Home ಜನ-ಗಣ-ಮನ ದಲಿತ ನೋಟ ದಲಿತ ಮುಖಂಡ ಡೀಕಯ್ಯ ನಿಧನದ ಸುತ್ತ ಸ್ವಾರ್ಥಿ ಷಡ್ಯಂತ್ರಗಳ ಹುತ್ತ!

ದಲಿತ ಮುಖಂಡ ಡೀಕಯ್ಯ ನಿಧನದ ಸುತ್ತ ಸ್ವಾರ್ಥಿ ಷಡ್ಯಂತ್ರಗಳ ಹುತ್ತ!

0

ವಿಶೇಷ ವರದಿ: ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದಲಿತ ಮುಖಂಡ, ಪ್ರಖರ ಅಂಬೇಡ್ಕರ್‌ವಾದಿ ಪಿ. ಡೀಕಯ್ಯ ಅವರು 9, ಜುಲೈ 2022ರಂದು  ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಪಿ.ಡೀಕಯ್ಯ ಅವರು ಮನೆಯಲ್ಲಿ ಒಳಗಿಂದ ಚಿಲಕ ಹಾಕಿ ಒಬ್ಬರೇ ಇದ್ದಾಗ ಬಿದ್ದಿದ್ದು ಮೆದುಳಿನ ರಕ್ತಸ್ರಾವದಿಂದ ಗಂಭೀರ ಗಾಯಗೊಂಡು ಜುಲೈ 8 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಮ್ಮನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ UDR No.28/2022, ದಿ.15.07.2022 ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ದಾಖಲಿಸಿಕೊಂಡಿರುವ ಯುಡಿಆರ್ ತನಿಖೆಯ ಹಂತದಲ್ಲಿದ್ದು ಡೀಕಯ್ಯ ಅವರ ಬಾಳಸಂಗಾತಿಯೂ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಪೊಲೀಸ್ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಈ ಮಧ್ಯೆ ಕೆಲವರ ಒತ್ತಡದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ಇದರ ಹಿಂದೊಂದು ರಾಜಕಾರಣವಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಪಿ ಡೀಕಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ಯುವಜನರನ್ನು ಅಂಬೇಡ್ಕರ್ ಚಿಂತನೆಯತ್ತ ಪ್ರೇರೇಪಿಸಲು ಜೀವನದುದ್ದಕ್ಕೂ ಶ್ರಮಿಸಿ, ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರು. ತುಳು ಭಾಷೆ, ಸಂಸ್ಕೃತಿಯ ಬಗ್ಗೆಯೂ ಅಗಾಧ ಹಿಡಿತ ಹೊಂದಿದ್ದ ಅವರು, ಯಕ್ಷಗಾನ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದರು. ಬಹುಜನರನ್ನೂ ಯಕ್ಷಗಾನ ಮತ್ತು ತುಳುವಿನ ಸೌಹಾರ್ದ ಸಂಸ್ಕೃತಿಯಲ್ಲಿ ಒಳಗೊಳಿಸಬೇಕು ಎಂದು ಡೀಕಯ್ಯರವರು “ಆಟ ಕೂಟ ಬೊಳ್ತೇರ್ ಕೂಟ”ವನ್ನು ಸ್ಥಾಪಿಸಿದ್ದರು. ಈ ನೆಲದ ಸಂಸ್ಕೃತಿ, ಆಚಾರ ವಿಚಾರ, ದಮನಿತರ ಕುರಿತೇ ಸದಾ ಕ್ರಿಯಾಶೀಲರಾಗಿದ್ದ ಡೀಕಯ್ಯನವರು ಶೋಷಿತ ಮತ್ತು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ಸಂಘಟಿಸುತ್ತಿದ್ದರು. 

ಪಿ.ಡೀಕಯ್ಯ ಅವರು ಎಂದೂ ಕೂಡಾ ಹೋರಾಟವನ್ನು ಲಾಭದ ಮಾರ್ಗವನ್ನಾಗಿಸಿರಲಿಲ್ಲ. ಹೋರಾಟಗಾರ ಎನ್ನುವುದು ರಿಯಲ್ ಎಸ್ಟೇಟ್ ಮಾಡಲೋ, ಯಾರನ್ನೋ ಬೆದರಿಸಿ ವಸೂಲಿ ಮಾಡಲೋ ಇರುವ ಹುದ್ದೆ ಎಂದುಕೊಳ್ಳಲಿಲ್ಲ. ಅವರು ಸದಾ ಜನರಿಗಾಗಿ ಬದುಕಿದವರು. ಅಸ್ಪೃಶ್ಯತೆ, ದಲಿತ ದೌರ್ಜನ್ಯ, ಅನ್ಯಾಯ ಇನ್ನಿತರ ಯಾವುದೇ ಅನ್ಯಾಯ ನಡೆದರೆ ಅದರ ವಿರುದ್ಧ ಹೋರಾಟ ರೂಪಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಎಲ್ಲಾ ಪ್ರಾಮಾಣಿಕ ಹೋರಾಟದ ಹಿಂದೆ ಇದ್ದ ಶಕ್ತಿ ಅವರ ಸಂಗಾತಿ ಅತ್ರಾಡಿ ಅಮೃತ ಶೆಟ್ಟಿ. 

ಅತ್ರಾಡಿ ಅಮೃತ ಶೆಟ್ಟಿ ಮತ್ತು ಪಿ ಡೀಕಯ್ಯನವರು ಜೊತೆಯಾಗಿ ಕರಾವಳಿಯ ಹಲವು ಹೋರಾಟಗಳನ್ನು ರೂಪಿಸಿದ್ದಾರೆ. ಈ ನೆಲದ ಶೋಷಕ ಮುಂಡಾಸುಧಾರಿಗಳು ಹೆಣ್ಣು ಮಕ್ಕಳ ಕೊಲೆ ಮಾಡಿದಾಗ ರಾತ್ರಿ ಹಗಲೆನ್ನದೆ ಜನರನ್ನು ಸಂಘಟಿಸಿ ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ಯಾವ ಸ್ವಾರ್ಥವೂ ಇಲ್ಲದೆ, ಯಾವ ಪ್ರಚಾರವೂ ಇಲ್ಲದೆ ಅತ್ರಾಡಿ ಅಮೃತ ಶೆಟ್ಟಿಯವರು ಡೀಕಯ್ಯನವರ ಜೊತೆ ಬಹುಜನ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳನ್ನು ಕಟ್ಟಿದ್ದಾರೆ. ಡೀಕಯ್ಯನವರ ಪ್ರತೀ ಹೋರಾಟ, ಕರಾವಳಿಯ ನೆಲ, ಜಲ, ಹಕ್ಕುಗಳಿಗಾಗಿನ ಎಲ್ಲಾ ಹೋರಾಟಗಳಲ್ಲಿ ಅತ್ರಾಡಿ ಅಮೃತ ಶೆಟ್ಟಿಯವರ ಹೆಜ್ಜೆಯ ಗುರುತಿದೆ. 

ಬಹುಜನ ಹೋರಾಟಗಾರ ಪಿ ಡೀಕಯ್ಯ ಮತ್ತು ಅತ್ರಾಡಿ ಅಮೃತ ಶೆಟ್ಟಿಯವರ ದಾಂಪತ್ಯವೇ ಒಂದು ದಲಿತ ಹೋರಾಟ. ಕರಾವಳಿಯ ನೆಲದಲ್ಲಿ ಈ ರೀತಿಯ ಸಂಬಂಧದ ಕ್ರಾಂತಿಯೇ ವರ್ತಮಾನದ ಮತ್ತು ಭವಿಷ್ಯದ ಪೀಳಿಗೆಗೆ ಮಾದರಿ. ಆದರೆ ಕೆಲವು ಸ್ವಾರ್ಥ ವ್ಯಕ್ತಿಗಳು ಸೇರಿಕೊಂಡು ಪಿ ಡೀಕಯ್ಯನವರ ಸಾವಿನ ಹಿನ್ನಲೆಯನ್ನು ತಿರುಚಿ ಅತ್ರಾಡಿ ಅಮೃತ ಶೆಟ್ಟಿಯವರ ಬಗೆಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಡೀಕಯ್ಯ ಮತ್ತು ಅತ್ರಾಡಿ ಅಮೃತ ಶೆಟ್ಟಿ ವಿರುದ್ದ ಅಪಪ್ರಚಾರಕ್ಕೆಂದೇ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯ ಮೂಲಕ ಪೊಲೀಸ್ ಅಧೀಕ್ಷಕರಿಗೆ ಡೀಕಯ್ಯನವರ ಸಂಗಾತಿ ವಿರುದ್ಧವೇ ಮನವಿ ಪತ್ರ ನೀಡಲಾಗಿದೆ. ಆ ಮನವಿಯ ನಿಷ್ಪಕ್ಷಪಾತ ತನಿಖೆ ನಡೆಯಲಿ.  ಆದರೆ ಯಾವುದೇ ಪೊಲೀಸ್ ತನಿಖೆಯಲ್ಲಿ ಡೀಕಯ್ಯನವರ ಸಾವು ಕೊಲೆ ಎಂದು ಸಾಬೀತಾಗದೇ ಕೊಲೆ ಎಂದು ಹೇಳುವುದು ಅಪರಾಧವಾಗುತ್ತದೆ. ಜೊತೆಗೆ ಸಮಿತಿಯ ಕೆಲವರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ ಅತ್ರಾಡಿ ಅಮೃತ ಶೆಟ್ಟಿಯವರ ವಿರುದ್ಧ ಅಪಪ್ರಚಾರ ಮಾಡಿದ್ದಲ್ಲದೆ ಮಹಿಳೆಯ ಘನತೆಗೆ, ಬಹುಜನ ಚಳುವಳಿಯ ಬಗೆಗೆ, ಸಮುದಾಯಗಳ ಮಧ್ಯೆ ಗಾಳಿ ಸುದ್ದಿಯನ್ನು ಹರಡಿ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. 

