ಕಲಬುರಗಿ : ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪಥಸಂಚಲನ ನಡೆಸಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.ಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಗೃಹ ಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ RSS ಪಥಸಂಚಲನಕ್ಕೆ ಅನುಮತಿ ಕಡ್ಡಾಯ. ಈ ಕುರಿತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ” ಎಂದು ತಿಳಿಸಿದ್ದಾರೆ.
‘ನಾನು ಹೆದರುವ ವ್ಯಕ್ತಿಯಲ್ಲ’
ತಮ್ಮ ವಿರುದ್ಧ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಮಾಡಿರುವ ಪ್ರಿಯಾಂಕ್ ಖರ್ಗೆ, “ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದಾರೆ, ಅವರ ಮಕ್ಕಳು ಯಾರು, ಅವರು ಹೇಗಿದ್ದಾರೆ ಎಂಬ ವೈಯಕ್ತಿಕ ಮಾಹಿತಿಯನ್ನು ಕೆದಕುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲಾ ಹೆದರುವ ವ್ಯಕ್ತಿಯಲ್ಲ” ಎಂದು ತಿರುಗೇಟು ನೀಡಿದರು.
ರಾಮಮಂದಿರ ಟ್ರಸ್ಟ್ ವಿರುದ್ಧ ಆರೋಪ
ಅಯೋಧ್ಯೆ ರಾಮಮಂದಿರ ನಿರ್ಮಾಣದ ವಿಚಾರ ಪ್ರಸ್ತಾಪಿಸಿದ ಅವರು, ರಾಮಮಂದಿರ ನಿರ್ಮಾಣ ಹಾಗೂ ಗುತ್ತಿಗೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಗೋಪಾಲ್ ಜೀ ಸೇರಿದಂತೆ ಕೆಲವರ ಹೆಸರು ಉಲ್ಲೇಖಿಸಿದ ಖರ್ಗೆ, “40 ಶೇಕಡಾ ಕಮಿಷನ್ ಪಡೆದು ಗುತ್ತಿಗೆ ನೀಡಲಾಗಿದೆ. ಈ ವಿಚಾರವಾಗಿ ಟ್ರಸ್ಟ್ ಸಭೆ ನಡೆಯುತ್ತಿದೆ” ಎಂದು ಆರೋಪಿಸಿದರು. ಇದೇ ವೇಳೆ, “ಇವರು ಎಲ್ಲರೂ RSSನಲ್ಲಿ ತರಬೇತಿ ಪಡೆದವರು” ಎಂದು ವಾಗ್ದಾಳಿ ನಡೆಸಿದರು.
SIR ಹಾಗೂ ಬಿಜೆಪಿ ವಿರುದ್ಧವೂ ಟೀಕೆ
ಮತದಾರರ ವಿಶೇಷ ಪರಿಶೀಲನೆ (SIR) ವಿಚಾರದಲ್ಲಿಯೂ ಬಿಜೆಪಿ ವಿರುದ್ಧ ಟೀಕಿಸಿದ ಪ್ರಿಯಾಂಕ್ ಖರ್ಗೆ, “ಬಿಜೆಪಿ ದೂರು ನೀಡುವುದು ಕೂಡ ಒಂದು ನಾಟಕ. ಪಶ್ಚಿಮ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿ ನಂತರ ಹೊರಗಿನ ಅಧಿಕಾರಿಗಳನ್ನು ತರಿಸುವುದು ಅವರ ರಾಜಕೀಯ ತಂತ್ರ” ಎಂದು ಆರೋಪಿಸಿದರು.
