Home ಸಿನಿಮಾ ಬಾಲಿವುಡ್‌ನ ಉಪ್ಪಿ ಈಗ ಕನ್ನಡದಲ್ಲಿ : ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ನಟನೆ

ಬಾಲಿವುಡ್‌ನ ಉಪ್ಪಿ ಈಗ ಕನ್ನಡದಲ್ಲಿ : ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ನಟನೆ

0

ಮರಾಠಿಯ ಚಿತ್ರರಂಗದಲ್ಲಿ ತಮ್ಮ ಅಭಿನಯದ‌ ಮೂಲಕ ಹೆಸರು‌ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಉಪೇಂದ್ರ ಲಿಮಯೆ ಈಗ ಕನ್ನಡ‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾ ಗೆಲುವಿನ ಬಳಿಕ ಅವರು ಈಗ ಸಾಲು ಸಾಲು ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಉಪೇಂದ್ರ ಲಿಮಯೆ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುತ್ತಿದ್ದು, ನಿರ್ದೇಶಕ ಕಿಶೋರ್ ಭಾರ್ಗವ್ ಅವರು ಕನ್ನಡ ಚಿತ್ರಪ್ರೇಮಿಗಳಿಗೆ ಇವರನ್ನು ಪರಿಚಯಿಸಲು ಹೊರಟಿದ್ದಾರೆ.

ರಾಮ್ ಗೋಪಾಲ್ ವರ್ಮಾ ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿ‌ ಕನ್ನಡದಲ್ಲಿ ಸ್ಟಾಕರ್ ಎಂಬ ಸಿನಿಮಾ ನಿರ್ದೇಶಿಸಿರುವ ಕಿಶೋರ್ ಭಾರ್ಗವ್ ಮತ್ತೊಂದು ಚಿತ್ರ‌ ನಿರ್ದೇಶನ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕವಲುದಾರಿ, ಆಪರೇಷನ್ ಅಲುಮೇಲಮ್ಮ ಸಿನಿಮಾಗಳ ಖ್ಯಾತಿಯ ರಿಷಿ ನಾಯಕರಾಗಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಉಪೇಂದ್ರ ಲಿಮಯೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಚಿತ್ರರಂಗದ ಪಾದಾರ್ಪಣೆ ಬಗ್ಗೆ ಮಾತನಾಡಿರುವ ಉಪೇಂದ್ರ ಲಿಮಯೆ ಅವರು, ಕನ್ನಡದಲ್ಲಿ ಮಾತು ಶುರು ಮಾಡಿ ಕನ್ನಡ ನನ್ನ ತಾಯಿ ಭಾಷೆ ಹಾಗೂ ಪ್ರೀತಿ ಭಾಷೆ. ನಾನು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚಿತ್ರದ ಕಂಟೆಂಟ್ ಚೆನ್ನಾಗಿದೆ. ಕಿಶೋರ್ ಭಾರ್ಗವ್ ಪ್ರಾಮಿಸಿಂಗ್ ಡೈರೆಕ್ಟರ್. ಒಂದೊಳ್ಳೆ ತಂಡದ ಜೊತೆ, ಒಂದೊಳ್ಳೆ ಕಥೆಯಲ್ಲಿ ಅದ್ಭುತ ಪಾತ್ರ ಮಾಡುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.

ಹ್ಯಾಂಗೆಸ್ ಸಾಯಿ ವಿಷನ್ ಹಾಗೂ ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್-2 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಕಿಶೋರ್ ಭಾರ್ಗವ್ ಮತ್ತು ಸೋಮಶೇಖರ್ ಎನ್ ಕರಡಿ ಸಿನಿಮಾಗೆ ಕಥೆ ಬರೆದಿದ್ದು, ಶ್ರೀಶ್ ತೋಮರ್ ಛಾಯಾಗ್ರಹಣ, ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಹಾಗೂ ಸ್ಮಿತಾ ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಕ್ಟೋಬರ್ ಎರಡನೇ ವಾರದಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

You cannot copy content of this page

Exit mobile version