ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಜಿಯೋಪಾಲಿಟಿಕಲ್ ಉದ್ವಿಗ್ನತೆಯ ಪರಿಣಾಮವಾಗಿ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಕಂಡುಬಂದಿದ್ದು, ಕೆಲವು ನಗರಗಳಲ್ಲಿ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗುತ್ತಿದೆ. ಇತ್ತೀಚೆಗೆ ತೈಲ ಮಾರಾಟ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿವೆ. ಇದೇ ಸ್ಥಿತಿ ಮುಂದುವರೆದರೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನಲಾಗಿದೆ.
ಇರಾನ್ ಹಾಗೂ ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ತೈಲ ಮತ್ತು ಅನಿಲ ಪೂರೈಕೆ ಸರಪಳಿಗೆ ಪರಿಣಾಮ ಬೀರಿದೆ. ಇರಾನ್ ಸಮೀಪದಲ್ಲಿರುವ ಹಾರ್ಮುಜ್ ಜಲಸಂಧಿ ಮೂಲಕವೇ ವಿಶ್ವದ ಬಹುಪಾಲು ಕಚ್ಚಾ ತೈಲ ಮತ್ತು ಅನಿಲ ಸಾಗಾಟ ನಡೆಯುತ್ತಿರುವುದರಿಂದ, ಆ ಪ್ರದೇಶದಲ್ಲಿ ಉಂಟಾಗುವ ಯಾವುದೇ ಅಶಾಂತಿ ಜಾಗತಿಕ ಇಂಧನ ಮಾರುಕಟ್ಟೆಗೆ ತಕ್ಷಣದ ಪರಿಣಾಮ ಉಂಟುಮಾಡಲಿದೆ.
ಭಾರತ ತನ್ನ ಅಡುಗೆ ಅನಿಲದ ಅಗತ್ಯಗಳಲ್ಲಿ ದೊಡ್ಡ ಪ್ರಮಾಣವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಅಂದಾಜು ಶೇ.60 ರಷ್ಟು ಎಲ್ಪಿಜಿ ಅಗತ್ಯವನ್ನು ಆಮದುಗಳ ಮೂಲಕ ಪೂರೈಸಲಾಗುತ್ತಿದ್ದು, ಅದರಲ್ಲೂ ಹೆಚ್ಚಿನ ಭಾಗ ಮಧ್ಯಪ್ರಾಚ್ಯದ ಸೌದಿ ಅರೇಬಿಯಾ, ಕುವೈತ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಿಂದ ಬರುತ್ತದೆ. ಹೀಗಾಗಿ ಆ ಪ್ರದೇಶದಲ್ಲಿನ ರಾಜಕೀಯ ಅಸ್ಥಿರತೆ ನೇರವಾಗಿ ಭಾರತದ ಅನಿಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ಈ ಹಿನ್ನಲೆಯಲ್ಲಿ ಮಾರ್ಚ್ 7, 2026ರಂದು ತೈಲ ಕಂಪನಿಗಳು ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಸುಮಾರು ₹60 ರಷ್ಟು ಹೆಚ್ಚಿಸಿವೆ. ಇದರೊಂದಿಗೆ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ₹913ಕ್ಕೆ ಏರಿಕೆಯಾಗಿದೆ. ಅದೇ ವೇಳೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ₹114–₹115 ರಷ್ಟು ಏರಿಕೆಯಾಗಿ ₹1,883ರ ಮಟ್ಟ ತಲುಪಿದೆ. ಇದು ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಮುಂದಾಗಿದೆ.
ಮುಂಬೈ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ಅನಿಲ ಪೂರೈಕೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎಂಬ ಮಾಹಿತಿ ದೊರೆತಿದೆ. ಇದರಿಂದ ಕೆಲವು ವ್ಯಾಪಾರಿಕ ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸುತ್ತಿವೆ ಎಂಬ ವರದಿಗಳು ಕೇಳಿಬರುತ್ತಿವೆ.
ಈ ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಪೆಟ್ರೋಲಿಯಂ ಸಚಿವಾಲಯವು ದೇಶದ ತೈಲ ಸಂಸ್ಕರಣಾಗಾರಗಳಿಗೆ ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಿದೆ. ಗೃಹ ಬಳಕೆದಾರರಿಗೆ ಪ್ರಾಥಮ್ಯ ನೀಡುವ ಉದ್ದೇಶದಿಂದ ಸಿಲಿಂಡರ್ ಬುಕ್ಕಿಂಗ್ಗಳ ನಡುವೆ ಕನಿಷ್ಠ 25 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ. ಜೊತೆಗೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅಗತ್ಯ ಸೇವಾ ವಲಯಗಳಿಗೆ ಅನಿಲ ಪೂರೈಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಎಲ್ಪಿಜಿ ಕೊರತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದು, ಜನರು ಅನಾವಶ್ಯಕವಾಗಿ ಸಿಲಿಂಡರ್ ಸಂಗ್ರಹಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
