ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಪರಿಸರಕ್ಕೆ ಹಾನಿಯುಂಟುಮಾಡುವ ಮೇಕೆದಾಟು ಯೋಜನೆಯ ವಿವಾದವನ್ನು ಜೀವಂತವಾಗಿಡುವ ಮೂಲಕ ಅದರಿಂದ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ನಟ ಚೇತನ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು “ರಾಜಕೀಯ ಲಾಭಕ್ಕಾಗಿ ತಮಿಳುನಾಡು ಮೇಕೆದಾಟು ಬಗ್ಗೆ ಗಲಾಟೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಾಸ್ತವವಾಗಿ, ಮೇಕೆದಾಟು ಸಮಸ್ಯೆಯನ್ನು ಜೀವಂತವಾಗಿಡುವ ಮೂಲಕ ಅವಕಾಶವಾದಿ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಸಿಎಂ ಸಿದ್ದರಾಮಯ್ಯ.
ಮೇಕೆದಾಟು ಕರ್ನಾಟಕ ವಿರೋಧಿ, ಪರಿಸರ ವಿರೋಧಿ ಬೃಹತ್ ಅಣೆಕಟ್ಟು ಯೋಜನೆಯಾಗಿದ್ದು, ಇದು ಗುತ್ತಿಗೆದಾರರಿಗೆ ಮಾತ್ರ ಲಾಭವನ್ನು ನೀಡುತ್ತದೆ” ಎಂದು ಆರೋಪಿಸಿದ್ದಾರೆ.

ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಕಾವೇರಿ ನದಿ ನಾಲ್ಕು ರಾಜ್ಯಗಳಿಗೆ ಅಂದರೆ ತಮಿಳುನಾಡು, ಕರ್ನಾಟಕ, ಕೇರಳ, ಪಾಂಡಿಚೆರಿ ರಾಜ್ಯಗಳಿಗೆ ಸೇರಿದೆ. ಆದರೆ ತಮಿಳುನಾಡಿನವರು ಯಾವಾಗಲೂ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಯ ಕುರಿತು ಕ್ಯಾರೆ ತೆಗೆಯುತ್ತಲೇ ಇರುತ್ತಾರೆ” ಎಂದು ಹೇಳಿದ್ದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಈ ಕನಸಿನ ಯೋಜನೆ ಆರಂಭದಿಂದಲೂ ಪರ-ವಿರೋಧಗಳನ್ನು ಎದುರಿಸುತ್ತಲೇ ಬಂದಿದೆ.