Friday, April 26, 2024

ಸತ್ಯ | ನ್ಯಾಯ |ಧರ್ಮ

ದೊಡ್ಡಬಳ್ಳಾಪುರ | ಐಸ್‌ಕ್ರೀಮ್‌ ಲಾರಿ ದರೋಡೆ; ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಭಾನುವಾರ ಮುಂಜಾನೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳ ಚಾಲಕರ ಮೇಲೆ ಹಲ್ಲೆ ನಡೆಸಿ ಒಂದು ವಾಹನಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿತರಾಗಿರುವ ಶ್ರೀರಾಮ ಸೇನೆಗೆ ಸೇರಿದ ಗೋರಕ್ಷಕರ ಗುಂಪು ಇದೀಗ ಐಸ್‌ಕ್ರೀಂ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನಿಂದ ₹89,800 ದರೋಡೆ ಮಾಡಿದ್ದಾರೆ. ದನದ ಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ಧ್ವಂಸ ಮಾಡುವ ಗಂಟೆಗಳ ಮೊದಲು ಅವರು ಅದೇ ರಸ್ತೆಯಲ್ಲಿ ಐಸ್ ಕ್ರೀಮ್ ಗಾಡಿ ಚಾಲಕನನ್ನು ದರೋಡೆ ಮಾಡಿದ್ದರು.

ಆಂಧ್ರಪ್ರದೇಶದ ಕರ್ನೂಲ್‌ನ ಕೃಷ್ಣಾ ಐಸ್‌ಕ್ರೀಂ ಫ್ಯಾಕ್ಟರಿಯ ಕಿಶನ್ ಲಾಲ್ ಜಾಟ್ (19) ಎಂಬವರು ನೀಡಿದ ದೂರಿನ ಆಧಾರದ ಮೇಲೆ ಸೋಮವಾರದಂದು ಪೊಲೀಸರು ಆರೋಪಿಗಳಾದ ಮಂಜುನಾಥ್ ನಾಯ್ಕ್, ದೇವರಾಜು, ಪುನಿತ್, ಪವನ್ ಎಂಬುವವರ ವಿರುದ್ಧ ಡಕಾಯಿತಿ, ಗಲಭೆ, ಅಕ್ರಮ ತಡೆ ಮತ್ತು ಅಕ್ರಮ ಗುಂಪು ಸೇರುವಿಕೆ ಆರೋಪಗಳನ್ನು ಹೊರಿಸಿದ್ದಾರೆ.

ಸಂತ್ರಸ್ತ ಕೃಷ್ಣಲಾಲ್ ಚಿಲ್ಲರೆ ಅಂಗಡಿಗಳಿಗೆ ಐಸ್ ಕ್ರೀಂ ಪ್ಯಾಕ್ ಪೂರೈಸಲು ಗುಂತಕಲ್‌ನಿಂದ ಗೌರಿಬಿದನೂರಿಗೆ ಹೋಗುತ್ತಿದ್ದರು. ಗೌರಿಬಿದನೂರಿಗೆ ತೆರಳುತ್ತಿದ್ದಾಗ 8 ಮಂದಿಯ ತಂಡವು ಭಾನುವಾರ ಮಧ್ಯರಾತ್ರಿ 1.30ರ ಸುಮಾರಿಗೆ ವಾಹನವನ್ನು ತಡೆದು ನಿಲ್ಲಿಸಿ, ಆತನನ್ನು ಹೊರಗೆಳೆದು ಹಲ್ಲೆ ನಡೆಸಿ, ಗ್ರಾಹಕರಿಗೆ ಐಸ್‌ಕ್ರೀಮ್ ಮಾರಾಟ ಮಾಡಿದ ನಗದನ್ನು ಅವರ ಜೇಬಿನಿಂದ ದೋಚಿ ಪರಾರಿಯಾಗಿದ್ದಾರೆ.

ಬಳಿಕ ಆರೋಪಿಗಳು ವಾಹನವನ್ನು ಪರಿಶೀಲಿಸಿ ಐಸ್ ಕ್ರೀಂ ಪ್ಯಾಕುಗಳೆಂದು ದೃಢಪಡಿಸಿಕೊಂಡು ಆತನನ್ನು ಬಿಟ್ಟು ಹೋಗಿದ್ದಾರೆ. ಗಾಬರಿಗೊಂಡ ಕಿಶನ್‌ಲಾಲ್ ಕರ್ನೂಲ್‌ನಲ್ಲಿರುವ ತನ್ನ ಮಾಲೀಕರಿಗೆ ಕರೆ ಮಾಡಿ ಸಂಕಷ್ಟವನ್ನು ವಿವರಿಸಿದ್ದಾನೆ. ಅವರ ಸಲಹೆ ಮೇರೆಗೆ ಬೆಂಗಳೂರಿನಲ್ಲಿರುವ ಸಂಬಂಧಿ ಮೋಹನ್ ಅವರ ಮನೆಗೆ ವಿಶ್ರಾಂತಿ ಪಡೆಯಲು ತೆರಳಿದ್ದರು. ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಾಗ, ತನ್ನನ್ನು ದರೋಡೆ ಮಾಡಿದ ಅದೇ ಜನರು ಗೋಮಾಂಸ ಸಾಗಾಟದ ಆರೋಪ ಹೊರಿಸಿ ಜನರ ಮೇಲೆ ಹಲ್ಲೆ ನಡೆಸಿ ವಾಹನವೊಂದಕ್ಕೆ ಬೆಂಕಿ ಹಚ್ಚುವುದನ್ನು ಗಮನಿಸಿದರು.

ಕಿಶನ್‌ಲಾಲ್ ಮತ್ತು ಅವರ ಸಂಬಂಧಿ ದೊಡ್ಡಬಳ್ಳಾಪುರ ಪಟ್ಟಣ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೃಢೀಕರಣಕ್ಕಾಗಿ ಬಂಧಿಸಲಾದ ಆರೋಪಿಗಳ ಛಾಯಾಚಿತ್ರಗಳನ್ನು ಪೊಲೀಸರು ಅವರಿಗೆ ತೋರಿಸಿದರು, ಅವರು ಚಿತ್ರಗಳನ್ನು ನೋಡಿ ಆರೋಪಿಗಳ ಗುರುತನ್ನು ದೃಢಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು