ಬಹುಭಾಷೆ, ಬಹುಸಂಸ್ಕೃತಿ, ಬಹುಧರ್ಮಗಳ ದೇಶವಾದ ಭಾರತದ ಒಟ್ಟು ಸಂಸ್ಕೃತಿಯನ್ನು ಕಟ್ಟುವಲ್ಲಿ ವೈವಿಧ್ಯಮಯ ಪ್ರಾದೇಶಿಕ ಸಂಸ್ಕೃತಿಗಳ ಕೊಡುಗೆ ಅಪಾರ. ಆದರೆ ಈ ಬಹುತ್ವದ ಪ್ರಾದೇಶಿಕ ಸಂಸ್ಕೃತಿಗಳ ಮೇಲೆ, ಏಕಪ್ರಕಾರದ ಮೇಲೆ ನಂಬಿಕೆ ಇರಿಸಿರುವ ವೈದಿಕಶಾಹಿಯ ದಾಳಿ ಹಿಂದಿನಿಂದಲೂ ನಡೆಯುತ್ತಲೇ ಬಂದಿದ್ದು, ಏಕಧರ್ಮ, ಏಕಭಾಷೆ, ಏಕಸಂಸ್ಕೃತಿ ಹೀಗೆ ಎಲ್ಲವನ್ನೂ ಏಕಗೊಳಿಸುವ ಪ್ರಕ್ರಿಯೆಯು ಪ್ರಭುತ್ವದ ಕಾರ್ಯಸೂಚಿಯೇ ಆಗಿರುವ ಈ ದಿನಗಳಲ್ಲಿ ಈ ದಾಳಿ ಇನ್ನೂ ತೀವ್ರವಾಗಿದೆ. ತನಗೆ ಸಂಬಂಧವೇ ಇರದ ಜಾಗಗಳಿಗೂ ವೈದಿಕಶಾಹಿ ಪ್ರವೇಶ ಪಡೆಯುತ್ತಿದೆ ಮಾತ್ರವಲ್ಲ, ಆ ಸುಂದರ ಮೂಲ ಸಂಸ್ಕೃತಿಗಳನ್ನು ನಿಧಾನವಾಗಿ ಆಪೋಷನ ತೆಗೆದುಕೊಳ್ಳುತ್ತಿದೆ. ಈ ಅಪಾಯದಿಂದ ತುಳುನಾಡಿನ ಮೂಲ ಸಂಸ್ಕೃತಿಯೂ ಪಾರಾಗಿಲ್ಲ. ವೈದಿಕಶಾಹಿ ಎಂಬ ಏಕಪ್ರಕಾರವಾದ ವರ್ಗವೊಂದು ಹೇಗೆ ತುಳುನಾಡಿನ ಸಹಜ ಸಂಸ್ಕೃತಿಯನ್ನು ಬದಲಾಯಿಸುವ, ನಾಶಪಡಿಸುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಚೆಲುವರಾಜ ಕೋಡಿಮಲೆಯವರು ಬರೆದ ಈ ಲೇಖನ ಮಾಲೆ ಅಧ್ಯಯನಪೂರ್ಣವಾಗಿ ನಿರೂಪಿಸುತ್ತದೆ. ಮೊದಲ ಭಾಗ ಇಲ್ಲಿದೆ.
