Home ದೇಶ ಕಾಂಗ್ರೆಸ್‌ನ ಗೊಂದಲ: ಒಂದೆಡೆ ಆಹ್ವಾನ ತಿರಸ್ಕಾರ, ಇನ್ನೊಂದೆಡೆ ಮಂದಿರ ಉದ್ಘಾಟನೆಯ ಸಂಭ್ರಮಾಚರಣೆ

ಕಾಂಗ್ರೆಸ್‌ನ ಗೊಂದಲ: ಒಂದೆಡೆ ಆಹ್ವಾನ ತಿರಸ್ಕಾರ, ಇನ್ನೊಂದೆಡೆ ಮಂದಿರ ಉದ್ಘಾಟನೆಯ ಸಂಭ್ರಮಾಚರಣೆ

0

ಕಾಂಗ್ರೆಸ್‌ ಪಕ್ಷದ ನಾಯಕತ್ವ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನವನ್ನು “ಗೌರವಪೂರ್ಣವಾಗಿ” ನಿರಾಕರಿಸಿದ್ದರೂ, ಆ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರು ರಾಮಮಂದಿರ ಪ್ರಾಣಪ್ರತಿಷ್ಟೆ ಕಾರ್ಯಕ್ರಮವನ್ನು ಆಚರಿಸಲು ಮತ್ತು ಆ ದಿನದಂದು ಅಯೋಧ್ಯೆಗೆ ಭೇಟಿಗೆ ನೀಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರು ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. “ಧರ್ಮವು ವೈಯಕ್ತಿಕ ವಿಷಯ. ಆದರೆ ಆರೆಸ್ಸೆಸ್/ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ರಾಜಕೀಯ ಯೋಜನೆಯನ್ನು ರೂಪಿಸಿದೆ. ಬಿಜೆಪಿ ಮತ್ತು ಆರ್‌ಎಸ್ಎಸ್ ನಾಯಕರು ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಅವಸರದಲ್ಲಿ ಮಾಡುತ್ತಿದ್ದಾರೆ” ಎಂದು ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಆದರೆ ಇದೆಲ್ಲದರ ನಡುವೆ ಸರ್ಕಾರದ ಮಂತ್ರಿಗಳೂ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಈ ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಮಾಡುವುದಾಗಿಯೂ, ಅದರ ಜೊತೆಗೆ ಆ ದಿನದಂದು ಅಯೋಧ್ಯೆಯಲ್ಲಿ ಉಪಸ್ಥಿತರಿರುವುದಾಗಿಯೂ ಹೇಳಿದ್ದಾರೆ. ಈ ನಡುವೆ ಉತ್ತರಪ್ರದೇಶದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಜಯ್ ರಾಯ್ ಜನವರಿ 15ರಂದು ಅಯೋಧ್ಯೆಗೆ ದೊಡ್ಡ ನಿಯೋಗದೊಂದಿಗೆ ತೆರಳಿದ್ದಾರೆ.

ಇದು ಪಕ್ಷದ ಕಾಂಗ್ರೆಸ್‌ ಪಕ್ಷದ ತಂತ್ರವಾಗಿದ್ದು, ಹಿಂದೂ ಧರ್ಮ ಮತ್ತು ರಾಮನ ವಿಷಯದಲ್ಲಿ ಪಕ್ಷ ಹಿಂಜರಿಯಬಾರದೆನ್ನುವುದು ಇದರ ಹಿಂದಿರುವ ಉದ್ದೇಶ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಕಾಂಗ್ರೆಸ್‌ ಪಕ್ಷದ ಈ ಎಡಬಿಡಂಗಿತನವನ್ನು ಎತ್ತಿ ಆಡತೊಡಗಿದೆ. ಕಾಂಗ್ರೆಸ್‌ ನಾಯಕರು ಆಹ್ವಾನ ತಿರಸ್ಕರಿಸಿದ ಕುರಿತು ಪಕ್ಷದ ಒಳಗೇ ಭಿನ್ನಾಭಿಪ್ರಾಯಗಳಿದ್ದು ನಾಯಕತ್ವದ ನಿರ್ಧಾರವನ್ನು ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಟೀಕಿಸಿದ್ದಾರೆ.

