ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ. ಮೈತ್ರಿಯ ಯಾವುದೇ ತಂತ್ರಗಾರಿಕೆ ಫಲಪ್ರದವಾಗದೇ ಮಮುಲ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮತ್ತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ.
ಗೆಲುವಿನ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಎಂಪಿ ಚುನಾವಣೆ ಗೆದ್ದ ಬಳಿಕ ಜೆಡಿಎಸ್ ನಾಯಕರು ಮಂಡ್ಯ ನಮ್ಮದೆ ಅಂದುಕೊಳ್ಳಬಹುದು. ಆದರೆ ಮಂಡ್ಯ ಜಿಲ್ಲೆಯ ಜನರ ಮನಸ್ಥಿತಿಯೇ ಬೇರೆ. ಯಾವಾಗ ಯಾರನ್ನ ಗೆಲ್ಲಿಸುತ್ತಾರೆ, ಯಾರನ್ನ ಸೋಲಿಸುತ್ತಾರೆ ಅನ್ನೋದು ಗೊತ್ತಿಲ್ಲ. ನಾವು ಈಗ ಒಳ್ಳೆಯ ಕೆಲಸ ಮಾಡಿದ್ದೇವೆ. ಹೀಗಾಗಿ ಮನ್ಮುಲ್ನಲ್ಲಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದ ಆದೇಶದ ಹಿನ್ನೆಲೆ ಮದ್ದೂರು, ಕೆಆರ್ ಪೇಟೆ ಹಾಗೂ ಮಳವಳ್ಳಿ ತಾಲ್ಲೂಕಿನ ಫಲಿತಾಂಶಕ್ಕೆ ತಡೆ ನೀಡಲಾಗಿದೆ. ನಾಗಮಂಗಲ ಕ್ಷೇತ್ರದಲ್ಲಿ ಸಚಿವ ಚಲುವರಾಯಸ್ವಾಮಿ ಕಮಾಲ್ ಮಾಡಿದ್ದು, ತನ್ನ ಇಬ್ಬರು ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದಾರೆ.
ನಾಗಮಂಗಲ ಕ್ಷೇತ್ರದಿಂದ ಕೈ ಬೆಂಬಲಿತ ಲಕ್ಷ್ಮೀನಾರಾಯಣ್ , ಹಾಗು ಅಪ್ಪಾಜಿಗೌಡ ಗೆಲುವು ಸಾಧಿಸಿದರೆ, ಪಾಂಡವಪುರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಿವಕುಮಾರ್ ಗೆಲುವು ಸಿಕ್ಕಿದೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶಾಸಕ ಮಂಜು ಹಾಗೂ ಮಹೇಶ್ ಗೆ ಮುಖಭಂಗವಾಗಿದೆ. ಕೈ ಬೆಂಬಲಿತ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಹರೀಶ್ ಗೆ ಭರ್ಜರಿ ಗೆಲುವು ಸಿಕ್ಕಿದೆ. ಮಂಡ್ಯ ಕ್ಷೇತ್ರದಿಂದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕೈ ಬೆಂಬಲಿತ ಶಿವಪ್ಪ, ಜೆಡಿಎಸ್ ಬೆಂಬಲಿತ ರಾಮಚಂದ್ರ ಹಾಗೂ ರಘು ನಂದನ್ ಗೆಲುವು ಕಂಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷನಿಗೆ ಜಯ ಒಲಿದಿದೆ. ಕೈ ಬೆಂಬಲಿತ ಬೋರೆಗೌಡರಿಗೆ ಜಯ ಗಳಿಸಿದ್ದಾರೆ.