Home ಬ್ರೇಕಿಂಗ್ ಸುದ್ದಿ ಮೈಬಣ್ಣದ ಮೇಲೆ ವ್ಯಂಗ್ಯ ; ಆರಗ ಜ್ಞಾನೇಂದ್ರ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತರ ಕ್ಷಮೆ...

ಮೈಬಣ್ಣದ ಮೇಲೆ ವ್ಯಂಗ್ಯ ; ಆರಗ ಜ್ಞಾನೇಂದ್ರ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತರ ಕ್ಷಮೆ ಯಾಚಿಸುವಂತೆ ಕಾಂಗ್ರೆಸ್ ಸರಣಿ ಟ್ವಿಟ್

0

‘ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದೆ.

ತೀರ್ಥಹಳ್ಳಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯೊಂದರಲ್ಲಿ ಅಗತ್ಯ ಇಲ್ಲದೇ ಇದ್ದರೂ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಪ್ರಸ್ತಾಪಿಸಿದ್ದೂ ಅಲ್ಲದೇ, ಅವರ ಮೈಬಣ್ಣದ ಬಗ್ಗೆ ಆರಗ ಜ್ಞಾನೇಂದ್ರ ಮಾತನಾಡಿದ್ದರು. ಅದಷ್ಟೇ ಅಲ್ಲದೇ ಬಿಸಿಲಿನ ಹೊಡೆತಕ್ಕೆ ಉತ್ತರ ಕರ್ನಾಟಕದ ಮಂದಿ ಸುಟ್ಟು ಕರಕಲಾದಂತೆ ಆಗಿರುತ್ತಾರೆ ಎನ್ನುವ ಮೂಲಕ ಉತ್ತರ ಕರ್ನಾಟಕದ ಜನರ ಮೈಬಣ್ಣವನ್ನೇ ಉಲ್ಲೇಖಿಸಿ ಆರಗ ಜ್ಞಾನೇಂದ್ರ ಮಾತನಾಡಿದ್ದರು.

ಈ ಬಗ್ಗೆ ಪೀಪಲ್ ಮೀಡಿಯಾ ವರದಿ ಮಾಡಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷ ಸರಣಿ ಟ್ವೀಟ್ ಮಾಡಿದ್ದು, ಜ್ಞಾನೇಂದ್ರ ಮತ್ತು ಬಿಜೆಪಿ ಪಕ್ಷ ಖರ್ಗೆ, ದಲಿತರು ಹಾಗೂ ಉತ್ತರ ಕರ್ನಾಟಕದ ಜನರ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ.
ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ  ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ, ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ.
ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹಾಗೆಯೇ ಉತ್ತರ ಕರ್ನಾಟಕದ ಮಂದಿಯ ಮೈಬಣ್ಣದ ಬಗ್ಗೆಯೂ ಮಾತನಾಡಿರುವ ಆರಗ ಜ್ಞಾನೇಂದ್ರರಿಗೆ “ಬಿಸಿಲು ನಾಡಿನ ಉತ್ತರ ಕರ್ನಾಟಕದ ಜನರನ್ನು, ಕಪ್ಪು ಬಣ್ಣದವರನ್ನು, ದಲಿತರನ್ನು ಬಿಜೆಪಿ ತುಚ್ಚವಾದ ದೃಷ್ಟಿಯಲ್ಲಿ ನೋಡುತ್ತದೆ ಎನ್ನುವುದಕ್ಕೆ ಆರಗ ಜ್ಞಾನೇಂದ್ರ ಅವರ ಕೀಳು ಮಟ್ಟದ ಹೇಳಿಕೆಯೇ ಸಾಕ್ಷಿ.
ಬಿಸಿಲುನಾಡಿನ ಶ್ರಮಜೀವಿಗಳು ಕಪ್ಪು ಬಣ್ಣದಲ್ಲಿರುವುದು ಭ್ರಷ್ಟಾಚಾರದ ಹಣದಿಂದ ಎಸಿ ಮನೆಯಲ್ಲಿರುವ ಬಿಜೆಪಿಗರಿಗೆ ನೋಡಲಾಗುತ್ತಿಲ್ಲವೇ?
ಉತ್ತರ ಕರ್ನಾಟಕದವರನ್ನು ಪ್ರತ್ಯೇಕತಾ ಭಾವನೆಯಲ್ಲಿ ನೋಡುತ್ತಿರುವ ಬಿಜೆಪಿಗೆ ಅಲ್ಲಿನ ಜನರ ಮತಗಳು ಮಾತ್ರ ಬೇಕೇ?” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹಾಗೆಯೇ ಈ ಮನಸ್ಥಿತಿ ಹೊಂದಿರುವ ಆರಗ ಜ್ಞಾನೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

You cannot copy content of this page

Exit mobile version