ಬೆಂಗಳೂರು : ಜೂನ್ 4 ರಂದು ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಈ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇಂತಹ ಘಟನೆಗಳು ಮತ್ತೆ ರಾಜ್ಯದಲ್ಲಿ ಮರುಕರುಳಿಸಬಾರದು ಎಂದು ಹೊಸ ಕಾನೂನೂ ಜಾರಿಗೆ ತರಲು ಸಜ್ಜಾಗಿದೆ.
ಕ್ರೌಡ್ ಕಂಟ್ರೋಲ್ ಬಿಲ್ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಜನದಟ್ಟಣೆಯಾಗುವ ಕಾರ್ಯಕ್ರಮಗಳಿಗೆ ಸರ್ಕಾರ ಕಠಿಣ ನಿಯಮ ರೂಪಿಸಲು ಮುಂದಾಗಿದೆ.
ಈ ನಿಯಮದ ಪ್ರಕಾರ ಲಕ್ಷಾಂತರ ಜನ ಸೇರುವ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸಲಾಗದಿದ್ದರೆ, ಅಥವಾ ಯಾವುದೇ ದುರಂತ ಸಂಭವಿಸಿದರೆ ಕಾರ್ಯಕ್ರಮದ ಆಯೋಜಕರೇ ಹೊಣೆಗಾರರಾಗುತ್ತಾರೆ. ಒಂದು ವೇಳೆ ಅವಘಡಗಳು ಸಂಭವಿಸಿದರೆ ಕಾರ್ಯಕ್ರಮದ ಆಯೋಜಕರು 3 ವರ್ಷದ ತನಕ ಜೈಲು, 5 ಲಕ್ಷದ ತನಕ ದಂಡವನ್ನು ಭರಿಸಬೇಕು. ಅಲ್ಲದೇ ಗಾಯಾಳುಗಳಿಗ ಹಾಗೂ ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಆಯೋಜಕರ ಆಸ್ತಿ ಹರಾಜು ಹಾಕುವ ಅಧಿಕಾರ ಕೂಡ ಸರ್ಕಾರಕ್ಕೆ ಇರಲಿದೆ. ಇಂತಹ ಒಂದು ಕಠಿಣವಾದ ಬಿಲ್ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.