ತೆಂಕಾಶಿ-ತಮಿಳುನಾಡು: ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ಶಾಲಾ ಮಕ್ಕಳಿಗೆ ಅಂಗಡಿ ಮಾಲೀಕ ತಿಂಡಿ ನೀಡಲು ನಿರಾಕರಿಸಿ ಜಾತಿ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಅಧಿಕಾರಿಗಳು ಘಟನೆ ನಡೆದಿರುವ ಸ್ಥಳವಾದ ತಮಿಳುನಾಡಿನ ತೇನ್ಕಾಶಿಯ ಶಂಕರಕೋಯಿಲ್ ಬಳಿಯ ಪಂಚಕಲಂಗೆ ತೆರಳಿ ಅಂಗಡಿಯನ್ನು ಸೀಲ್ ಮಾಡಿದ್ದಾರೆಂದು ದಿ ಮಿನಿಟ್ ನ್ಯೂಸ್ ವರದಿ ಮಾಡಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹೇಶ್ವರನ್ ಶಾಲಾ ಮಕ್ಕಳ ವಿರುದ್ಧ ಅಂಗಡಿ ಮಾಲೀಕನು ಜಾತಿ ನಿಂದನೆ ಮಾಡಿದ್ದು, ಅಂಗಡಿಗೆ ಮತ್ತೆ ಬರಬೇಡಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ವ್ಯಾಪಕ ಆಗ್ರಹ ವ್ಯಕ್ತವಾಗಿದೆ.
ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕ ಸೇರಿದಂತೆ ಮತ್ತೊಬ್ಬ ವ್ಯಕ್ತಿ ರಾಮಚಂದ್ರನ್ ಅಲಿಯಾಸ್ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದು, ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.