Home ಕರ್ನಾಟಕ ಚುನಾವಣೆ - 2023 ಕರ್ನಾಟಕದಲ್ಲಿ ಯಾರ ಪರ ಅಲೆ ಇದೆ?

ಕರ್ನಾಟಕದಲ್ಲಿ ಯಾರ ಪರ ಅಲೆ ಇದೆ?

0

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವಾರವಿದ್ದು, ಈ ಸಂಬಂಧ ನಾನಾ ಸಂಸ್ಥೆಗಳು, ರಾಜ್ಯದ ಜನರ ಮನಸಿನಲ್ಲಿ ಏನಿದೆ ಎಂಬುದನ್ನು ಕಂಡುಕೊಳ್ಳಲು ಯತ್ನಿಸುತ್ತಿವೆ. ಲೋಕನೀತಿ- ಸಿಎಸ್‍ಡಿಎಸ್ ವೈಜ್ಞಾನಿಕವಾಗಿ ಇಂತಹ ಸಮೀಕ್ಷೆಯನ್ನು ನಡೆಸುವಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯಾಗಿದ್ದು, ಎನ್ ಡಿ ಟಿ ವಿಯೊಂದಿಗೆ ಕೈ ಜೋಡಿಸಿ ಅದು ನಡೆಸಿದ ಸಮೀಕ್ಷಾ ವರದಿ ಈಗ ಬಹಿರಂಗಗೊಂಡಿದೆ. ಶ್ರೀನಿವಾಸ ಕಾರ್ಕಳ ಆ ವರದಿಯನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ನೀಡಿದ್ದಾರೆ

ಲೋಕನೀತಿ- ಸಿಎಸ್‍ಡಿಎಸ್ ವ್ಯಾಪಕ ವಿಚಾರಗಳ ಮೇಲೆ ಕರ್ನಾಟಕದ ಜನರನ್ನು ಮಾತನಾಡಿಸಿದ್ದು ಅದರಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.  ಮುಖ್ಯಮಂತ್ರಿ ಹುದ್ದೆಗೆ ಯಾರು ಅರ್ಹರು ಎಂಬ ಒಂದು ಪ್ರಶ್ನೆಯನ್ನು ಅದು ಜನರಲ್ಲಿ ಕೇಳಿತ್ತು. ಈ ಪ್ರಶ್ನೆಗೆ ಯುವ ಮತದಾರರಲ್ಲಿ (18-25 ವಯಸ್ಸು) ಶೇ. 40 ಮಂದಿ ಸಿದ್ದರಾಮಯ್ಯರ ಹೆಸರು ಸೂಚಿಸಿದರೆ, ಶೇ. 28 ಮಂದಿ ಬೊಮ್ಮಾಯಿಯವರ ಹೆಸರನ್ನು ಸೂಚಿಸಿದ್ದಾರೆ. ಹಿರಿಯರಲ್ಲಿ (56 ಮತ್ತು ಅಧಿಕ ವಯಸ್ಸು) ಶೇ. 44 ಮಂದಿಗೆ ಆ ಹುದ್ದೆಗೆ ಮಾಜಿ ಸಿದ್ದರಾಮಯ್ಯ ಸೂಕ್ತ ಎನಿಸಿದರೆ, ಶೇ. 22 ಮಂದಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ಅನಿಸಿದ್ದಾರೆ.

ಇದು ಕಿರಿಯರಿಂದ ಹಿಡಿದು ಹಿರಿಯರವರೆಗೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರೇ ಜನಪ್ರಿಯ ಮತ್ತು ವಿಶ್ವಾಸಾರ್ಹ ರಾಜಕಾರಣಿ ಎಂಬುದನ್ನು ಸೂಚಿಸುತ್ತದೆ.


ಯಾರು ಹೆಚ್ಚು ಭ್ರಷ್ಟರು?

