ಹಾಸನ: ದಬ್ಬಾಳಿಕೆ ಮಾಡಿದರೆ ಅದನ್ನು ಯಾವ ರೀತಿ ಸರಿಪಡಿಸಬೇಕು ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲು ನಿಗದಿ ವಿಚಾರವಾಗಿ ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿದರು. ಮೀಸಲು ನಿಗದಿ ಸಂಬಂಧ ಜಿಲ್ಲಾಧಿಕಾರಿಗಳು ತಹಸೀಲ್ದಾರ್ಗೆ ಪತ್ರ ಬರೆದಿದ್ದು ಏಕೆ? ಅವರಿಂದ ವರದಿ ಪಡೆದ ಬಳಿಕ ಮೀಸಲು ನಿಗದಿಯಲ್ಲಿ ಬದಲಾವಣೆ ಮಾಡಿರುವುದು ಏಕೆ? ಬದಲಾವಣೆ ಮಾಡುವಾಗ ಅದಕ್ಕೆ ನಿರ್ದಿಷ್ಟ ಕಾರಣವನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಎಡಿಸಿ ಹುದ್ದೆಯಲ್ಲಿ ಯಾರೂ ಉಳಿಯುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಒಬ್ಬೊಬ್ಬರಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಮೀಸಲು ನಿಗದಿಯಾಗಿರುವ ದೃಢೀಕೃತ ಪ್ರತಿಯನ್ನು ಕೇಳಿದರೂ ಇನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಲು ಬಿಡುವುದಿಲ್ಲ. ತಾನು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದೇನೆಯೇ, ಇಲ್ಲವೇ ಎಂಬುದನ್ನು ಹೇಳುವುದಿಲ್ಲ. ಆ.31ರ ಸೋಮವಾರದೊಳಗೆ ಮೀಸಲು ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ರೇವಣ್ಣ ಎಚ್ಚರಿಕೆ ನೀಡಿದರು.