ಒಂದು ಪ್ರದೇಶ ಒಂದು ಜೀವನ ಕ್ರಮವನ್ನು ಸೃಷ್ಟಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಅಲ್ಲಿಯ ಭೌಗೋಳಿಕ ಹಿನ್ನೆಲೆ, ವಾಯುಗುಣ ಮತ್ತು ಪ್ರಾಕೃತಿಕ ಲಭ್ಯತೆಯ ಆಧಾರದಲ್ಲಿ ಈ ಜೀವನ ಕ್ರಮದ ಸೃಷ್ಟಿ ನಡೆದಿರುತ್ತದೆ. ತುಳುನಾಡಿಗೆ ಸಂಬಂಧಿಸಿದಂತೆ ಇಲ್ಲಿಯ ಮೂಲ ನಿವಾಸಿಗಳು ಅದಕ್ಕೆ ಅನುಗುಣವಾಗಿ ತಮ್ಮ ಜೀವನ ಕ್ರಮದಲ್ಲಿ ಇಲ್ಲಿಯ ಎತ್ತರ-ತಗ್ಗು, ಮಳೆ-ಬಿಸಿಲು, ಕಾಡು-ಕೃಷಿ ಸಾಧ್ಯತೆಯನ್ನು ಇಟ್ಟುಕೊಂಡು ಜೀವನ ಕ್ರಮವನ್ನು ಸೃಷ್ಟಿಸಿದ್ದಾರೆ. ಆಧುನಿಕ ಪರಿಭಾಷೆಯಲ್ಲಿ ಇದನ್ನು ಸಂಸ್ಕೃತಿ ಅಥವಾ ಮೂಲ ಸಂಸ್ಕೃತಿ ಅಥವಾ ಸಹಜ ಸಂಸ್ಕೃತಿ ಎಂದು ಕರೆದಿದ್ದಾರೆ. ವಲಸಿಗರು ಬಂದಾಗ, ಕೃಷಿ ಬದಲಾದಾಗ, ಆಧುನಿಕವಾದ ಅಭಿವೃದ್ಧಿಗಳು ಹೆಚ್ಚಾದಾಗ ಇಲ್ಲಾ ಉದ್ದೇಶ ಪೂರ್ವಕವಾಗಿ ಪ್ರಭಾವಶಾಲಿ ವರ್ಗವೊಂದು ಸಂಸ್ಕೃತಿಯಿಂದ ಲಾಭಗಳಿಸಲು ಹುನ್ನಾರ ನಡೆಸಿದಾಗ ಈ ಮೂಲ ಸಂಸ್ಕೃತಿಯಲ್ಲಿ ಬದಲಾವಣೆಗಳಾಗುವುದು ಸಾಮಾನ್ಯ.

ತುಳುನಾಡಿಗೆ ಸಂಬಂಧಿಸಿದಂತೆ ಇಲ್ಲಿಯ ಮೂಲ ಅಥವಾ ಸಹಜ ಸಂಸ್ಕೃತಿಗೆ ಕೃಷಿ ಬಹಳ ಪ್ರಧಾನ ಆಧಾರ. ಈ ಕೃಷಿಯ ಆಧಾರದಲ್ಲೇ ಇಲ್ಲಿಯ ಆರಾಧನೆ, ಆಚರಣೆ, ನಂಬಿಕೆ-ನಡವಳಿಕೆ ಸೃಪ್ಟಿಸಲ್ಪಟ್ಟಿರುವುದು. ಇಲ್ಲಿಯ ಆರಾಧನಾ ವಿಭಾಗದ ನಾಗಾರಾಧನೆ, ಭೂತಾರಾಧನೆ, ದೇವಾರಾಧನೆ, ಮನರಂಜನಾ ವಿಭಾಗದ ಯಕ್ಷಗಾನ, ಕುಣಿತ, ಜನಪದ ಆಟಗಳು, ಹಬ್ಬಗಳು, ಜಾತ್ರೆ, ಉತ್ಸವ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಗಳು ಇವೆಲ್ಲವೂ ಇಲ್ಲಿಯ ಬೇಸಾಯದ ಹಿಡಿತದಲ್ಲಿ ಕ್ರಮಬದ್ಧವಾಗಿ ಸಾಗುತ್ತಾ ಬರುತ್ತಿತ್ತು. ಯಾರೇ ಯಾವ ಭಾಗದಿಂದಲೇ ವಲಸೆ ಬಂದರೂ ಯಾವುದೇ ಸಾಂಸ್ಥಿಕ ಅಭಿವೃದ್ಧಿಯನ್ನು ಕಂಡರೂ ಈ ಹಿಡಿತ ಅಷ್ಟು ಸುಲಭದಲ್ಲಿ ತಪ್ಪುತ್ತಿರಲಿಲ್ಲ.
