ಡಿ.ಹೆಚ್.ಎಸ್ ದಲಿತ ಹಕ್ಕುಗಳ ಸಮಿತಿಯ ನಿಯೋಗ ಬೇಟಿ
ಹಾಸನ : ಹೊಳೆನರಸೀಪುರ ತಾಲ್ಲೂಕು, ಹಳ್ಳಿ ಮೈಸೂರಿನಲ್ಲಿ ಇರುವ ತಮ್ಮ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ(ಎಸ್.ಸಿ) ಸಮುದಾಯಕ್ಕೆ ಸೇರಿದ ಪರಮೇಶ್ ಜಿ.ಕೆ ಎಂಬುವವರು ಕಳೆದ 4 ವರ್ಷಗಳಿಂದ ಪರಿಚಾರಕರಾಗಿ (ಅಟೆಂಡರ್) ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಮೇಲೆ ಅದೇ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಬಿ.ಡಿ ಮತ್ತು ಡಾ. ಚಂದ್ರಶೇಖರ್ ಎಚ್.ಆರ್ ಎಂಬುವವರು ಹಲವು ತಿಂಗಳುಗಳಿಂದ ಪರಮೇಶ್ ರವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮಧ್ಯಾನ್ಹದ ಊಟದ ಸಂದರ್ಭಗಳಲ್ಲಿ ಕೀಳು ಜಾತಿಯವನು ಹೇಗೆ ನಮ್ಮ ಜೊತೆಯಲ್ಲೇ ಒಟ್ಟಿಗೆ ಊಟ ಮಾಡುತ್ತಾನೆ ಎಂದು ಸಹಿಸದೆ ಕುಯ್ಯುಕ್ತಿಯಿಂದ ಹಲವು ನೆಪಗಳನ್ನೊಡ್ಡಿ ಪರಮೇಶ್ ಊಟ ಮಾಡುವುದನ್ನು ತಪ್ಪಿಸಿರುತ್ತಾರೆ. ಜೊತೆಗೆ ಕುರ್ಚಿ ಮೇಲೆ ಕೂರುವುದನ್ನು ಸಹಿಸದಿರುವುದು, ನಾಯಿಗೆ ನಿಂದಿಸುವ ನೆಪದಲ್ಲಿ ಮಾರ್ಮಿಕವಾಗಿ ಬಯ್ಯುವುದು ಸೇರಿದಂತೆ, ನಾವು ಒಬ್ಬ ಎಸ್.ಸಿ (ಪರಿಶಿಷ್ಟ ಜಾತಿ) ಯವನ ಜೊತೆ ಕೂರಬೇಕಾ ಎಂದು ಸಾರ್ವಜನಿಕವಾಗಿ ಅವರಿವರ ನೆಪದಲ್ಲಿ ನಿಂದಿಸಿ, ಜಾತಿಯತೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದುದು ತಿಳಿದು ಬಂದಿದೆ. ತದನಂತರ ಕವಿತ ಮತ್ತು ಚಂದ್ರಶೇಖರ್ ದಿನಾಂಕ: 20/03/2025 ರಂದು ಪರಮೇಶ್ ರವರ ಮಾನಕ್ಕೆ ಕುಂದುಂಟಾಗುಂತೆ ಮತ್ತೊರ್ವರ ಸಮ್ಮುಖದಲ್ಲಿ ಜಾತಿಯ ಹೆಸರು ಹಿಡಿದು ಅಪಮಾನಿಸಿ ಮಾತನಾಡಿದ್ದಾರೆ.