ಜನವರಿ 22ರಂದು ರಾಜ್ಯದ 34,000 ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಕಾಂಗ್ರೆಸ್ ಸಚಿವ ರಾಮಲಿಂಗ ರೆಡ್ಡಿ ಆದೇಶ

ರಾಮ ಮಂದಿರದ ಪ್ರತಿಷ್ಠಾಪನೆಯನ್ನು ಆಚರಿಸಲು ಜನವರಿ 22ರಂದು ಎಲ್ಲಾ ಸರ್ಕಾರಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸುವಂತೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಸೂಚನೆ ನೀಡಿದೆ.

ರಾಮ ಮಂದಿರ ಉದ್ಘಾಟನೆಯೆನ್ನುವುದು ದೇಶದ ಹಿಂದೂಗಳಿಗೆ ವಿಶೇಷ ದಿನವಾಗಿದೆ ಎಂದು ದತ್ತಿ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ 34,000 ದೇವಾಲಯಗಳಿದ್ದು ಅಲ್ಲಿ ಪ್ರಾರ್ಥನೆ ನಡೆಯಲಿದೆ ಎಂದು ರೆಡ್ಡಿ ಹೇಳಿದರು.

“ಜನವರಿ 22 ಹಿಂದೂಗಳ ಪಾಲಿಗೆ ವಿಶೇಷ ದಿನವಾಗಿದ್ದು, ಅಂದು ಹೊಸ ಮಂದಿರವನ್ನು ತೆರೆಯಲಾಗುತ್ತಿದೆ. ಅಲ್ಲಿನ ಭೂಮಿಯ ವಿವಾದವು ಈಗಾಗಲೇ ಮುಗಿದ ಅಧ್ಯಾಯ. ಬಿಜೆಪಿಯಲ್ಲಿರುವವರು ಮಾತ್ರ ರಾಮನ ಭಕ್ತರು, ಇತರರು ರಾಮ ಭಕ್ತರಲ್ಲ ಎನ್ನುವುದು ತಪ್ಪು. ಬಿಜೆಪಿ ಬೆಂಬಲಿಸಲಿ ಬೆಂಬಲಿಸದೇ ಹೋಗಲಿ ಪೂಜೆಯಂತೂ ನಡೆಯುತ್ತದೆ” ಎಂದು ಅವರು ಹೇಳಿದ್ದಾರೆ.

ಜನವರಿ 22ರಂದು ಮಧ್ಯಾಹ್ನ 12:29ರಿಂದ 1:32ರ ನಡುವೆ ಅಯೋಧ್ಯೆಯಲ್ಲಿ ರಾಮ ವಿಗ್ರಹದ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ. ಕರ್ನಾಟಕದ ದೇವಾಲಯಗಳಲ್ಲಿ ಪ್ರಾರ್ಥನೆಗಳು ಏಕಕಾಲದಲ್ಲಿ ನಡೆಯಲಿವೆ.

ಹಿಂದೂ ನಂಬಿಕೆ ಅಥವಾ ರಾಮ ಮಂದಿರದ ಬಗ್ಗೆ ವಿಶ್ವಾಸಿಗಳಿಗೆ ಇರುವ ಗೌರವದ ಮೇಲೆ ಬಿಜೆಪಿ ಮಾತ್ರವೇ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ರೆಡ್ಡಿ ಹೇಳಿದರು. “ಬಿಜೆಪಿ ಇಲ್ಲಿ ವಿಭಜಕ ರಾಜಕೀಯದಲ್ಲಿ ತೊಡಗಲು ಮತ್ತು ಪ್ರಭು ಶ್ರೀ ರಾಮನ ಮೇಲಿನ ಜನರ ಭಕ್ತಿಯನ್ನು ಬಳಸಿಕೊಂಡು ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ. ಭಗವಾನ್ ಶ್ರೀರಾಮನ ಶಕ್ತಿಯನ್ನು ತನ್ನದು ಎಂದು ಹೇಳಿಕೊಳ್ಳಲು ಬಿಜೆಪಿಯ ಬೆತ್ತಲೆ ಪ್ರಯತ್ನಗಳನ್ನು ಜನರು ನೋಡುತ್ತಿದ್ದಾರೆ” ಎಂದು ಸಚಿವರು ಹೇಳಿದರು.