ಆದರೆ ಇಲ್ಲಿಯ ಕೃಷಿ, ಆರಾಧನೆ, ಆಚರಣೆ, ನಂಬಿಕೆ, ನಡವಳಿಕೆಯನ್ನು ಕ್ರಮೇಣ ಬದಲಾಯಿಸಲು ಸಾಧ್ಯವಾದ ಒಂದು ಪ್ರಮುಖ ವಲಸಿಗ ವರ್ಗವೆಂದರೆ ವೈದಿಕರು. ತುಳುನಾಡ ಮೂಲ ಸಂಸ್ಕೃತಿಗೂ ಭಾರತದ ಅನೇಕ ಮೂಲ ಸಂಸ್ಕೃತಿಗೂ ಒಂದಲ್ಲ ಒಂದು ರೀತಿಯ ವ್ಯತ್ಯಾಸ ಹಾಗೂ ಅಲ್ಪ ಸಾಮ್ಯತೆಯನ್ನು ಕಾಣಲು ಸಾಧ್ಯವಿದೆ. ಆದರೆ ಈ ದೇಶದಲ್ಲಿ ವೈದಿಕ ಸಂಸ್ಕೃತಿ ವ್ಯತ್ಯಾಸಗಳಿಲ್ಲದ ಏಕಪ್ರಕಾರ ಸಂಸ್ಕೃತಿಯಾಗಿದೆ.
ಹೀಗೆ, ಪ್ರಭಾವಶಾಲಿ ವರ್ಗವೊಂದರ ಸೃಷ್ಟಿಯ ಹಿಂದೆ ಈ ಸಂಸ್ಕೃತಿಯ ಜೊತೆಗಿರುವ ಒಂದು ನಿರ್ದಿಷ್ಟ ಭಾಷೆ ಮತ್ತು ಅಕ್ಷರದ ಕಾರಣವೂ ಇದೆ. ವ್ಯಾಪಕ ಬಳಕೆಯಾಗುವ ನಿರ್ದಿಷ್ಟ ಭಾಷೆ ಮತ್ತು ಅಕ್ಷರ ಜ್ಞಾನದ ಸೌಲಭ್ಯ ಇರುವ ಯಾವುದೇ ಸಂಸ್ಕೃತಿಯಾದರೂ ಅದು ಇಲ್ಲದೇ ಇರುವ ಸಹಜ ಸಂಸ್ಕೃತಿಯನ್ನು ಕಬಳಿಸುವ ಅಥವಾ ಬದಲಾಯಿಸುವ ಅಥವಾ ನಾಶ ಮಾಡುವ ಸಾಮರ್ಥ್ಯವನ್ನು ಹೆಚ್ಚು ಪಡೆದಿರುತ್ತದೆ. ಇದು ಭಾಷೆ ಮತ್ತು ಅಕ್ಷರವನ್ನು ಪ್ರಜ್ಞಾವಂತಿಕೆಯಿಂದ ಬಳಸುವ ಎಲ್ಲರಿಗೂ ಗೊತ್ತಿರುವ ವಿಷಯವೂ ಹೌದು.
ಈ ಭಿನ್ನ ಭಾಷೆ ಮತ್ತು ಅಕ್ಷರದ ಹಿನ್ನೆಲೆಯನ್ನು ಇಟ್ಟುಕೊಂಡ ಏಕಪ್ರಕಾರವಾದ ವರ್ಗವೊಂದು ಬೇರೆಬೇರೆ ಸಂದರ್ಭಗಳಲ್ಲಿ ಹೇಗೆ ತುಳುನಾಡಿನ ಮೂಲ ಸಂಸ್ಕೃತಿಯನ್ನು ಬದಲಾಯಿಸುತ್ತಾ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳುವುದೇ ಇಂದಿನ ಅಗತ್ಯ ಮತ್ತು ಅನಿವಾರ್ಯ.
(ಮುಂದಿನ ಭಾಗದಲ್ಲಿ ನಾಗಾರಾಧನೆ- ವೈದಿಕರ ಪ್ರವೇಶ)
ಚೆಲುವರಾಜ ಕೋಡಿಮಲೆ
ಲೇಖಕರು
ಇದನ್ನೂ ಓದಿ- http://ತುಳುನಾಡ ದೈವಗಳಿಗೆ ಅಪಮಾನ: ಸಾಂಸ್ಕೃತಿಕ ಯಜಮಾನಿಕೆಯ, ವೈದಿಕ ವಸಾಹತುಶಾಹಿಯ ಅತ್ಯುತ್ತಮ ಉದಾಹರಣೆ https://peepalmedia.com/one-should-not-tolerate-insult-to-tulunadu-daiavas-s-karkala/