ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಬ್ಬರೂ, ಅಧಿಕಾರಗಳ ಜೊತೆ ನಡೆಸಿದ ಜಂಟಿ ಸಭೆಯಲ್ಲಿ, ಬಿಟ್ಟು ಹೋದ ದೇವದಾಸಿ ಮಹಿಳೆಯರ ಗಣತಿ ಮಾಡಲು ತಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾದುದಾಗಿದೆ. ಇದು ಕಳೆದ ಒಂದು ದಶಕದಿಂದ ನಾವು ನಡೆಸಿದ ಹೋರಾಟಕ್ಕೆ ದೊರೆತ ಜಯ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಅಭಿಪ್ರಾಯ ಪಟ್ಟಿದೆ.
ರಾಜ್ಯದಾದ್ಯಂತ ಇರುವ ಹತ್ತಾರು ಸಾವಿರಗಟ್ಟಲೆ ದೇವದಾಸಿ ಮಹಿಳೆಯರನ್ನು ದುರುದ್ದೇಶದಿಂದಲೇ ಗಣತಿಯಿಂದ ಹೊರಗಿಡಲಾಗಿತ್ತು. ಇದರಿಂದ ದೇವದಾಸಿ ಮಹಿಳೆಯರು ಅವರ ಮಕ್ಕಳು ಸರಕಾರದ ಯಾವುದೇ ಸೌಲಭ್ಯಗಳು ದೊರೆಯದೇ ಸಂಕಷ್ಠದಲ್ಲಿದ್ದರು. ಇದೀಗ ಈ ಸಭೆಯು ಹೊಸ ಗಣತಿಯನ್ನು ಕೈಗೊಳ್ಳುವಂತೆ, ಅದೂ ಸಹ ಬೆಳಗಾವಿ ವಿಧಾನ ಸಭೆ ಅಧಿವೇಶನದಲ್ಲಿಯೇ ನಿರ್ಣಯಿಸಬೇಕೆಂಬ ಅಭಿಪ್ರಾಯಕ್ಕೆ ಬಂದಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಒಕ್ಕೂಟಗಳು ಬೆಂಬಲಿಸುತ್ತವೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ದೇವದಾಸಿ ಮಹಿಳೆಯರ ಮಕ್ಕಳ ಉನ್ನತ ಶಿಕ್ಷಣದ ಹಾಗೂ ಹಾಸ್ಟೆಲ್ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ಅಂಕಗಳು ಮತ್ತು ಪ್ರವೇಶ ಪರಿಕ್ಷೆಗಳ ಸ್ಪರ್ಧೆ ಇಲ್ಲದೇ ಒಳ ಮೀಸಲಾತಿ ಆಧಾರದಲ್ಲಿ ಮತ್ತು ನೇರ ಪ್ರವೇಶಕ್ಕೆ ಕ್ರಮವಹಿಸಲು ಸಚಿವಧ್ವಯರ ಸಭೆ ನಿರ್ಧಾರವು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ಕನಿಷ್ಟ 1500 ರೂಗಳಿಂದ 3,000 ರೂ ಗಳಿಗೆ ಹೆಚ್ಚಿಸಬೇಕು ಮತ್ತು ಎಲ್ಲ ವಯೋಮಾನದ ದೇವದಾಸಿ ಮಹಿಳೆಯರಿಗೂ ಸಹಾಯಧನ ದೊರೆಯುವಂತೆ ವಿಸ್ತರಿಸಬೇಕೆಂಬ ಹಕ್ಕೊತ್ತಾಯಗಳ ಕುರಿತು ಮೌನವಾಗಿರುವುದು ತೀವ್ರ ಖಂಡನೀಯವಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 30,000 ಕೋಟಿ ರೂಗಳಷ್ಟು ಹಣ ಕೊಳೆಯುತ್ತಾ ಬಿದ್ದಿದ್ದರೂ, ಪ್ರತಿವರ್ಷ ಅದರಲ್ಲಿ ಹಲವು ಸಾವಿರ ಕೋಟಿ ರೂಗಳನ್ನು ಬಳಸದೇ ಬಿಡಲಾಗುತ್ತಿದೆ. ಅದನ್ನು ದೌರ್ಜನ್ಯದ ದೇವದಾಸಿ ಪದ್ಧತಿಗೆ ತುತ್ತಾದ ಈ ಮಹಿಳೆಯರಿಗೆ ನೀಡದೇ ಅವರನ್ನು ದೌರ್ಜನ್ಯ ಅನುಭವಿಸಲು ಬಿಟ್ಟಿರುವುದು ಅಕ್ಷಮ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅದೇ ಸಂದರ್ಭದಲ್ಲಿ ರಾಜ್ಯ ಸರಕಾರವು ದಲಿತ ಕುಟುಂಬಗಳ ಸ್ವಾವಲಂಬಿ ಆದಾಯದ ಸಬಲೀಕರಣಕ್ಕೆ ಕ್ರಮವಹಿಸಬೇಕು. ಈ ಕುರಿತು ಅಗತ್ಯ ಕ್ರಮವಹಿಸಲು ನಮ್ಮ ಸಂಘಟನೆಗಳು ಒತ್ತಾಯಿಸುತ್ತೇವೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಂಟಿಯಾಗಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.