ಅಂಬೇಡ್ಕರ್ ವಾದಿ ಡೀಕಯ್ಯನವರು ನಿಧನರಾದ ದಿನದಿಂದಲೂ ಕೆಲ ಕುತ್ಸಿತ ವ್ಯಕ್ತಿಗಳು ಡೀಕಯ್ಯನವರ ಕುಟುಂಬದ ಕೆಲ ಅಮಾಯಕರನ್ನು ಬಳಸಿಕೊಂಡು ಡೀಕಯ್ಯ ಮತ್ತು ಅವರ ಬಾಳಸಂಗಾತಿಗೆ ಅವಮಾನ ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಬೌದ್ಧ ಸಂಪ್ರದಾಯದಂತೆ ಡೀಕಯ್ಯನವರ ಅಂತ್ಯ ಸಂಸ್ಕಾರ ನಡೆಸಿದ ಬಳಿಕ ಕೆಲವರ ದೂರಿನ ಹಿನ್ನಲೆಯಲ್ಲಿ ಪಾರ್ಥಿವ ಶರೀರವನ್ನು ಮೇಲಕ್ಕೆತ್ತಲಾಯಿತು. ಆ ಬಳಿಕ ಡೀಕಯ್ಯನವರ ಬಾಳ ಸಂಗಾತಿ ಅತ್ರಾಡಿ ಅಮೃತ ಶೆಟ್ಟಿಯವರ ವಿರುದ್ಧ ಪಿತೂರಿ ನಡೆಸಲಾಯಿತು. ಇದು ಕುತ್ಸಿತ ವ್ಯಕ್ತಿಗಳು ಸಂಘಟಿತರಾಗಿ ಡೀಕಯ್ಯನವರ ಆಸ್ತಿಯನ್ನು ಲಪಟಾಯಿಸಲು ಮಾಡಿರುವ ಪಿತೂರಿ, ಒಳಸಂಚು ಎಂಬುದರ ಬಗ್ಗೆಯೂ ದಲಿತ ಚಳವಳಿಯೊಳಗೆ ಚರ್ಚೆ ನಡೆಯುತ್ತಿದೆ. ಇದರ ಸತ್ಯಾಸತ್ಯತೆಯೂ ತನಿಖೆಯಾಗಬೇಕಿದೆ. ಈ ಎಲ್ಲಾ ಕೃತ್ಯಗಳು ಕರಾವಳಿಯ ಅಗ್ರಗಣ್ಯ ದಲಿತ ಮುಖಂಡ ಡೀಕಯ್ಯರಿಗೆ ಮಾಡಿದ ಅವಮಾನ ಎಂದು ಕರಾವಳಿಯ ಬಹುಜನ ಚಳುವಳಿ ಸದಾ ನೆನಪಿಟ್ಟುಕೊಳ್ಳುತ್ತದೆ. 

