ನಮ್ಮ ಜನ ಸಾಮಾನ್ಯವಾಗಿ ಬ್ಯಾಂಕ್ ಗಳ ಮೂಲಕ ವ್ಯವಹರಿಸುವುದೇ ಜೀವನದಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನು ಎಲ್ಲಾದರೂ ಸುರಕ್ಷಿತ ಜಾಗದಲ್ಲಿ ಜೋಪಾನವಾಗಿ ಇಡಲು. ಆ ಮೂಲಕ ಕಷ್ಟ ಕಾಲದಲ್ಲಿ ಆ ಹಣ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ. ಅದರಲ್ಲೂ ಬ್ಯಾಂಕ್ ವ್ಯವಹಾರ ಎಂದರೆ ಅದೊಂದು ನಂಬಿಕೆಯ ಮೂಲಕ ನಡೆಯುವಂತದ್ದು. ನಾವು ಇಟ್ಟ ಠೇವಣಿ ಮತ್ತು ಉಳಿತಾಯದ ಹಣ ದುರುಪಯೋಗ ಆಗದಿರಲಿ ಎಂಬ ಏಕೈಕ ಉದ್ದೇಶದಿಂದ ಸಾಮಾನ್ಯ ಜನರು ಬ್ಯಾಂಕ್ ಮೂಲಕವೇ ಎಲ್ಲಾ ವ್ಯವಹಾರ ನಡೆಸುತ್ತಿದ್ದಾರೆ.
ಆದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಹಾಗೂ ಹೊಸನಗರ ತಾಲ್ಲೂಕಿನ ಕೆನರಾ ಬ್ಯಾಂಕ್ ಗಳಲ್ಲಿ ಬ್ಯಾಂಕಿನ ಅಧಿಕಾರಿಯೇ ಕೋಟಿಗಟ್ಟಲೆ ಲೂಟಿ ಹೊಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಗ್ರಾಹಕರ ಠೇವಣಿ ಇಟ್ಟ ಹಾಗೂ ಉಳಿತಾಯದ ಖಾತೆಯಿಂದ ಹಣ ದುರುಪಯೋಗ ಆಗಿದ್ದು, ಮೇಲ್ನೋಟದ ತನಿಖೆಯಿಂದ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಕಡೆಯಿಂದಲೇ ಹಣ ದುರುಪಯೋಗ ಆಗಿರುವ ಬಗ್ಗೆ ಠೇವಣಿದಾರರು ಹಾಗೂ ಉಳಿತಾಯ ಖಾತೆದಾರರು ದೂರಿದ್ದಾರೆ.
ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಠೇವಣಿದಾರರೊಬ್ಬರು, ತೀರ್ಥಹಳ್ಳಿ, ಕೋಣಂದೂರು ಹಾಗೂ ಹೊಸನಗರ ತಾಲ್ಲೂಕಿನ ಯಡೂರು.. ಈ ಮೂರೂ ಬ್ರಾಂಚ್ ಗಳಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿದೆ. ಅವರ ಸ್ನೇಹಿತರೊಬ್ಬರ ಬ್ಯಾಂಕ್ ಖಾತೆಯಿಂದ 49 ಲಕ್ಷ ಒಂದೇ ಬಾರಿಗೆ NEFT ಮಾಡಿದ ಮೇಲೆ ಅನುಮಾನ ಹುಟ್ಟಿದೆ. ಹೇಳಿದರೆ, ಪ್ರಕರಣದ ಆರೋಪಿ ಆಗಿರುವ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಸುನೀಲ್ ರನ್ನು ವಿಚಾರಿಸಿದಾಗ ಮೀನಾಮೇಷ ಎಣಿಸುತ್ತಿರುವುದು ಕಂಡುಬಂದಿದೆ. ಕೆಲವು ದಿನಗಳ ನಂತರ ಕೇಳಿದರೆ NEFT ಆಗಿದೆ ಎಂಬ ಉತ್ತರ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಹಲವು ವರ್ಷಗಳ ಕಾಲ ಠೇವಣಿ ಇಟ್ಟ ಹಣ ಕೂಡಾ ಇದೇ ಅಧಿಕಾರಿ ಕಡೆಯಿಂದ ದುರುಪಯೋಗ ಆದ ಬಗ್ಗೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಒಟ್ಟಾರೆ ಪ್ರಕರಣ ಈ ಮೂಲಕವೇ ಬೆಳಕಿಗೆ ಬಂದಿದ್ದು, ಒಬ್ಬರಿಂದ ಒಬ್ಬರಿಗೆ ಮಾಹಿತಿ ಹೋಗಿ, ಕೆನರಾ ಬ್ಯಾಂಕ್ ನ ಒಟ್ಟು ಮೂರು ಬ್ರಾಂಚ್ ಗಳಲ್ಲಿ ದೊಡ್ಡ ಮೊತ್ತದ ಅವ್ಯವಹಾರ ಹೊರಬಿದ್ದಿದೆ.
ವಿಚಾರ ಸ್ವಲ್ಪ ಗುಲ್ಲು ಎದ್ದ ನಂತರ ಬ್ಯಾಂಕ್ ಖಾತೆದಾರರು ಆತಂಕಗೊಂಡು ಮೇಲಧಿಕಾರಿಗಳಿಗೆ ದೂರು ನೀಡಲು, ಮೇಲಧಿಕಾರಿಗಳು ಪರಿಶೀಲನೆ ನಡೆಸಿ, ಅವ್ಯವಹಾರ ನಡೆದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆತಂಕಕಾರಿ ವಿಚಾರ ಎಂದರೆ ವಂಚನೆ ಮಾಡಿದ ಆರೋಪಿ ತಂದೆಯ ಬ್ಯಾಂಕ್ ಖಾತೆಗೆ ಅಕ್ರಮವಾಗಿ 10 ರಿಂದ 11 ಕೋಟಿ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಬ್ಯಾಂಕ್ ಮೇಲಧಿಕಾರಿಗಳು ತಿಳಿಸಿದ್ದಾರೆ.
ನೇರವಾಗಿ ಅವ್ಯವಹಾರ ಆಗಿರುವುದು ನಿಜ, ಈ ಬಗ್ಗೆ ಬ್ಯಾಂಕ್ ಉನ್ನತಾಧಿಕಾರಿಗಳ ಕಡೆಗೆ ತಿಳಿಸಲಾಗುವುದು ಎಂದಷ್ಟೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ತಮ್ಮ ಖಾತೆಯಿಂದ ಹಣ ಕಳೆದುಕೊಂಡ ಖಾತೆದಾರರು ಮುಂದೇನು ಎಂದು ದಿಕ್ಕು ನೋಡುವಂತಾಗಿದೆ.
ಇತ್ತ ಹಗರಣ ಹೊರ ಬೀಳುತ್ತಿದ್ದಂತೆ, ಆರೋಪಿ ಸುನಿಲ್ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ಸರ್ಪಗಾವಲಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೀಪಲ್ ಮೀಡಿಯಾ ಖಾತೆದಾರರನ್ನು ಸಂಪರ್ಕಿಸಿದಾಗ, ಈಗಾಗಲೇ ಬ್ಯಾಂಕ್ ಗೆ ಸಂಬಂಧಿಸಿದವರ ಸಂಪರ್ಕಿಸಿ, ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಕೂರುವಂತೆ ತಿಳಿಸಿದ್ದಾರೆ. ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಖಾತೆದಾರರು ಸೇರುವ ಬಗ್ಗೆ ಪೀಪಲ್ ಮೀಡಿಯಾಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಮಂಗಳವಾರದ ಧರಣಿ ಸಮಯದಲ್ಲಿ ಒದಗಿಸುವುದಾಗಿ ಠೇವಣಿದಾರರೊಬ್ಬರು ತಿಳಿಸಿದ್ದಾರೆ.