ಅಯೋಧ್ಯೆಯ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕತ್ವದ ಹೇಳಿಕೆಯ ಕೆಲವೇ ದಿನಗಳ ನಂತರ ನಡೆದ ಸಚಿವರ ಪ್ರಯತ್ನಗಳನ್ನು ಬಿಜೆಪಿ ಅಪಹಾಸ್ಯ ಮಾಡಿದೆ. “ಇದು ಡೀಪ್‌ ಫೇಕ್ ವೀಡಿಯೊ ಅಲ್ಲ, ಪ್ರಭು ಶ್ರೀ ರಾಮನ ನಿಜವಾದ ಶಕ್ತಿ. ಯಾವಾಗಲೂ ಪ್ರಭು ಶ್ರೀ ರಾಮನ ವಿರುದ್ಧ ಇರುವ ಕಾಂಗ್ರೆಸ್ ಪಕ್ಷ ರಾಮನ ಅಸ್ತಿತ್ವವನ್ನು ಪ್ರಶ್ನಿಸಲು ಮತ್ತು ಅಪಹಾಸ್ಯ ಮಾಡಲು ಹೆಸರುವಾಸಿಯಾಗಿದ್ದು, ಈಗ ರಾಮ ಜಪ ಮಾಡುತ್ತಿರುವುದು ವಿಪರ್ಯಾಸ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ 22ರ ನಂತರ ಸಮಯ ಸಿಕ್ಕಾಗ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಅಜಯ್ ರಾಯ್ ಅವರು ಜನವರಿ 15ರ ಸೋಮವಾರ ಅಯೋಧ್ಯೆಗೆ 100ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತು ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಸೇರಿದಂತೆ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಕಾಂಗ್ರೆಸ್ ನಾಯಕರು ಪ್ರತಿಷ್ಠಾಪನಾ ಸಮಾರಂಭವನ್ನು ದೂರದಿಂದ ಆಚರಿಸಲು ನಿರ್ಧರಿಸಿದ್ದರೆ, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ಸಿಂಗ್ ಜನವರಿ 22ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಯೋಧ್ಯೆಗೆ ಹೋಗುವುದಾಗಿ ಘೋಷಿಸಿದ್ದಾರೆ. ಶಿಮ್ಲಾದ ಶಾಸಕ ಮತ್ತು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರನಾದ ಅವರನ್ನು ಆರ್‌ಎಸ್ಎಸ್-ವಿಎಚ್‌ಪಿ ಸಮಾರಂಭದಲ್ಲಿ ಭಾಗವಹಿಸುವಂತೆ ಅವರಿಗೆ ಆಹ್ವಾನ ನೀಡಿದೆ.

“ಇದು ರಾಜಕೀಯದ ವಿಷಯವಲ್ಲ, ಈ ವಿಷಯದಲ್ಲಿ ನಾನು ನನ್ನನ್ನು ಅದೃಷ್ಟಶಾಲಿಯೆಂದು ಪರಿಗಣಿಸುತ್ತೇನೆ. ಹಿಮಾಚಲ ಪ್ರದೇಶದ ಕೆಲವೇ ಜನರನ್ನು ಮಾತ್ರ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಅವರಲ್ಲಿ ನಾನೂ ಒಬ್ಬ” ಎಂದು ಸಿಂಗ್ ಹೇಳಿದರು.

