ತಮ್ಮ ಹಳ್ಳಿಗಳಿಗೆ ನೀರು ಸರಬರಾಜು ಮಾಡುವಂತೆ ಕೋರಿ ಮಹಾರಾಷ್ಟ್ರದ ಕೆಲವು ಹಳ್ಳಿಗಳು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಳ್ಳಿಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಇದೇ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ನೀರು ಕೊಡದೆ ಸತಾಯಿಸುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೆ ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವಂತೆಯೂ ಈ ಊರಿನ ಜನರು ಮನವಿ ಮಾಡಿಕೊಂಡಿದ್ದಾರೆ.
ಈ ಹಳ್ಳಿಗಳೂ ಸೇರಿದಂತೆ ಪೂರ್ವ ಮತ್ತು ದಕ್ಷಿಣದ ಸುಮಾರು 30 ಗ್ರಾಮಗಳು ತಮ್ಮ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದಾರೆ. ಕನ್ನಡಿಗರೆನ್ನುವ ಕಾರಣಕ್ಕೆ ತಮಗೆ ತಾರತಮ್ಯವನ್ನು ಎದುರಿಸಿ ಸಾಕಾಗಿದೆ ಎಂದು ಈ ಗ್ರಾಮಸ್ಥರು ಅಲವತ್ತುಕೊಳ್ಳುತ್ತಿದ್ದಾರೆ.
ಪ್ರಸ್ತುತ ತಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಳ್ಳುತ್ತಿರುವ ನಾಲ್ಕು ಗ್ರಾಮಗಳು – ಗುಗವಾಡ, ಬಸರಗಿ, ಸಿಂದೂರು ಮತ್ತು ಉಮರಾಣಿ – ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಟ್ ತಾಲ್ಲೂಕಿನಲ್ಲಿವೆ.
‘‘ಹಿಂದಿನ ವರ್ಷದಂತೆ ಈ ವರ್ಷವೂ ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಕನ್ನಡ ಜನಸಮುದಾಯವಿರುವ ಗ್ರಾಮಗಳು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು, ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್ ನೀರು ಬರುತ್ತಿದೆ. ಮರಾಠಿ ಜನಸಂಖ್ಯೆ ಹೆಚ್ಚಿರುವ ತಾಲೂಕಿನ ಇತರ ಗ್ರಾಮಗಳಿಗೆ ಪ್ರತಿನಿತ್ಯ ಟ್ಯಾಂಕರ್ ನೀರು ಬರುತ್ತಿದೆ. ಸರಬರಾಜಾಗುವ ನೀರು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಸಾಕಾಗುವುದಿಲ್ಲ” ಎಂದು ಉಮರಾಣಿಯ ಹಿರಿಯ ನಿವಾಸಿ ಅಪ್ಪಾಸಾಬ್ ಮುಲ್ಲಾ ಹೇಳಿದರು.
ಜನರ ಆರೋಪದ ಕುರಿತು ಪ್ರತಿಕ್ರಿಯಿಸಿದ ಜತ್ತ ತಾಲೂಕು ತಹಸೀಲ್ದಾರ್ ಜೀವನ್ ಬನಸೋಡೆ, ಗ್ರಾಮಗಳಿಗೆ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತಿರುವ ಬಗ್ಗೆ ಅರಿವಿಲ್ಲ. ಮಹಾರಾಷ್ಟ್ರದ ಹಳ್ಳಿಗಳಿಗೆ ದೈನಂದಿನ ಅವಶ್ಯಕತೆಗಳು ಮತ್ತು ಜನಸಂಖ್ಯೆಯ ಆಧಾರದ ಮೇಲೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು. “ನಾಲ್ಕು ಗ್ರಾಮಗಳ ದೂರನ್ನು ಪರಿಶೀಲಿಸಲಾಗುವುದು, ಆಡಳಿತದಲ್ಲಿ ಲೋಪಗಳಿದ್ದರೆ ಶೀಘ್ರ ಸರಿಪಡಿಸುತ್ತೇವೆ” ಎಂದು ಅಧಿಕಾರಿ ತಿಳಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಲಿಖಿತ ದೂರು ನೀಡುವಂತೆ ತಹಸಿಲ್ದಾರ್ ಗ್ರಾಮಸ್ಥರನ್ನು ಕೋರಿದ್ದಾರೆ. ‘ಸರ್ಕಾರವು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ ಮತ್ತು ಭಾಷಾ ಅಥವಾ ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ’ ಎಂದು ಅವರು ಹೇಳಿದರು. ಅವರು ಜಟ್ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿಯಿರುವುದನ್ನು ಒಪ್ಪಿಕೊಂಡರು. ಆದರೆ ಪ್ರತಿ ಪೀಡಿತ ಹಳ್ಳಿಗೆ ಪ್ರತಿದಿನ ಕನಿಷ್ಠ ಒಂದು ಟ್ಯಾಂಕರ್ ನೀರು ಸಿಗುತ್ತಿದೆ ಎಂದೂ ಹೇಳಿದರು.
