Friday, June 20, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಟಿಕೆಟ್‌ ಹಗರಣ: ಹತ್ತು ದಿನಗಳ ಪೊಲೀಸ್‌ ಕಸ್ಟಡಿಗೆ ಹಾಲಶ್ರೀ

ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಅಭಿನವ ಹಾಲಶ್ರೀ ಸ್ವಾಮಿಯನ್ನು ಕೋರ್ಟ್‌ ಹತ್ತು ದಿನಗಳ ಅವಧಿಗೆ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ಕೊಡಿಸುತ್ತೇವೆಂದು ಕೋಟ್ಯಂತರ ಹಣ ಮೋಸ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಇತರ ಆರೋಪಿಗಳೊಡನೆ ಬಂಧಿತನಾಗಿದ್ದ ಹಾಲಶ್ರೀಯನ್ನು ಇಂದು ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಸೆ. 20ರಂದು ಬೆಳಗ್ಗೆ 19ನೇ ಎಸಿಎಂಎಂ ನ್ಯಾಯಾಲಯದ ಮಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ಸ್ವಾಮೀಜಿಯ ಹೆಚ್ಚಿನ ವಿಚಾರಣೆ ನಡೆಸಬೇಕಿರುವುದರಿಂದ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸೆ. 29ರವರೆಗೆ (10 ದಿನ) ಸ್ವಾಮಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಕೊಟ್ಟಿದೆ.

ಪೊಲೀಸರು ಮುಂದಿನ ತನಿಖೆಗಾಗಿ ಆರೋಪಿಯನ್ನು ಮೈಸೂರಿಗೆ ಕರೆದೊಯ್ಯಲಿದ್ದು ಅಲ್ಲಿ ಮಹಜರು ನಡೆಸಲಿದ್ದಾರೆ ಎನ್ನಲಾಗಿದೆ. ಸ್ವಾಮಿಯು ಪರಾರಿಯಾಗುವ ಮೊದಲು ಮೈಸೂರಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರನ್ನು ಭೇಟಿಯಾಗಿ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ಮಾಡಲು ಪ್ರಯತ್ನಿಸಿದ್ದ ಸುದ್ದಿ ಬರುತ್ತಿದೆ.

ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಕಾರಣ ಪೊಲೀಸರು ಚೈತ್ರಾ ಮತ್ತು ಸ್ವಾಮಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನಿಸುವ ಸಾಧ್ಯತೆಯನ್ನೂ ಪತ್ರಿಕೆಯೊಂದು ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page