ತಮ್ಮ ಮಾತು ಮುಂದುವರೆಸಿದ ಅವರು RSS ಮತ್ತು VHP ಸಂಘಟನೆಗೆ ವಿಶೇಷ ಧನ್ಯವಾದಗಳನ್ನು ಸಹ ಅರ್ಪಿಸಿದರು. ಅಂದು ಅಯೋಧ್ಯೆಯಲ್ಲಿರುವುದು ತನ್ನ ಜವಾಬ್ದಾರಿ ಎಂದು ಪರಿಗಣಿಸುವುದಾಗಿ ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹಿರಿಯ ಕಾಂಗ್ರೆಸ್ ಮುಖಂಡ ಕರಣ್ ಸಿಂಗ್, “ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಸಮಾರಂಭದಲ್ಲಿ ಭಾಗವಹಿಸಲು ಯಾವುದೇ ಹಿಂಜರಿಯಬೇಕಾದ ಅವಶ್ಯಕತೆಯಿಲ್ಲ” ಎಂದು ಹೇಳಿದ್ದಾರೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್ ಈ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೆಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿತ್ತು.

ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ “ಸುಂದರವಾದ ಆಹ್ವಾನ” ಬಂದಿದೆ, ಆದರೆ ಆರೋಗ್ಯ ಕಾರಣಗಳಿಂದಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು 93 ವರ್ಷದ ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ಕುಟುಂಬ ಟ್ರಸ್ಟ್ ಜಮ್ಮು ಮತ್ತು ದೆಹಲಿಯಲ್ಲಿ ವಿಶೇಷ ಆಚರಣೆಗಳನ್ನು ನಡೆಸಲಿದೆ ಎಂದು ಅವರು ಹೇಳಿದರು.

“ಸ್ವತಃ ರಘುವಂಶಕ್ಕೆ ಸೇರಿದವನಾದ ನಾನು ಮಂದಿರ ನಿರ್ಮಾಣಕ್ಕೆ 11 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದೇನೆ. ಹೀಗಾಗಿ ಅಯೋಧ್ಯೆಗೆ ಹೋಗುವುದು ನನಗೆ ಬಹಳ ಸಂಸತಸದ ವಿಷಯ, ಆದರೆ ವಯಸ್ಸು ಅದಕ್ಕೆ ಸಹಕರಿಸುತ್ತಿಲ್ಲ. ಅದೇನೇ ಇದ್ದರೂ ಅಂದು ಕುಟುಂಬ ಧರ್ಮಾರ್ಥ ಟ್ರಸ್ಟ್ (ಜೆ &ಕೆ) ಈ ಸಂದರ್ಭದಲ್ಲಿ ಜಮ್ಮುವಿನ ನಮ್ಮ ಪ್ರಸಿದ್ಧ ಶ್ರೀ ರಘುನಾಥ್ ದೇವಾಲಯದಲ್ಲಿ ವಿಶೇಷ ಆಚರಣೆಯನ್ನು ಆಯೋಜಿಸುತ್ತಿದೆ, ಮತ್ತು ನಾವು ಲೋಧಿ ರಸ್ತೆಯಲ್ಲಿರುವ ನಮ್ಮ ಶ್ರೀ ರಾಮ್ ಮಂದಿರದಲ್ಲಿ ಈ ಸಂಭ್ರಮವನ್ನು ಸಣ್ಣ ಪ್ರಮಾಣದಲ್ಲಿ ಆಚರಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ಆಹ್ವಾನ ತಿರಸ್ಕರಿಸಿದ್ದಕ್ಕೆ ಪಕ್ಷದ ಸದಸ್ಯರಿಂದ ತೀವ್ರ ವಿರೋಧ

ಸಮಾರಂಭದಲ್ಲಿ ಭಾಗವಹಿಸಲು ಅಥವಾ ಅಯೋಧ್ಯೆಗೆ ಭೇಟಿ ನೀಡಲು ಪಕ್ಷದ ಯಾವುದೇ ಸದಸ್ಯರನ್ನು ನಾಯಕತ್ವವು ನಿರ್ಬಂಧಿಸಿಲ್ಲ ಮತ್ತು ಎಲ್ಲಾ ಸದಸ್ಯರು ತಮಗೆ ಬೇಕಾದ ನಿರ್ಧಾರ ತಳೆಯಲು ಮುಕ್ತರಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಉನ್ನತ ನಾಯಕತ್ವದ ಆಹ್ವಾನವನ್ನು ತಿರಸ್ಕರಿಸುವ ಮತ್ತು ಉಳಿದವರಿಗೆ ಅವರು ಬಯಸಿದರೆ ಹಾಜರಾಗಲು ಅವಕಾಶ ನೀಡುವ ಈ ನಿರ್ಧಾರವು ದೇವಾಲಯ ಅಥವಾ ಹಿಂದೂ ಸಮುದಾಯದ ಭಾವನೆಗಳಿಗೆ ವಿರುದ್ಧವಾಗಿ ಕಾಣಲು ಬಯಸದ ಕಾರಣ ಹುಟ್ಟಿಕೊಂಡಿದೆ.

