ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿಕೆ ಸುರೇಶ್ ಅವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಹಲವು ವಿಷಯಗಳನ್ನು ಪೋಸ್ಟ್ ಮಾಡಿದ್ದ.
ಬಂಧಿತ ವ್ಯಕ್ತಿಯನ್ನು ರಂಜಿತ್ ಆರ್ ಎಂ ಎಂದು ಗುರುತಿಸಲಾಗಿದೆ.
ಇಂತಹ ಪೋಸ್ಟುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಜಯನಗರ ಯುವ ಕಾಂಗ್ರೆಸ್ ಮುಖಂಡ ಶರತ್ ಅವರು ಪೊಲೀಸರನ್ನು ಸಂಪರ್ಕಿಸಿ ರಂಜಿತ್ ಎಫ್ಬಿಯಲ್ಲಿ ಹಾಕಿರುವ ಪೋಸ್ಟ್ಗಳ ಚಿತ್ರಗಳೊಂದಿಗೆ ದೂರು ದಾಖಲಿಸಿದ್ದಾರೆ. ಈ ಪೋಸ್ಟ್ಗಳ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಂಜಿತ್ನನ್ನು ವಿಚಾರಣೆ ನಡೆಸಿದ್ದಾರೆ.

ಆರೋಪಿಯು ತನ್ನ ಫೇಸ್ಬುಕ್ ಖಾತೆಯಲ್ಲಿ ತಾನು ಬೆಂಗಳೂರು ಸಿಟಿ ಪೊಲೀಸ್ ಕ್ರೈಮ್ ಬ್ರಾಂಚಿನಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿಯನ್ನೂ ಹಾಕಿಕೊಂಡಿರುವುದಾಗಿ ಹೇಳಲಾಗಿದೆ. ‘ಪೊಲೀಸ್ ಇಲಾಖೆಯಲ್ಲಿ ಸೈಬರ್ ಕ್ರೈಂ ಡಿಟೆಕ್ಟಿವ್ʼ ಎಂದು ತನ್ನ ಪ್ರೊಫೈಲಿನಲ್ಲಿ ಹಾಕಿಕೊಂಡಿದ್ದಾನೆ.
ಅಕ್ಟೋಬರ್ 4ರಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಲಾಗಿದೆ. ಮಾಧ್ಯಮ ವರದಿಯೊಂದನ್ನು ಟ್ಯಾಗ್ ಮಾಡುವ ಮೂಲಕ ರಂಜಿತ್ ‘ಡಿಕೆ ಸಹೋದರರನ್ನು ಕೊಲ್ಲಿ’ ಎಂದು ಬರೆದಿದ್ದ.
ಆರೋಪಿಯ ಫೇಸ್ಬುಕ್ ವಾಲ್ ತುಂಬಾ ಬಲಪಂಥೀ ವಿಚಾರಧಾರೆಗೆ ಸಂಬಂಧಿಸಿದ ಪ್ರಚೋದನಕಾರಿ ವಿಷಯಗಳೇ ತುಂಬಿವೆ. ಇನ್ನೊಂದು ಪೋಸ್ಟಿನಲ್ಲಿ ಡಿಕೆ ಸೂರಿಯವರಿಗೆ ನವಿಲುಗರಿ ಹಾರ ಹಾಕಿರುವ ಕುರಿತು ಬರೆದಿದ್ದು, ಅದರಲ್ಲೂ ಆತ ಡಿಕೆ ಸುರೇಶ್ ಅವರನ್ನು ಏಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾನೆ.