆರ್ಎಸ್ಎಸ್ ಬ್ಯಾನ್ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ಮೇಲೆ ಕೋಪವಿದ್ದರೆ ತಮ್ಮ ಮೇಲೆ ತೀರಿಸಿಕೊಳ್ಳಲಿ ಎಂದು ಸವಾಲು ಹಾಕಿದ ಅಶೋಕ್, ಕಾಂಗ್ರೆಸ್ ಬೆಂಬಲಿಗರು ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಆಗ ಅವರ ಬಾಯಲ್ಲಿ ಏನು ಇಟ್ಟುಕೊಂಡಿದ್ದರು? ಎಂದು ಪ್ರಶ್ನಿಸಿದರು. “ಅನುಮತಿ ತೆಗೆದುಕೊಳ್ಳದೆ ರಸ್ತೆ ಬಂದ್ ಮಾಡುತ್ತಾರೆ. ನಾವು ಯಾವತ್ತಾದರೂ ಬ್ಯಾನ್ ಮಾಡಿದ್ವಾ?” ಎಂದು ಕೇಳಿದರು. ಪುರಸಭೆಯಿಂದ ಆರ್ಎಸ್ಎಸ್ ಅನುಮತಿ ಪಡೆದುಕೊಂಡಿತ್ತು. ನಮ್ಮ ಸರ್ಕಾರ ಇದ್ದಾಗ ಅವರನ್ನು ಒಂದು ದಿನವೂ ತೆಗೆದು ಹಾಕಿಲ್ಲ,” ಎಂದು ಆರ್. ಅಶೋಕ್ ತಿಳಿಸಿದರು.