ದೆಹಲಿ: ವಿವಾಹೇತರವಾಗಿ ಜನಿಸಿದ ಮಗುವಿಗೆ ಹಿಂದೂ ಕಾನೂನುಗಳ ಪ್ರಕಾರ ಪೋಷಕರ ಪೂರ್ವಜರ ಆಸ್ತಿಯಲ್ಲಿ ಪಾಲು ಇದೆಯೇ ಎಂಬ ವಿಷಯದ ಕುರಿತು ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಅಮಾನ್ಯ ಅಥವಾ ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ತೀರ್ಪಿನಡಿ, ಹಿಂದೂ ಉತ್ತರಾಧಿಕಾರ ಕಾಯಿದೆಯಡಿ, ಹಿಂದೂ ಅವಿಭಜಿತ ಕುಟುಂಬದಲ್ಲಿ ಪೋಷಕರ ಪೂರ್ವಜರ ಆಸ್ತಿಯಲ್ಲಿ ಈ ಮಕ್ಕಳೂ ಪಾಲು ಪಡೆಯಲು ಅರ್ಹರು ಎಂದು ತೀರ್ಮಾನಿಸಲಾಗಿದೆ.
2011 ರಿಂದ ಬಾಕಿ ಉಳಿದಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಇತ್ತೀಚೆಗೆ ಅರ್ಜಿಯನ್ನು ಆಲಿಸಿ ಈ ತೀರ್ಪು ನೀಡಿದೆ. ಅಮಾನ್ಯ ಅಥವಾ ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳಿಗೆ ಪೋಷಕರ ಪೂರ್ವಜರು ಪಡೆದಿರುವ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇರುವುದಿಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಪೀಠ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಪ್ರಸ್ತುತ ಸಿಜೆಐ ಪೀಠ ಒಪ್ಪಲಿಲ್ಲ.