ತರಿಕೆರೆ: ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲೊಂದು ಪಟಾಕಿ ದುರಂತ ವರದಿಯಾಗಿದೆ. ದುರಂತದಲ್ಲಿ ಯುವಕನೋರ್ವ ಮೃತನಾಗಿದ್ದು, ಇಬ್ಬರು ಬಾಲಕರು ಸೇರಿದಂತೆ ಮೂವರಿಗೆ ಗಾಯಗಳಾಗಿವೆ.
ಮೃತ ವ್ಯಕ್ತಿಯನ್ನು ತರಿಕೆರೆ ತಾಲೂಕಿನ ಸುಣ್ಣದಹಳ್ಳಿ ಗ್ರಾಮದ ಪ್ರದೀಪ್ (30) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದ ವೇಳೆ ಪಟಾಕಿಯ ಕಿಡಿಯೊಂದು ಪಟಾಕಿಗಳನ್ನಿಟ್ಟಿದ್ದ ಪೆಟ್ಟಿಗೆಗೆ ತಗುಲಿದ್ದು, ಅದರಿಂದ ಬೆಂಕಿಯುಂಟಾಗಿ ಪೆಟ್ಟಿಗೆಯಲ್ಲಿದ್ದ ಪಟಾಕಿಗಳು ಸಿಡಿದು ದುರಂತ ಸಂಭವಿಸಿದೆ.
ಪೆಟ್ಟಿಗೆಯಲ್ಲಿದ್ದ ಪಟಾಕಿಗಳು ಸಿಡಿದ ರಭಸಕ್ಕೆ ಹತ್ತಿರದ ಮನೆಯ ಛಾವಣಿ ಮತ್ತು ಗೋಡೆಗಳಿಗೂ ಹಾನಿಯಾಗಿದೆ.
ಪಟಾಕಿ ಸ್ಫೋಟಿಸಿದ ತೀವ್ರತೆಗೆ ಪ್ರದೀಪ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರದೀಪ್ ಚಿಕಿತ್ಸೆಗೆ ಸ್ಪಂದಿಸಿದೆ ಮರಣಿಸಿದ್ದಾರೆ.
ಪ್ರದೀಪ್ ಅವರೊಂದಿಗೆ ಅವರ ಅಣ್ಣನ ಮಗ ಕುಶಲ್ (12), ನೆರೆಮನೆಯ ದರ್ಶನ್ (19) ಮತ್ತು ಷಣ್ಮುಖ (12) ಎನ್ನುವವರಿಗೂ ಗಾಯಗಳಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.