ಹಿರಿಯ ಸಾಹಿತಿ, ಬಹುಜನ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿ ಮತ್ತು ಪಿ ಡೀಕಯ್ಯ ಕೇವಲ ದಂಪತಿಗಳಷ್ಟೇ ಅಲ್ಲ.  ಕರಾವಳಿ ದಲಿತ ಚಳುವಳಿಯ ಸಂಗಾತಿಗಳು. ಆದರೆ ಸಮಿತಿಯ ಹೆಸರಲ್ಲಿ ಕೆಲವರು ಸಂಘಟಿತರಾಗಿ  ಪೊಲೀಸರ ಮೇಲೆ ಒತ್ತಡ ಹೇರಿ ಡೀಕಯ್ಯ ಸಾವು ಪ್ರಕರಣವನ್ನು ತಿರುಚಲು, ಡೀಕಯ್ಯನವರ ಬಾಳ ಸಂಗಾತಿ ಮೇಲೆ ಅಪವಾದ ಹೊರಿಸಲು ಪ್ರಭಾವ ಬೀರುತ್ತಿದ್ದಾರೆ. ಈ ಮೂಲಕ ಡೀಕಯ್ಯನವರ ಆಸ್ತಿ ಲಪಟಾಯಿಸಲು, ಸಾಹಿತಿ, ದಲಿತ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿಯವರನ್ನು ಅವಮಾನಿಸಲು, ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.  ಬಹುಜನ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿಯವರು ಈಗ ಏಕಾಂಗಿಯಾಗಿದ್ದಾರೆ. ಅತ್ರಾಡಿ ಅಮೃತ ಶೆಟ್ಟಿಯವರ ವಿರುದ್ಧ ಒಂದು ದೊಡ್ಡ ಗುಂಪು ಸಂಘಟಿತವಾಗಿ ಕೆಲಸ ಮಾಡುತ್ತಿದೆ. ಆ ಗುಂಪು ಈಗಾಗಲೇ ಹಲವು ಪತ್ರಿಕಾಗೋಷ್ಠಿ ನಡೆಸಿದ್ದಲ್ಲದೆ, ಪೊಲೀಸ್ ನಿರೀಕ್ಷಕರು, ಪೊಲೀಸ್ ಸಹಾಯಕ ಅಧೀಕ್ಷಕರು, ಪೊಲೀಸ್ ಅಧೀಕ್ಷಕರು, ಪೊಲೀಸ್ ಮಹಾನಿರೀಕ್ಷಕರ ಮೇಲೆ ಒತ್ತಡ ಹಾಕಿ ಅತ್ರಾಡಿ ಅಮೃತ ಶೆಟ್ಟಿಯವರ ಮೇಲೆ ಆಪಾದನೆ ಹೊರಿಸಲು ಹರಸಾಹಸ ಪಟ್ಟಿದೆ. ಯಾವ ಪ್ರಭಾವವೂ ಇಲ್ಲದ, ಅಸಲಿಗೆ ಪ್ರಭುತ್ವ ವಿರೋಧಿ ಆಗಿರುವ ಅತ್ರಾಡಿ ಅಮೃತ ಶೆಟ್ಟಿಯವರು ಎಲ್ಲ ಅಧಿಕಾರಿಗಳ ಪ್ರತ್ಯೇಕ ಪ್ರತ್ಯೇಕ ತನಿಖೆಯನ್ನು ಎದುರಿಸಿ ಆರೋಪದಿಂದ ಮುಕ್ತರಾಗಿದ್ದಾರೆ. ಆದರೂ ಪಟ್ಟು ಬಿಡದ ಗುಂಪು ಡೀಕಯ್ಯನವರ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ಸಿಐಡಿ ತನಿಖೆಗೂ ಅತ್ರಾಡಿ ಅಮೃತ ಶೆಟ್ಟಿಯವರು ಯಾವುದೇ ನ್ಯಾಯಾಲಯದಿಂದ ತಡೆಯಾಜ್ಞೆ ತರದೇ ಎದುರಿಸಲಿದ್ದಾರೆ. ಈ ತನಿಖೆ ಬಹುಜನ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿಯವರನ್ನು ಗುರಿಯಾಗಿರಿಸಿ ನಡೆಯುತ್ತದೆ. ಆದರೆ ವಾಸ್ತವವಾಗಿ ಇದು ಬಹುಜನ ಹೋರಾಟದ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಟಾರ್ಗೆಟ್ ಎಂಬುದಂತೂ ಸತ್ಯ

You cannot copy content of this page

Exit mobile version