ಚಿತ್ರದುರ್ಗ: ಮುರುಘಾ ಶರಣರ ಮೇಲಿನ ಇನ್ನೊಂದು ಪೊಕ್ಸೋ ಪ್ರಕರಣದಡಿ ಜಿಲ್ಲಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ಸ್ವಾಮಿಯನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಕೋರ್ಟ್ ಆದೇಶ ಪ್ರತಿಯೊಂದಿಗೆ ಪೊಲೀಸರು ವಿರಕ್ತ ಮಠದತ್ತ ಹೊರಟಿದ್ದು ಯಾವುದೇ ಕ್ಷಣದಲ್ಲಿ ಮುರುಘಾ ಸ್ವಾಮಿಯ ಅರೆಸ್ಟ್ ಆಗುವ ಸಾಧ್ಯತೆಯಿದೆ. ಇತ್ತ ಸ್ವಾಮಿಯ ವಕೀಲರು ಬಂಧನದ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸ್ವಾಮಿಯ ವಿರುದ್ಧ ಇದ್ದ ಎರಡು ಪ್ರಕರಣಗಳಲ್ಲಿ ಒಂದಕ್ಕೆ ಕಳೆದ ವಾರ ಜಾಮೀನು ದೊರಕಿದ್ದು, ಅವರು ನವೆಂಬರ್ 16ರಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದರು. ಈಗ ಇನ್ನೊಂದು ಪ್ರಕರಣದಡಿ ವಾರೆಂಟ್ ಜಾರಿಯಾಗಿದ್ದು ಈ ನಿಟ್ಟಿನಲ್ಲಿ ಸ್ವಾಮಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿರಕ್ತ ಮಠದ ವಾತಾವರಣದಲ್ಲಿ ಆತಂಕ ಮನೆ ಮಾಡಿದ್ದು, ಬಂಧನದ ವೇಳೆ ಸ್ಥಳದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಬಹುದೆನ್ನುವ ಕಾರಣಕ್ಕೆ ಈಗಾಗಲೇ ಅಲ್ಲಿ ಸಾಕಷ್ಟು ಬಂದೋಬಸ್ತ್ ಏರ್ಪಡಿಸಲಾಗಿದೆ. ಹೈಕೋರ್ಟಿನಲ್ಲಿ ಯಾವುದೇ ಪರಿಹಾರದ ಸಿಗದಿದ್ದಲ್ಲಿ ಸ್ವಾಮಿಗೆ ಜೈಲು ಗ್ಯಾರಂಟಿ.
ಈ ಹಿಂದಿನ ಪ್ರಕರಣದಲ್ಲೂ ಸ್ವಾಮಿಗೆ ಬಹಳ ಷರತ್ತು ಬದ್ಧ ಜಾಮೀನು ನೀಡಲಾಗಿದ್ದು, ಚಿತ್ರದುರ್ಗಕ್ಕೆ ಪ್ರವೇಶಿಸಬಾರದು ಎನ್ನುವುದು ಕೂಡಾ ಅವುಗಳಲ್ಲಿ ಒಂದಾಗಿತ್ತು.