ಉಮರಾಣಿ ಗ್ರಾಮದ ಕಲ್ಲಪ್ಪ ಪಾಟೀಲ್, 80, ದಕ್ಷಿಣ ಮಹಾರಾಷ್ಟ್ರದ ಸೊಲ್ಲಾಪುರ, ಇಚಲಕರಂಜಿ, ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಹೆಚ್ಚಿನ ಕನ್ನಡಿಗ ಜನಸಂಖ್ಯೆಯಿರುವ ಕುರಿತು ಗಮನ ಸೆಳೆದರು. ಈ ಭಾಗದಲ್ಲಿ ಮರಾಠಿಗರ ಜನಸಂಖ್ಯೆಗಿಂತ ನಮ್ಮ ಜನಸಂಖ್ಯೆ ಹೆಚ್ಚಿರುವುದರಿಂದ ಕಾನೂನುಬದ್ಧ ಮೂಲ ಸೌಕರ್ಯಗಳನ್ನು ನಿರಾಕರಿಸಲಾಗಿದೆ ಎಂದು ಪಾಟೀಲ್ ಹೇಳಿದರು.
“ದಕ್ಷಿಣ ಮಹಾರಾಷ್ಟ್ರದ ಕನ್ನಡ-ಜನಸಂಖ್ಯೆಯ ಹಳ್ಳಿಗಳು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹೇಗಿದ್ದವೋ ಇಂದಿಗೂ ಹಾಗೇ ಇವೆ. ರಸ್ತೆಗಳು, ಬೀದಿದೀಪಗಳು, ಶಾಲೆಗಳು ಅಥವಾ ವಿದ್ಯುತ್ ಮತ್ತು ನೀರು ಸರಬರಾಜು ಸೌಲಭ್ಯಗಳನ್ನು ಒಂದಿಷ್ಟೂ ಸುಧಾರಿಸಲಾಗಿಲ್ಲ. ನಮ್ಮ ನೂರಾರು ಪ್ರತಿನಿಧಿಗಳು ಪಂಚಾಯತ್ ಸದಸ್ಯರಿಗೆ ಶಾಸಕರು ಮತ್ತು ಸಂಸದರನ್ನು ತಲುಪಿದರೂ ಅದರಿಂದ ಪ್ರಯೋಜನವಾಗಿಲ್ಲ. ಈಗ ನಮಗೆ ಉಳಿದಿರುವುದು ಕರ್ನಾಟಕ್ಕೆ ಸೇರುವ ದಾರಿಯೊಂದೇ” ಎಂದು ಅವರು ಹೇಳಿದರು.
ಇದಲ್ಲದೆ ಸಮಯಕ್ಕೆ ಸರಿಯಾಗಿ ಪಾಠ ಪುಸ್ತಕಗಳನ್ನು ನೀಡದೆ, ಮಹಾರಾಷ್ಟ್ರ ಸರ್ಕಾರ ಇಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದೂ ಅವರು ಆರೋಪಿಸಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕರ್ನಾಟಕದ ಕಾಂಗ್ರೆಸ್ ಸಚಿವ ಎಂ.ಬಿ.ಪಾಟೀಲ್, ಮಹಾರಾಷ್ಟ್ರ ಸರ್ಕಾರದ ಅನುಮತಿಯೊಂದಿಗೆ ಅಂದಾಜು ಐದು ವರ್ಷಗಳಿಂದ ಗಡಿ ಗ್ರಾಮಗಳಿಗೆ ಭೂಗತ ಪೈಪ್ಲೈನ್ ಮೂಲಕ ನೀರು ಪೂರೈಸುತ್ತಿದ್ದಾರೆ. ವಿಜಯಪುರ ಜಿಲ್ಲೆಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಉಪಕ್ರಮವನ್ನು ಪ್ರಾರಂಭಿಸಿದ ಕರ್ನಾಟಕದ ಸಚಿವರು, ಮಹಾರಾಷ್ಟ್ರದ ಅಗತ್ಯವಿರುವ ಹಳ್ಳಿಗಳ ನೀರಿನ ಅಗತ್ಯವನ್ನು ಪೂರೈಸಿದ್ದಾರೆ.