ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ಗೆ ರೈಲಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗಕ್ಕೆ ಹಾನಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್ನ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಎಮ್ಮೆಗಳಿಗೆ ಡಿಕ್ಕಿ ಹೊಡೆದ ನಂತರ ಹಾನಿಗೊಳಗಾದ ಸೆಮಿ-ಹೈ ಸ್ಪೀಡ್ ರೈಲಿನ ಮುಂಭಾಗದ ಕೋನ್ ಕವರ್ ಅನ್ನು ಮುಂಬೈನಲ್ಲಿ ಹೊಸದಾಗಿ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಾಗಿ ಪ್ರಾರಂಭಿಸಲಾದ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿದ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘‘ನಾಲ್ಕು ಎಮ್ಮೆಗಳು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಅಪಘಾತ ಸಂಭವಿಸಿದ ದಿನ ಗುರುವಾರ ಸಂಜೆ ಎಫ್ಐಆರ್ ದಾಖಲಾಗಿದೆ. ಇದುವರೆಗೆ ಎಮ್ಮೆಗಳ ಮಾಲೀಕರನ್ನು ಗುರುತಿಸಲು ರೈಲ್ವೆ ಪೊಲೀಸರಿಗೆ ಸಾಧ್ಯವಾಗಿಲ್ಲ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೇ ಕಾಯಿದೆ, 1989 ರ ಸೆಕ್ಷನ್ 147 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದು ರೈಲ್ವೆಯ ಯಾವುದೇ ಭಾಗಕ್ಕೆ ಹಾನಿ ಆದ ಬಗ್ಗೆ ಮತ್ತು ರೈಲ್ವೇ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ದಾಖಲಾಗುವ ಪ್ರಕರಣವಾಗಿದೆ.