ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಆಳಂದ ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ್ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ನೀಡಲಾಗುವ ಮನೆಗಳನ್ನು ಲಂಚ ಕೊಡುವವರಿಗೆ ಹಂಚಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಂಚ ಪಡೆದು ಹಂಚಿಕೆ ಮಾಡಲಾಗಿರುವ ಮನೆಗಳ ಕುರಿತಾದ ವಿವರವಾದ ಪಟ್ಟಿಯನ್ನೂ ಹಂಚಿಕೊಂಡಿದ್ದಾರೆ ಎನ್ನಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸರ್ಫರಾಜ್ ಖಾನ್ ಲಂಚ ಪಡೆದ ವ್ಯಕ್ತಿಗಳ ಕುರಿತು ವಿವರಗಳನ್ನು ನೀಡಿದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು ಎಂದಿದ್ದಾರೆ.
ಆಳಂದ ವಿಧಾನಸಭಾ ಕ್ಷೇತ್ರದ ಮುನ್ನಳ್ಳಿ ಗ್ರಾಮದಲ್ಲಿ 200 ಮನೆಗಳು, ದರ್ಗಾ ಶಿರೂರಿನಲ್ಲಿ 100, ಧಂಗಾಪುರದಲ್ಲಿ 200, ಕವಲಗಾದಲ್ಲಿ 200, ಮಡಿಯಾಲ್ ಗ್ರಾಮಗಳಲ್ಲಿ 200 ಸೇರಿದಂತೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ಪಾಟೀಲ್ ದೂರಿದ್ದಾರೆ. ನೆರೆಯ ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೇ ರೀತಿ ಹಣ ಪಡೆದು ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಸಂಭಾಷಣೆಯಲ್ಲಿ ಆರೋಪಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ತಾವು ನೀಡಿದ್ದ ಶಿಫಾರಸು ಪತ್ರಗಳನ್ನು ಮನೆ ಹಂಚಿಕೆಯಲ್ಲಿ ಪರಿಗಣಿಸದೆ, ಗ್ರಾಮ ಪಂಚಾಯತ್ ಅಧ್ಯಕ್ಷರು ಒದಗಿಸಿದ ಪಟ್ಟಿಯನ್ನು ಅನುಮೋದಿಸಲಾಗಿದೆ ಎಂದೂ ಪಾಟೀಲ್ ವಾದಿಸಿದ್ದಾರೆ. “ಶಾಸಕ ನೀಡುವ ಪತ್ರಕ್ಕೆ ಬೆಲೆಯಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಂತದಲ್ಲಿ, ಸರ್ಫರಾಜ್ ಖಾನ್ ಆಕ್ರೋಶದಲ್ಲಿರುವ ಶಾಸಕರನ್ನು ಸಮಾಧಾನಿಸಿ, ಅವರು ಶಿಫಾರಸು ಮಾಡಿರುವ ಪಟ್ಟಿಯನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಈ ಕುರಿತು ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಪ್ರಯತ್ನಿಸಿದಾಗ ಶಾಸಕ ಉತ್ತರಿಸಲು ನಿರಾಕರಿಸಿದರು ಎಂದು ಅದು ವರದಿ ಮಾಡಿದೆ.