ಹಾಸನ:ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಸಂಜೆ ವಿಚಾರಣಾಧೀನ ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ತಾರಕಕ್ಕೇರಿ, ರಕ್ತಪಾತದಲ್ಲಿ ಅಂತ್ಯಗೊಂಡಿದೆ. ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವ ವಿಚಾರದಲ್ಲಿ ಆರಂಭವಾದ ಜಗಳ, ಅಂತಿಮವಾಗಿ ಜೈಲು ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ. ಫೋನ್ ಕರೆಗೆ ಕ್ಯೂ ನಿಂತಾಗ ಶುರುವಾಯ್ತು ಗಲಾಟೆ!ಲಭ್ಯವಿರುವ ಮಾಹಿತಿಯಂತೆ, ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ಫೋನ್ ಕರೆ ಮಾಡುವ ಸರತಿ ಸಾಲಿನಲ್ಲಿ ನಿಂತಿದ್ದರು. “ನಾನೇ ಮೊದಲು ಫೋನ್ ಮಾಡಬೇಕು” ಎನ್ನುವ ವಿಚಾರಕ್ಕೆ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ಮಾತಿನ ಚಕಮಕಿ, ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಮಧ್ಯಪ್ರವೇಶಿಸಿದ ಸಿಬ್ಬಂದಿ ಮೇಲೆಯೇ ಅಟ್ಯಾಕ್!ಇವರಿಬ್ಬರ ನಡುವಿನ ತೀವ್ರ ಸ್ವರೂಪದ ಜಗಳವನ್ನು ಬಿಡಿಸಲು ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ. ಇದೇ ಸಮಯಕ್ಕೆ ಏಕಾಏಕಿ ಪಿ.ಸಿ.ಎಸ್. ಕೊಠಡಿಯೊಳಗೆ (PCS Room) ನುಗ್ಗಿದ 9 ಮಂದಿ ವಿಚಾರಣಾಧೀನ ಕೈದಿಗಳ ಗುಂಪು ರಂಗಸ್ವಾಮಿ ಮೇಲೆ ಮುಗಿಬಿದ್ದು ಭೀಕರವಾಗಿ ಹಲ್ಲೆ ನಡೆಸಿದೆ. ರಂಗಸ್ವಾಮಿ ರಕ್ಷಣೆಗೆ ಧಾವಿಸಿದ ಜೈಲು ಸಿಬ್ಬಂದಿಗಳಾದ ವೀರೇಶ್ ಸಂಗಮದ್, ಶಿವಕುಮಾರ ಮತ್ತು ಪರಶುರಾಮ.ಹೆಚ್ ಅವರನ್ನೂ ಈ ಗ್ಯಾಂಗ್ ಬಿಟ್ಟಿಲ್ಲ. ಜೈಲು ವೀಕ್ಷಕ ವೀರೇಶ್ ಸಂಗಮದ್ ಅವರನ್ನು ನೆಲಕ್ಕೆ ತಳ್ಳಿ ದೌರ್ಜನ್ಯ ಎಸಗಲಾಗಿದೆ. ದಾಳಿ ನಡೆಸಿದ ‘ಮಂಜೇಶ್ ಕೊಲೆ’ ಪ್ರಕರಣದ ಆರೋಪಿಗಳು!ನಟೋರಿಯಸ್ ರೌಡಿಶೀಟರ್ ಮಂಜೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ 9 ಮಂದಿ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
