ಕಾಮಿಡಿ ಕಿಲಾಡಿಗಳು ಮೂಲಕ ಖ್ಯಾತಿ ಹೊಂದಿದ್ದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಲೋ ಬಿಪಿ ಕಾರಣಕ್ಕೆ ಇವರು ಹೃದಯಾಘಾತಕ್ಕೆ ತುತ್ತಾಗಿ ನಿಧನ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇಂದು (ಮೇ 12) ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸಿದ್ದ ರಾಕೇಶ್ ಪೂಜಾರಿಗೆ ‘ಕಾಮಿಡಿ ಕಿಲಾಡಿಗಳು’ ವೇದಿಕೆ ಅವರ ಬದುಕನ್ನು ಬದಲಿಸಿತು. ‘ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್ನಲ್ಲಿ ಅವರು ವಿನ್ನರ್ ಆಗಿದ್ದರು. ಹಲವು ವರ್ಷಗಳಿಂದಲೂ ಅವರ ರಂಗಭೂಮಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.
ಅವರ ನಿಧನಕ್ಕೆ ರಾಕೇಶ್ ಪೂಜಾರಿ ಆಪ್ತ ಬಳಗ ತೀವ್ರ ಸಂತಾಪ ಸೂಚಿಸಿದೆ. ಕನ್ನಡ ಚಿತ್ರರಂಗದ ನಾಯಕಿ, ಕಾಮಿಡಿ ಕಿಲಾಡಿ ಶೋ ಜಡ್ಜ್ ಕೂಡ ಆಗಿರುವ ನಟಿ ರಕ್ಷಿತಾ ಪ್ರೇಮ್, ಶಿವರಾಜ್ ಕೆಆರ್ ಪೇಟೆ, ಗೋವಿಂದೇಗೌಡ ಸೇರಿದಂತೆ ಅನೇಕ ನಟ ನಟಿಯರು ರಾಕೇಶ್ ಪೂಜಾರಿ ಸಾವಿಗೆ ಕಂಬನಿ ಮಿಡಿದಿದ್ದಾರೆ.