ಹಾಸನ : ಪಂಚ ರಾಜ್ಯಗಳ ಚುನಾವಣೆಯ ನಂತರ ದೇಶಾದ್ಯಂತ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಗ್ಯಾಸ್) ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಹಾಸನ ಜಿಲ್ಲಾ ಸಂಘಟನಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಚುನಾವಣೆ ಸಂದರ್ಭದಲ್ಲಿ “ಸಾಕಷ್ಟು ದಾಸ್ತಾನು ಇದೆ, ಜನರು ಆತಂಕಪಡಬೇಕಿಲ್ಲ” ಎಂದು ಹೇಳಿದ್ದ ಸರ್ಕಾರ, ಫಲಿತಾಂಶ ಹೊರಬಂದ ತಕ್ಷಣವೇ ಇಂಧನ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕಿದೆ. “ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಮತ್ತೊಂದಿಲ್ಲ. ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನರ ಬೆನ್ನು ಮುರಿಯುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ”.
ಒಂದು ಲೀಟರ್ ಪೆಟ್ರೋಲ್ ಬೆಲೆ 110.57 ರೂ, ಒಂದು ಲೀಟರ್ ಡೀಸೆಲ್ ಬೆಲೆ 98.80 ರೂ, 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ 968 ರೂ, ಇನ್ನೂ ವಾಣಿಜ್ಯ ಬಳಕೆಯ 19 ಕೆಜಿಯ ಗ್ಯಾಸ್ ಸಿಲೆಂಡರ್ ಬೆಲೆಯು 3315 ರೂಗೆ ಹೆಚ್ಚಳವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬೆಲೆಏರಿಕೆಯಿಂದ ಸಾಮಾನ್ಯ ಜನ ತತ್ತರಿಸುತ್ತಿದ್ದಾರೆ. ಮಾತ್ರವಲ್ಲದೆ ಒಮ್ಮೆ ತೈಲ ಬೆಲೆಗಳು ಹೆಚ್ಚಳವಾದರೆ ಅದಕ್ಕೆ ಪೂರಕವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೇರುತ್ತವೆ. ಒಂದೆಡೆ ರೈತ, ಕಾರ್ಮಿಕರ ಮತ್ತು ಜನಸಾಮಾನ್ಯರ ಆಧಾಯದಲ್ಲಿ ಯಾವುದೇ ರೀತಿಯ ಏರಿಕೆಯು ಕಾಣದಿದ್ದಾಗ ಈ ಬೆಲೆ ಏರಿಕೆ ಬದುಕನ್ನು ದುಸ್ತರಗೊಳಿಸುತ್ತದೆ. ಕೂಡಲೇ ಅಗತ್ಯ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸಿಪಿಐಎಂ ನೇತೃತ್ವದಲ್ಲಿ ನಗರದ ಎನ್.ಆರ್.ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