ರಾಜ್ಯದಲ್ಲಿ ಯಾರು ಹೆಚ್ಚು ಭ್ರಷ್ಟರು ಎಂಬ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. 59% ಮಂದಿಯ ಪ್ರಕಾರ ಬಿಜೆಪಿ ಭ್ರಷ್ಟ ಪಕ್ಷವಾದರೆ, 35% ಮಂದಿಯ ಪ್ರಕಾರ ಕಾಂಗ್ರೆಸ್ ಭ್ರಷ್ಟ ಪಕ್ಷ.

ದೇಶದ ಪ್ರಧಾನಿ ನರೇಂದ್ರ ಮೋದಿಯವರದ್ದು ‘ನಾ ಖಾವೂಂಗ ನಾ ಖಾನೇ ದೂಂಗ’ ಎಂಬುದು ಪ್ರಸಿದ್ಧ ಸ್ಲೋಗನ್ ಆಗಿದ್ದರೂ ಅವರು ಕೃತಿಯಲ್ಲಿಯೂ ಹಾಗೆಯೇ ನಡೆದುಕೊಂಡಿದ್ದಾರೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಕಂಡು ಕೇಳರಿಯದ ಲಂಚಗುಳಿತನ ಮತ್ತು ಭ್ರಷ್ಟಾಚಾರಕ್ಕೆ ಸಾಕ್ಷಿಯಾಯಿತು. ಗುತ್ತಿಗೆದಾರರ ಸಂಘ ಮತ್ತು ಖಾಸಗಿ ಶಾಲೆಗಳ ಸಂಘ ಪ್ರಧಾನಿಗಳಿಗೇ ಪತ್ರ ಬರೆದು ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದವು. ಆದರೆ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ‘ಚಲ್ತಾ ಹೆ’ ಎಂಬ ನಿಲುವನ್ನು ಅಳವಡಿಸಿಕೊಳ್ಳಲಾಯಿತು. ಅದರ ಪರಿಣಾಮ ಈಗ ಗೋಚರಿಸುತ್ತಿದೆ. ನಲವತ್ತು ಪರ್ಸೆಂಟ್ ಕಮಿಷನ್ ಆರೋಪ ಬಿಜೆಪಿಯ ಇಮೇಜಿಗೆ ಧಕ್ಕೆ ತಂದಿದೆ. ಅದು ಈ ಸಮೀಕ್ಷೆಯಲ್ಲಿಯೂ ಬಹಿರಂಗಗೊಂಡಿದೆ. ಕಾಂಗ್ರೆಸ್ ಭ್ರಷ್ಟ ಪಕ್ಷ ಎಂದು ಬಿಜೆಪಿ ಸದಾ ಹೇಳುತ್ತಿತ್ತು. ಆದರೆ ಕಾಂಗ್ರೆಸ್ ಗಿಂತ ಬಿಜೆಪಿ ಹೆಚ್ಚು ಭ್ರಷ್ಟ ಪಕ್ಷ ಎಂದು ಈಗ ಜನ ಹೇಳುತ್ತಿದ್ದಾರೆ.

ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಯಾರು ಹೆಚ್ಚು ಉತ್ತಮ ಎಂಬ ಪ್ರಶ್ನೆಗೆ 47% ಮಂದಿ ಕಾಂಗ್ರೆಸ್ ಉತ್ತಮ ಎಂದರೆ 37% ಮಂದಿಯ ಪ್ರಕಾರ ಬಿಜೆಪಿ, ಮತ್ತು 14% ಮಂದಿಯ ಪ್ರಕಾರ ಜೆಡಿಎಸ್.

