PEEPAL MEDIA BIG IMPACT
ಬೆಂಗಳೂರು: ಆಯ್ದ ಪತ್ರಕರ್ತರಿಗೆ, ಪತ್ರಿಕಾಸಂಸ್ಥೆಗಳಿಗೆ ದೀಪಾವಳಿ ಪ್ರಯುಕ್ತ ಸಿಹಿತಿಂಡಿ ನೀಡುವುದರ ಜೊತೆ ಲಕ್ಷಾಂತರ ರುಪಾಯಿ ಹಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿಯವರಿಗೆ ದೂರು ನೀಡಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ಈ ದೂರು ನೀಡಿದ್ದು, ಮುಖ್ಯಮಂತ್ರಿಗಳು ಮತ್ತು ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ದೀಪಾವಳಿ ಹೆಸರಿನಲ್ಲಿ ಪತ್ರಕರ್ತರಿಗೆ ತಲಾ ಲಕ್ಷಾಂತರ ರೂಪಾಯಿ ಹಣವನ್ನು ಕೊಡುಗೆಯಾಗಿ ನೀಡಿರುವ ಕುರಿತು ಇಂದು ಬೆಳಿಗ್ಗೆ ʻಪೀಪಲ್ ಮೀಡಿಯಾʼ ಸ್ಫೋಟಕ ವರದಿಯನ್ನು ಮಾಡಿತ್ತು. ಪ್ರಕರಣದ ಕುರಿತು ಹಿರಿಯ ಪತ್ರಕರ್ತರು, ಪ್ರಾಮಾಣಿಕ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷವೂ ಕೂಡ ಪತ್ರಕರ್ತರಿಗೆ ಹಣ ನೀಡಿದ್ದರ ಕುರಿತು ಟೀಕೆ ಮಾಡಿತ್ತು.
ಪ್ರತಿಷ್ಠಿತ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯ ಪ್ರಧಾನ/ಮುಖ್ಯ ವರದಿಗಾರರಿಬ್ಬರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ದೀಪಾವಳಿ ಹಬ್ಬದ ಸೋಗಿನಲ್ಲಿ ಸ್ವೀಟ್ ಬಾಕ್ಸ್ನೊಂದಿಗೆ ಒಂದು ಲಕ್ಷ ರೂ. ನಗದನ್ನು ನೀಡಿದ್ದಾರೆ. ಆದರೆ ಇದು ಅವರ ಗಮನಕ್ಕೆ ಬಂದ ಕೂಡಲೇ ಹಿಂದಕ್ಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮುಖ್ಗಮಂತ್ರಿಗಳ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ, ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣ ನೀಡಲಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದಂತಾಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾಗಿದೆ, ಅಲ್ಲದೆ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ, ಸರ್ಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ವಿವರಿಸಿದೆ.
ಕೆಳಗಿನ ಸುದ್ದಿಗಳನ್ನೂ ಓದಿ
>> ಶಾಕಿಂಗ್ ನ್ಯೂಸ್: ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ತಲಾ 2.5 ಲಕ್ಷ ರುಪಾಯಿ ಗಿಫ್ಟ್!