ಇದರ ಹೊರತಾಗಿಯೂ, ಆಹ್ವಾನವನ್ನು ಅಧಿಕೃತವಾಗಿ ತಿರಸ್ಕರಿಸುವ ಪಕ್ಷದ ನಿರ್ಧಾರದ ಬಗ್ಗೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ನಿರಾಶೆ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್ ಪಕ್ಷದ ಕೆಲವು ಜನರು ಆ ನಿರ್ದಿಷ್ಟ ರೀತಿಯ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸಾರ್ವಜನಿಕ ಭಾವನೆಯನ್ನು ಪೂರ್ಣ ಹೃದಯದಿಂದ ಗೌರವಿಸಬೇಕು. ಇಂತಹ ಹೇಳಿಕೆಗಳು ನನ್ನಂತಹ ಗುಜರಾತ್ ಕಾಂಗ್ರೆಸ್ ಕಾರ್ಯಕರ್ತರನ್ನು ನಿರಾಶೆಗೆ ದೂಡುತ್ತವೆ.” ಎಂದು ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಅಂಬರೀಶ್ ದೇರ್ ಟ್ವೀಟ್ ಮಾಡಿದ್ದಾರೆ.

ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಜುನ್ ಮೊಧ್ವಾಡಿಯಾ ಕೂಡ ಇಂತಹ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಕಾಂಗ್ರೆಸ್ ದೂರವಿರಬೇಕಿತ್ತು ಎಂದು ಹೇಳಿದ್ದಾರೆ. “ಇದು ದೇಶದ ಜನರ ನಂಬಿಕೆ ಮತ್ತು ವಿಶ್ವಾಸದ ವಿಷಯವಾಗಿದೆ” ಎನ್ನುವುದು. ಅವರ ಅಭಿಪ್ರಾಯ.

ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಈ ಹಿಂದೆ ಅನೇಕ ಬಾರಿ ರಾಮ ಮಂದಿರವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ತೀರಾ ಇತ್ತೀಚೆಗೆ, ಪ್ರತಿಷ್ಠಾಪನಾ ಸಮಾರಂಭವು ಭಾರತದಲ್ಲಿ ‘ರಾಮರಾಜ್ಯ’ದ ಆರಂಭವನ್ನು ಸೂಚಿಸುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. “ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವುದನ್ನು ನೋಡುವ ನಾವು ಬಹಳ ಅದೃಷ್ಟವಂತರು… ಜನವರಿ 22 ಭಾರತದಲ್ಲಿ ರಾಮರಾಜ್ಯದ ಮರುಸ್ಥಾಪನೆಯ ದಿನವೆನ್ನುವುದು ನನ್ನ ಅಭಿಪ್ರಾಯ.” ಎಂದು ಅವರು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ ನಿರ್ಧಾರವನ್ನು ಟೀಕಿಸಿದ ಪ್ರಮೋದ್‌ ಕೃಷ್ಣಂ “ಈ ನಿರ್ಧಾರದೊಂದಿಗೆ ಕಾಂಗ್ರೆಸ್‌ ಪಕ್ಷವು ಕಾರ್ಯಕರ್ತರ ಮನಸ್ಸಿಗೆ ಘಾಸಿ ಮಾಡಿದೆ. ಇದು ಬಹಳ ನೋವು ಕೊಡುವ ತೀರ್ಮಾನ” ಎಂದು ಅವರು ಹಿರಿಯ ನಾಯಕತ್ವವನ್ನು ಟೀಕಿಸಿದ್ದಾರೆ

You cannot copy content of this page

Exit mobile version