ಬೆಂಗಳೂರು : ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಸಡಿಲಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಮುಂಗಾರುಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು, ಮಳೆ ಕೊರತೆಯನ್ನು ಎದುರಿಸುವಂತಾಗಿದೆ.
ಈಗಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಬರ ಪರಿಸ್ಥಿತಿ ಘೋಷಣೆ ಮಾಡಲು ಅಡ್ಡಿಯಾಗುತ್ತಿದ್ದು, ಆಯಾ ರಾಜ್ಯದ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಬರ ಘೋಷಣೆಗೆ ಅನುಕೂಲವಾಗುವಂತೆ ಮಾರ್ಗಸೂಚಿಗಳನ್ನು ಸಡಿಲ ಮಾಡುವಂತೆ ಮುಖ್ಯಮಂತ್ರಿ ಕೋರಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಿಂಗ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಪ್ರಸ್ತುತ ರಾಜ್ಯದಲ್ಲಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದರೂ ಬರಗಾಲ ಘೋಷಣೆ ಮಾಡಲು ನಿಯಮಗಳನ್ನು ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಅಸಮರ್ಪಕ ಮುಂಗಾರಿನಿಂದಾಗಿ ಆಗಸ್ಟ್ ತಿಂಗಳಿನ ಮಧ್ಯಭಾಗದವರೆಗೂ ವಾಡಿಕೆ ಪ್ರಮಾಣದ ಮಳೆ ಬಂದಿಲ್ಲ. ರಾಜ್ಯದಲ್ಲಿ ಕೆಲವೆಡೆ ಬಿತ್ತನೆಯೂ ಆಗಿಲ್ಲ. ಹಲವಾರು ವರ್ಷಗಳಿಂದ ಬರಗಾಲ ಘೋಷಣೆಗೆ ನಿಗದಿಪಡಿಸಿರುವ ಮಾನದಂಡಗಳನ್ನು ಬದಲಾವಣೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ತಕ್ಷಣವೇ ರಾಜ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕರ್ನಾಟಕದ ನೆರವಿಗೆ ಧಾವಿಸಬೇಕೆಂದು ಸಿದ್ದರಾಮಯ್ಯ ಅವರು ಕೋರಿದ್ದಾರೆ.
ಈಗಿರುವ ಬರ ಕೈಪಿಡಿಯಿಂದ ರಾಜ್ಯಸರ್ಕಾರಕ್ಕೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಬರಗಾಲವನ್ನು ಘೋಷಿಸಲು ಕೇಂದ್ರವು ಬರಕೈಪಿಡಿಯನ್ನು ಹೊಂದಿದೆ. ಹಿಂದಿನ ಕೈಪಿಡಿಯನ್ನು 2016ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗಿನ ವಾಸ್ತವಿಕತೆಗೂ ಅಂದಿನ ವಾಸ್ತವಿಕತೆಗೂ ವ್ಯತ್ಯಾಸವಾಗುತ್ತಿರುವುದರಿಂದ ಇದು ತುರ್ತಾಗಿ ಬದಲಾಗಬೇಕೆಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಬರ ಪರಿಹಾರಕ್ಕೆ ಕೇಂದ್ರ ಶೇ. 75ರಷ್ಟು ಅನುದಾನ ನೀಡಿದರೆ, ರಾಜ್ಯ ಸರ್ಕಾರ ಶೇ. 25ರಷ್ಟು ಅನುದಾನ ನೀಡಲಿದೆ. ಹೀಗಾಗಿ ಕೇಂದ್ರದ ಷರತ್ತುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ 336 ಮಿ.ಮೀ. ವಾಡಿಕೆ ಮಳೆ ಬದಲು 234 ಮಿ.ಮೀ. ಮಳೆ ಆಗಿದೆ. ಸುಮಾರು ಶೇ. 34 ಮಳೆಯ ಕೊರತೆಯಾಗಿದೆ. ವಿಳಂಬ ಮುಂಗಾರಿನಿಂದ ಜೂನ್ ತಿಂಗಳಲ್ಲಿ ಸುಮಾರು ಶೇ.56 ಮಳೆಯ ಕೊರತೆ ಉಂಟಾಗಿದೆ. ಕಠಿಣ ಮಾನದಂಡಗಳಿಂದ ಹಲವು ತಾಲೂಕುಗಳಲ್ಲಿ ಬರ ಎಂದು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿz?ದÁರೆ ಎಂದು ಸಿಎಂ ವಿವರಿಸಿದ್ದಾರೆ.
ರಾಜ್ಯದ ಹಲವೆಡೆ ಎದುರಾಗಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿದೆ. ರಾಜ್ಯದ ಕೆಲವು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಕೇಂದ್ರದ ಮಾನದಂಡಗಳ ಪ್ರಕಾರ ಶೇ. 60ರಷ್ಟು ಮಳೆಯ ಕೊರತೆ ಆಗಿರಬೇಕು ಮತ್ತು ಕನಿಷ್ಠ ಮೂರು ವಾರ ಸತತವಾಗಿ ಮಳೆಯಾಗಬಾರದು. ಇದರ ಬದಲಿಗೆ ರಾಜ್ಯದ ಸಮಗ್ರ ಚಿತ್ರಣವನ್ನು ನೋಡಿ ಘೋಷಣೆಗೆ ಅವಕಾಶ ಮಾಡಿಕೊಡಬೇಕು. ಶೇ. 60ರಷ್ಟು ಮಳೆಯ ಕೊರತೆಯನ್ನು ಶೇ. 30ಕ್ಕೆ ಇಳಿಕೆ ಮಾಡಬೇಕು ಮತ್ತು ಮೂರು ವಾರ ಸತತವಾಗಿ ಮಳೆ ಆಗಿರಬಾರದು ಎಂಬ ಮಾನದಂಡವನ್ನು ಬದಲಿಸಿ ಅದನ್ನು ಎರಡು ವಾರಕ್ಕೆ ಇಳಿಕೆ ಮಾಡಬೇಕು ಎಂಬ ಸಲಹೆಯನ್ನು ಪತ್ರದಲ್ಲಿ ಮಾಡಲಾಗಿದೆ.