ಮತೀಯ ಸಾಮರಸ್ಯ ಯಾರು ಕಾಪಾಡಬಲ್ಲರು? ಕಾಂಗ್ರೆಸ್ 49% ಬಿಜೆಪಿ 34%

ಇದಲ್ಲದೆ, ರಾಜ್ಯದಲ್ಲಿ ಯಾವ ಸಮುದಾಯ ಯಾರನ್ನು ಹೆಚ್ಚು ಬೆಂಬಲಿಸುತ್ತಿದೆ ಎಂಬ ಬಗ್ಗೆಯೂ ಸಮೀಕ್ಷೆ ನಡೆಸಲಾಯಿತು. ಅದರ ಪ್ರಕಾರ ಲಿಂಗಾಯತರು ಎಂದಿನಂತೆ ಬಿಜೆಪಿ ಪರ ನಿಂತಿದ್ದರೆ, ಮುಸ್ಲಿಮರು ಕಾಂಗ್ರೆಸ್ ಪರ ನಿಂತಿದ್ದಾರೆ. ಒಕ್ಕಲಿಗರು ಸಮಾನವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಹೋಗಿದ್ದಾರೆ.

ಲಿಂಗಾಯತರು ಸಾಂಪ್ರದಾಯಿಕವಾಗಿ ಬಿಜೆಪಿ ಪರ ಇದ್ದರೂ ಈ ಬಾರಿ ಅವರು ಕಾಂಗ್ರೆಸ್ ಪಕ್ಷದ ಪರ ವಾಲಿರುವುದನ್ನು ಇತರ ಅನೇಕ ಸಮೀಕ್ಷೆಗಳು ಸೂಚಿಸಿವೆ. ಇದಕ್ಕೆ ಲಿಂಗಾಯತ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮೊದಲಾದವರನ್ನು ಕಡೆಗಣಿಸಿದ್ದು ಕೂಡಾ ಕಾರಣ ಎನ್ನಲಾಗಿದೆ. ಹಿಜಾಬ್, ಅಜಾನ್, ಹಲಾಲ್, ಹಾಗೆಯೇ ದೇವಸ್ಥಾನ ವಠಾರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದಂತಹ ಬಿಜೆಪಿ ಕಾರ್ಯಸೂಚಿಗಳು ಅದಕ್ಕೆ ರಾಜಕೀಯವಾಗಿ ಮುಳುವಾಗಿದೆ. ಒಂದೆಡೆಯಲ್ಲಿ ಅವರಿಗೆ ಹೆಚ್ಚುವರಿ ಹಿಂದೂ ಓಟು ಬಂದಿಲ್ಲವಾದರೆ ಮುಸ್ಲಿಮರು ಗಟ್ಟಿಯಾಗಿ ಕಾಂಗ್ರೆಸ್ ಹಿಂದೆ ನಿಲ್ಲುವಂತಾಗಿದೆ.

ಬಡವರು ಯಾರ ಪರ?

ಸಮಾಜದ ವಿವಿಧ ಆರ್ಥಿಕ ವರ್ಗಗಳಲ್ಲಿ ಯಾರು ಎಷ್ಟು ಜನಪ್ರಿಯರಾಗಿದ್ದಾರೆ? ಬಡವರು ಕಾಂಗ್ರೆಸ್ ಜತೆಗಿದ್ದರೆ ಧನಿಕರು ಬಿಜೆಪಿ ಪರ ಇದ್ದಾರೆ. 46% ಧನಿಕರಲ್ಲಿ ಬಿಜೆಪಿ ಜನಪ್ರಿಯವಾಗಿದ್ದರೆ 31% ಮಂದಿಯಲ್ಲಿ ಮಾತ್ರ ಕಾಂಗ್ರೆಸ್ ಜನಪ್ರಿಯವಾಗಿದೆ.

ಇಲ್ಲಿ ಇಂದಿರಾಗಾಂಧಿ, ದೇವರಾಜ ಅರಸು ಕಾಲದಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದ ಕಾರ್ಯನೀತಿಗಳ ಜತೆಯಲ್ಲಿ ಸಿದ್ದರಾಮಯ್ಯರ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಇತ್ಯಾದಿ ಬಡವರನ್ನು ಗಮನದಲ್ಲಿರಿಸಿಕೊಂಡ ಅನೇಕ ಕಾರ್ಯಕ್ರಮಗಳೂ ಬಡವರು ಕಾಂಗ್ರೆಸ್ ಹಿಂದೆ ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ ಎನ್ನಬಹುದು.

