ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇರೆಗೆ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹಲವು ಬಾರಿ ಸಮನ್ಸ್ ಜಾರಿಯಾದರೂ ಸಮನ್ಸ್ ಗೆ ಉತ್ತರಿಸದ ನರೇಶ್ ಗೋಯಲ್ ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಕೆನರಾ ಬ್ಯಾಂಕ್ ಜೊತೆಗಿನ ವ್ಯವಹಾರದಲ್ಲಿ 538 ಕೋಟಿ ರೂ. ಬ್ಯಾಂಕ್ ಗೆ ಹಿಂತಿರುಗಿಸದೆ ವಂಚಿಸಿದ ಪ್ರಕರಣ ಇದಾಗಿದ್ದು, ನರೇಶ್ ಗೋಯಲ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಬಂಧಿಸಿದೆ.
ಈ ಹಿಂದೆಯೇ ಗೋಯಲ್ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಪ್ರೀತೂರಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಸಿಬಿಐ ಅಧಿಕಾರಿಗಳು ನರೇಶ್ ಗೊಯಲ್ ಅವರ ನಿವಾಸ, ಕಚೇರಿ ಸೇರಿ ಗೋಯಲ್ ಗೆ ಸಂಬಂಧಿಸಿದ ಮುಂಬೈನ 7 ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.
ಇದರ ಮಧ್ಯೆ ಇಡಿ ಅಧಿಕಾರಿಗಳು ಜಾರಿ ಮಾಡಿದ ಸಮನ್ಸ್ ನರೇಶ್ ಗೋಯಲ್ ಗೆ ತಲುಪಿದರೂ ಗೋಯಲ್ ಎರಡು ಬಾರಿ ಸಮನ್ಸ್ ಸ್ವೀಕರಿಸಿರಲಿಲ್ಲ. ಕೆನರಾ ಬ್ಯಾಂಕ್ ಜೊತೆಗಿನ ವ್ಯವಹಾರದಲ್ಲಿ 848 ಕೋಟಿ ರೂ. ಸಾಲ ಪಡೆದಿದ್ದ ಜೆಟ್ ವೇಸ್ ನ ನರೇಶ್ ಗೋಯಲ್ 538 ಕೋಟಿ ರೂ. ಸಾಲ ಮರುಪಾವತಿಸಿರಲಿಲ್ಲ. ಈ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈ ಸಂಬಂಧ ಕೆನರಾ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.
ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಆರೋಪದ ತನಿಖೆ ನಡೆಸಿ ಅದನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಇಡಿ, ಶುಕ್ರವಾರ ತಡರಾತ್ರಿ ನರೇಶ್ ಗೋಯಲ್ ರನ್ನು ಬಂಧಿಸಿದ್ದಾರೆ.