ಕೊಪ್ಪಳ: ನನ್ನ ಜೊತೆ ಹಿಂದೂ ಧರ್ಮದ ಬಗ್ಗೆ ಯಾರು ಚರ್ಚೆ ಮಾಡೋಕೆ ತಯಾರಿದ್ದೀರಿ ಬನ್ನಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಪಕ್ಷಗಳು ಹಾಗೂ ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ʻಜಗತ್ತಿನಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕವಾದ ಧರ್ಮವಾಗಿದ್ದು, ನನಗೆ ಮಕ್ಕಾ-ಮದೀನಾದ ಹಜ್ ಯಾತ್ರೆಗೆ ಹೋಗುವ ತೀವ್ರ ಆಸೆಯಿದೆʼ ಎನ್ನುವ ತಮ್ಮದೇ ಹೇಳಿಕೆಗೆ ವ್ಯಕ್ತವಾದ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು.
ನಾನು ಯಾವ ಧರ್ಮವನ್ನೂ ಬೈಯಲೇ ಇಲ್ವಲ್ಲಾ? ನಾನು ಅಲ್ಲಿಗೆ ಹೋದಾಗ ಅವರನ್ನ ಬೈಯ್ಯೋಕೆ ಆಗುತ್ತಾ? ಅದು ಸ್ಟುಪಿಡ್ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ತಿರುಗೇಟು ಕೊಟ್ಟ ರಾಯರೆಡ್ಡಿ ಅವರು, ನನ್ನ ಜೊತೆ ಹಿಂದೂ ಧರ್ಮದ ಬಗ್ಗೆ ಯಾರು ಚರ್ಚೆ ಮಾಡೋಕೆ ತಯಾರಿದ್ದೀರಿ ಬನ್ನಿ ಎಂದು ಸವಾಲೆಸೆದರು.
ನಾನು ಉಪನಿಷತ್ ಮಾತಾಡ್ತೀನಿ, ಯಾರಾದ್ರೂ ಇದ್ರೆ ಬರಲಿ ಎಂದ ರಾಯರೆಡ್ಡಿ, ಪ್ರತಾಪ್ ಸಿಂಹ ಅಂದ ತಕ್ಷಣ ಯಾರಿದಾರೆ ಬರಲಿ ಎಂದು ಸಿಡಿಮಿಡಿಗೊಂಡರು. ನಾನು ಯಾವ ಧರ್ಮವನ್ನೂ ಬೈದಿಲ್ಲ, ಬೈಯೋದು ಇಲ್ಲ, ಧರ್ಮದ ಬಗ್ಗೆ ಅವರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ಕಿಡಿ ಕಾರಿದ್ರು.
