Home ರಾಜ್ಯ ಮಂಡ್ಯ ಬಿಜೆಪಿ ಮತ್ತು ಜೆಡಿಎಸ್ ಸೈದ್ಧಾಂತಿಕ ಮೈತ್ರಿ ಮಾಡಿಕೊಂಡ ನಂತರ ಹಳೆ ಮೈಸೂರು ಭಾಗದಲ್ಲಿ ಕೋಮು ಗಲಭೆ...

ಬಿಜೆಪಿ ಮತ್ತು ಜೆಡಿಎಸ್ ಸೈದ್ಧಾಂತಿಕ ಮೈತ್ರಿ ಮಾಡಿಕೊಂಡ ನಂತರ ಹಳೆ ಮೈಸೂರು ಭಾಗದಲ್ಲಿ ಕೋಮು ಗಲಭೆ ಹೆಚ್ಚಾಗಿದೆ: ಪ್ರಿಯಾಂಕ್ ಖರ್ಗೆ

0

ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯು ತನ್ನ ಕೋಮುವಾದಿ ಪ್ರಯೋಗದ ಶಾಖೆಯನ್ನು ತೆರೆಯಲು ಪ್ರಯತ್ನಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕರಾವಳಿ ಭಾಗದಲ್ಲಿ ಮಾಡಿದ ಅದೇ ವಿಷ ಪ್ರಯೋಗವನ್ನು ಈ ಪ್ರದೇಶದಲ್ಲಿಯೂ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ನಡೆದ ಸರಣಿ ಘಟನೆಗಳನ್ನು ಉದಾಹರಿಸಿದ ಖರ್ಗೆ, “ಉರಿಗೌಡ-ನಂಜೇಗೌಡ ಪಾತ್ರಗಳ ಸೃಷ್ಟಿ, ಶ್ರೀರಂಗಪಟ್ಟಣದ ಕೋಮು ಸಂಘರ್ಷ, ಕೆರೆಗೋಡು ಧ್ವಜ ಗಲಾಟೆ, ನಾಗಮಂಗಲ ಮತ್ತು ಮದ್ದೂರಿನಲ್ಲಿ ನಡೆದ ಗಲಭೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ. ಬಿಜೆಪಿಯು ಕರಾವಳಿಯಲ್ಲಿ ಹಾಕಿದ ಕೋಮುವಾದದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತು ಜೆಡಿಎಸ್ ಸೈದ್ಧಾಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಮುತ್ತ ಗಲಭೆಗಳು ಆರಂಭವಾಗಿವೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.

“ನಮ್ಮ ಸರ್ಕಾರವು ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ಧವಾಗಿದೆ” ಎಂದು ಅವರು ಮತ್ತೊಮ್ಮೆ ದೃಢಪಡಿಸಿದರು. ಈ ಗಲಭೆಗಳ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಅವರು ತಿಳಿಸಿದರು.

You cannot copy content of this page

Exit mobile version