ಈ ಬಗ್ಗೆ ಕವಿತ ಬಿ.ಡಿ ರವರು ನೀನು ಪ್ರಾಂಶುಪಾಲರು ಅಥವಾ ಪೊಲೀಸ್ ಗೆ ದೂರು ನೀಡಲು ಮುಂದಾದರೆ, ನಾನು ಹೇಗಿದ್ದರೂ ಹೆಂಗಸು ಬೇರೆ ಕೇಸನ್ನೇ ಕೊಡುತ್ತೇನೆಂದು ಮತ್ತು ನಿನ್ನನ್ನು ಇಲ್ಲಿ ಇರುಲು ಬಿಡುವುದಿಲ್ಲ. ಬೇರೆ ಕಡೆಗೆ ವರ್ಗಾವಣೆ ಮಾಡಿಸುತ್ತೇನೆಂದು ಬೆದರಿಕೆ ಹಾಕುವುದರ ಜೊತೆಗೆ ನೀನು ನಮ್ಮಂಥವರೊಂದಿಗೆ ಕೆಲಸ ಅರ್ಹನಲ್ಲ, ಎಲ್ಲಾದರೂ ಹೋಗಿ ಸಾಯಿರಿ ಎಂದು ಪರಮೇಶ್ ಅವರ ಜಾತಿ ಹೆಸರನ್ನು ಕೀಳಾಗಿ ಬಳಸಿ ಅಪಮಾನಿಸಿ ತೊಂದರೆ ನೀಡಿರುತ್ತಾರೆ. ಈ ಘಟನೆಯಿಂದ ನೊಂದ ಪರಮೇಶ್ ರವರು ಕವಿತ.ಬಿ.ಡಿ ಮತ್ತು ಡಾ.ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ ದಿನಾಂಕ 20.03.2025 ರಂದು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ಮಾಡಲಾಗಿರುತ್ತದೆ.ಘಟನೆ ಇಷ್ಟು ದಿನವಾದರೂ ವಿ.ವಿ ಕೇಂದ್ರದಿಂದ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ನಿರ್ಲಕ್ಷ್ಯತನವಾಗಿರುತ್ತದೆ. ನಂತರ ಶಾಸಕ ಎ. ಮಂಜು ರವರು ಕಾಲೇಜಿಗೆ ಬೇಟಿ ನೀಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬದಲು ಜಾತಿ ನಿಂದನೆಗೆ ಒಳಗಾಗಿ ನೊಂದ ಪರಮೇಶ್ ಎಂಬುವವರ ಮೇಲೆ ದಬ್ಬಾಳಿಕೆಯ ಮಾತುಗಳನ್ನಾಡಿ, ಬೆದರಿಕೆ ಒಡ್ಡಿರುವುದು ಅತ್ಯಂತ ಖಂಡನೀಯವಾಗಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸಕರೇ ಈ ರೀತಿಯಲ್ಲಿ ಅನಾಗರೀಕವಾಗಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಮಾಡಿರುವುದು ಅತ್ಯಂತ ದುರಂತದ ಸಂಗತಿ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ, ಈ ಘಟನೆಯನ್ನು ವಿ.ವಿ ಕುಲಪತಿಗಳು ಮತ್ತು ಜಿಲ್ಲಾಡಳಿತ ತಪ್ಪಿತ್ತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಇಂತಹ ಘಟನೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಆಗದೆ ಇರುವ ಹಾಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಘಟನೆಯ ಹಿನ್ನೆಲೆ ಡಿ.ಹೆಚ್.ಎಸ್ ದಲಿತ ಹಕ್ಕುಗಳ ಸಮಿತಿಯ ನಿಯೋಗ ಮತ್ತು ಸಂಚಾಲಕರಾದ ಪೃಥ್ವಿ ಎಂ.ಜಿ , ರಮೇಶ್ ಹಾಸನ್ ಬೇಟಿ ನೀಡಿ ಮುಂದಿನ ದಿನಗಳಲ್ಲಿ ಜಾತಿ ಅಸ್ಪೃಶ್ಯತೆ ಆಚರಿಸಿದವರಿಗೆ ತಕ್ಕ ಪಾಠ ಕಲಿಸದಿದ್ದರೆ ಡಿ.ಹೆಚ್.ಎಸ್ ಸಂಘಟನೆ ದೊಡ್ಡ ಮಟ್ಟದಲ್ಲಿ ಹೋರಾದ ಎಚ್ಚರಿಕೆಯನ್ನು ನೀಡಿರುತ್ತಾರೆ.