ಕೊರೋನಾ ಉತ್ತುಂಗದಲ್ಲಿದ್ದ ಕಾಲದಲ್ಲಿ ‘ರಮ್ ಕುಡಿದು, ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೋನಾ ದೂರವಾಗುತ್ತದೆ’ ಎಂದು ಹೇಳಿಕೆ ನೀಡಿದ್ದ ಉಳ್ಳಾಲದ ನಗರಸಭೆ ಸದಸ್ಯರನ್ನು ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ. ನಗರಸಭೆ ಸದಸ್ಯ ರವಿಚಂದ್ರ ಗಟ್ಟಿಯವರ ಈ ಹೇಳಿಕೆ ಕೋವಿಡ್ ಸಂದರ್ಭದಲ್ಲಿ ದೇಶಾದ್ಯಂತ ವೈರಲ್ ಆಗಿತ್ತು.
ಸದಾ ಕುಡಿದ ಅಮಲಿನಲ್ಲಿ ಇರುತ್ತಿದ್ದ ಉಳ್ಳಾಲ ನಗರಸಭೆ ಸದಸ್ಯ ರವಿಚಂದ್ರ ಗಟ್ಟಿ ಕಾಂಗ್ರೆಸ್ ಪಕ್ಷದವರಾಗಿದ್ದು ಹಲವು ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಂದ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸದಾ ಪಾನಮತ್ತರಾಗಿ ಮೈಮೇಲಿನ ಬಟ್ಟೆಗಳನ್ನು ಕಳಚಿಕೊಂಡು ಬಿದ್ದಿರುತ್ತಿದ್ದರು.
ಇತ್ತೀಚೆಗೆ ನಡೆದ ಉಲ್ಲಾಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಯಲ್ಲೂ ಸಹ ಗೈರಾಗಿ ಪಕ್ಷ ವಿರೋಧಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಹುಟ್ಟಿಸಿದ್ದರು. ಕಾಂಗ್ರೆಸ್ ಪಕ್ಷ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಾ ಬಂದರೂ ರವಿಚಂದ್ರ ಗಟ್ಟಿ ತಾವು ಆಡಿದ್ದೇ ಆಟ ಎನ್ನುವಂತೆ ನಡೆದುಕೊಂಡು ಬಂದಿದ್ದಾರೆ.
ಇವೆಲ್ಲಾ ಕಾರಣಗಳಿಂದ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.