ಸಮೀಕ್ಷೆಯ ಪ್ರಕಾರ, ರಾಜಕೀಯ ಯಾತ್ರೆಯಲ್ಲಿ ವಿಜಯಸಂಕಲ್ಪ ಯಾತ್ರೆ, ಪಂಚರತ್ನ ಯಾತ್ರೆಯ ಬಗ್ಗೆ ಜನರಿಗೆ ಗೊತ್ತಿದೆಯಾದರೂ, ನಗರದ ಮತ್ತು 56 ಕ್ಕಿಂತ ಅಧಿಕ ವಯಸಿನವರನ್ನು ‘ಭಾರತ ಜೋಡೋ ಯಾತ್ರೆ’ಯೇ ಹೆಚ್ಚು ಗಮನ ಸೆಳೆದಿದೆ.

ಇದನ್ನೂ ಓದಿ –https://peepalmedia.com/if-bjp-wins-karnataka-will-fall-under-rsss-arms/http://ಬಿಜೆಪಿ ಗೆದ್ದರೆ ಆರ್‌ ಎಸ್‌ ಎಸ್‌ ತೆಕ್ಕೆಗೆ ಕರ್ನಾಟಕ

ಒಟ್ಟಾರೆಯಾಗಿ ನೋಡಿದರೆ ಈ ಬಾರಿ ಸ್ಪಷ್ಟವಾದ ಆಡಳಿತ ವಿರೋಧಿ ಅಲೆಯೊಂದು ಗೋಚರಿಸುತ್ತಿದೆ ಎನ್ನಬಹುದು. ಅದೇ ರೀತಿಯಲ್ಲಿ ಇದರ ಲಾಭವನ್ನು ಕಾಂಗ್ರೆಸ್ ಪಡೆಯುತ್ತಿರುವುದೂ ಸ್ಪಷ್ಟ. ಆದರೆ ಸಮೀಕ್ಷೆಗಳು ಹೇಳುವ ಈ ಜನಮತಗಳು ನಿಜಮತಗಳಾಗಿ ಪರಿವರ್ತನೆ ಆಗುತ್ತವೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಅಲ್ಲದೆ ಚುನಾವಣಾ ಫಲಿತಾಂಶವನ್ನು ಸುಲಭದಲ್ಲಿ ಪತ್ತೆ ಹಚ್ಚಲಾಗದ ಅನೇಕ ಅಂಶಗಳು ನಿರ್ಧರಿಸುತ್ತವೆ.

ಇನ್ನು, ಶೇಕಡಾವಾರು ಮತಗಳಿಗೂ ಗೆಲ್ಲುವ ಸ್ಥಾನಗಳಿಗೂ ಸಂಬಂಧ ಇಲ್ಲ ಎನ್ನುವುದನ್ನು ಅನೇಕ ಚುನಾವಣೆಗಳು ಸಾಬೀತುಪಡಿಸಿವೆ. 2018 ರ  ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಶೇ. 38 ಮತ್ತು ಬಿಜೆಪಿ ಗೆ ಶೇ. 36.2 ಶೇಕಡಾವಾರು ಮತ ಸಿಕ್ಕಿದ್ದರೆ, ಅಂತಿಮವಾಗಿ ಕಾಂಗ್ರೆಸ್ ಗೆ ಸಿಕ್ಕಿದ್ದು 80 ಸ್ಥಾನಗಳು ಮತ್ತು ಬಿಜೆಪಿಗೆ ಸಿಕ್ಕಿದ್ದು 104 ಸ್ಥಾನಗಳು ಎಂಬುದನ್ನು ಮರೆಯದಿರೋಣ.

ಶ್ರೀನಿವಾಸ ಕಾರ್ಕಳ

ಚಿಂತಕರು

You cannot copy content of this page

Exit mobile version