ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಏಳು ಬಾರಿ ಗಡುವು ವಿಸ್ತರಿಸಿದರೂ ವಾಹನ ಸವಾರರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಆದರೆ ಈ ನಿರ್ಧಾರ ನಿಯಮ ಪಾಲಿಸಿ ಹಣ ತೆತ್ತಿದ್ದ ವಾಹನ ಮಾಲಿಕರು ಈಗ ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಸರ್ಕಾರ ಏಳನೇ ಬಾರಿ ಗಡುವು ವಿಸ್ತರಿಸಿದ್ದಾಗ ರಾಜ್ಯದಲ್ಲಿ ಕೇವಲ ಶೇಕಡ 29ರಷ್ಟು ವಾಹನ ಮಾಲಿಕರು ಮಾತ್ರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದರು. ಉಳಿದ ಶೇಕಡ 71ರಷ್ಟು ವಾಹನ ಮಾಲಿಕರು ನಿರ್ಲಕ್ಷ್ಯ ತೋರಿದ ಕಾರಣ ಕಡ್ಡಾಯ ಆದೇಶ ವ್ಯರ್ಥವಾಯಿತು ಎಂದು ಹೇಳಲಾಗುತ್ತಿದೆ.
ನಿಯಮ ಪಾಲಿಸಿದವರಿಗೆ ವಂಚನೆ ಭಾವನೆ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಆರ್ಟಿಒ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಾವತಿಸಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆದಿದ್ದ ವಾಹನ ಸವಾರರು ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಬೆಲೆಯೇರಿಕೆಯ ಸರಣಿಯ ನಡುವೆ ನಾವು ಸರ್ಕಾರದ ಆದೇಶಕ್ಕೆ ತಲೆಬಾಗಿ ಹಣ ಖರ್ಚು ಮಾಡಿದೆವು. ಆದರೆ ನಿಯಮ ಮುರಿದವರಿಗೆ ಏನೂ ಆಗಲಿಲ್ಲ, ನಮಗೇ ನಷ್ಟವಾಯಿತು” ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ನಿಯಮ ಪಾಲಿಸದವರಿಗೆ ದಂಡ ವಿಧಿಸದೆ, ಆದೇಶವನ್ನೇ ವಾಪಸ್ ಪಡೆದಿರುವ ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
