Home ಜನ-ಗಣ-ಮನ ಧರ್ಮ- ಸಂಸ್ಕೃತಿ ಅಪ್ಪನ ಅದ್ರೆ ಮಳೆ

ಅಪ್ಪನ ಅದ್ರೆ ಮಳೆ

0

ಆರಿದ್ರಾ ಮಳೆ ಕಾಲಿಡುವಷ್ಟರಲ್ಲಿ ಗದ್ದೆಯಲ್ಲಿ ಬಿತ್ತನೆಯ ದೊಡ್ಡ ಪಾಲು ಕೆಲಸ ಮುಗಿಸುವ ಕೃಷಿಕರು ಮಳೆ ಬೆಳೆ ಸಮೃದ್ಧಗೊಳ್ಳಲು ಆರಿದ್ರಾ ಮಳೆಯ ಪರ್ವಕಾಲದಲ್ಲಿ ಗ್ರಾಮದೇವರೂ ಸೇರಿ ಅಗೋಚರ ಶಕ್ತಿಗಳಿಗೆ ಪೂಜೆ ಸಲ್ಲಿಸಿ ಸಂತೃಪ್ತಿಗೊಳಿಸುವ ಪರಿಪಾಠವಿದೆ. ಕೋಳಿ ಕುರಿ ಬಲಿ ನೀಡುವುದೂ ನಡೆಯುತ್ತದೆ. ಈ ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಉಣಬಡಿಸುವುದು ಸಂಪ್ರದಾಯ.  ಡಾ. ಅಣ್ಣಪ್ಪ ಎನ್. ಮಳೀಮಠ್‌ ಇವರು ಆರಿದ್ರಾ ಮಳೆ ಹಬ್ಬದ ಮೇಲೆ ಬರೆದ ಸೊಗಸಾದ ಲಘು ಪ್ರಬಂಧ ಇಲ್ಲಿದೆ.

 ಈ ಗೇರ್ಸರೆ, ಮಳೇಮಠದರನ್ ಸೇರ್ಸೊದೆ ಒಂದ್ ದೊಡ್ ಕೆಲಸ ನೋಡು. ಕಪ್ಪೆ ಹಿಡ್ದು ಕೊಳ್ಗ ತುಂಬ್ದಾಂಗೆ. ಮುಂಡೆ ಗಂಡ್ರು ಒಬ್ಬನೂ ಸುಳಿಯಾಂಗಿಲ್ಲ. ಹಬ್ಬ ಸುರುವಾಗಿ ಎಲ್ಡ ವಾರಾತು. ಅರುವಾಚಾರಿಲ್ಲ. ದೇವ್ರು ದಿಂಡ್ರುನೆಲ್ಲ ಬಿಟ್ಟಹಾಕ್ಯಾರೆ, ಯಾರ್ರು ಬ್ಯಾಡ ಇವರ್ರಿಗೆ. ಹೇಣ್ತಿ ಸೀರೆ ಮುಕ್ಳಾಗೆ ಹೊಕ್ಕಾಂಡಾರೆ. ಊರೆಲ್ಲಾ ಅದ್ರೆ ಮಳೆ ಹಬ್ಬ ಆತ ಬಂದ್ರು ಈ ಬೇಬರ್ಸಿಗಳ್ ಪತ್ತೆ ಇಲ್ಲ ಅಂತ ಅಪ್ಪ ಇದ್ ಬದ್ದಾರಿಗೆಲ್ಲಾ ಸಾಪ ಕೊಟ್ಟ. ನಾನಾದ್ರು ಗೇಸರಿಗೆ ಹೋಗಿ ಬರ್ಲನನ್ನು ಕಂಡು ಬತ್ತೀನಿ ಅಂತ ಅವತ್ ಒಂದ್ ದಿನ  ಹೊಂಟ್. ಈ ಬರ್ಲ ಗೇಸರಿ ಮನೆತನಕ್ಕೆ ಯಜಮಾನ. ಅಪ್ಪ ಹೊಂಟಾನೆ ಅಂದ್ರೆ ಗ್ಯಾರಂಟಿ ಮುಂದಿನ್ ಬಾನುವಾರ ನಮ್ ಮನೆಯಲ್ಲಿ ಅದ್ರೆ ಮಳೆ ಹಬ್ಬ ಅಂತ ನಮಗೆಲ್ಲ ಖುಷಿ ಆತು. ಅಪ್ಪ ಹೊಂಟ್ತಿದ್ದಾಗೆ ಅವ್ವ ಇದ್ದೋಳು, ಅಲಾ ಹಬ್ಬ ಮಾಡೋರು ನೀವ್ ಒಬ್ರೆನಾ. ಗೇಸರಿ, ಮಳೆಮಠ ಸೇರಿ ಹದಿನೈದ್ ಮನೆಯಲ್ಲೂ ಜನ ಇಲ್ಲಾನು. ಆ ತರ ಕೂಕೆಂತ ಹೊಲ್ಡಾಕೆ. ಈ ಮುದುಕೂಗೆ ಕೆಲಸ ಇಲ್ಲಾ ನೋಡ್ ಇಲ್ಲಿ ಕೂಗಾಕೆ ಬಂದಾನೆ ಅಂತ ಯಾರಾದ್ರು ಅನ್ನಾಕೆ ಸೈ. ಸುಮ್ಮನೇ ಇರೋದ್ ಬಿಟ್ಟು. ಮರ್ವಾದೆ ತಗಸಣಕೆ ಹೊಂಟೀರಿ. ಏ ತಮ್ಮಾ ನಿನ್ ಅಪ್ಪಂಗೆ ಹೇಳು. ಗೇಸರಿಗೆ ಹೋಗೋದ್ ಬ್ಯಾಡ ಅನ್ನು ಅಂತ ಅವ್ವ ಒಳಗಿಂದ ಅಪ್ಪಂಗೆ ಬೈಯ್ಯಾಕೆ ಸುರು ಮಾಡುದ್ಲು. ಇದನ್ ಕೇಳಸ್ಕಂಡ ಅಪ್ಪ ನೀನೊಬ್ಳು ಕುಂಟ್ಲಿಗಿತ್ತಿ, ಬಾಷೆ ಬರ್ದಿದ್ದೋಳು. ನಿನೆಗೆಂತ ಸಾಟ ಗೊತ್ತೈತೆ ಕುತ್ಗ ಸುಮ್ಮನೇ ಅಂತ ಬೈದ್ ಹೊರಟ. ಹೊಂಟವ್ನೆ ಅಂಗಳದಾಗೆ ತನ್ ಚಪ್ಪಲಿ ಹುಡಿಕಿದ್ರೆ ಅವು ಕಾಣ್ದೆ ಮನೆ ಒಂದ್ ಸುತ್ ಬಂದ. ಸಿಗಲಿಲ್ಲ. ಇದ್ದೋರೆಗೆಲ್ಲಾ ಸಾಬ್ಸಾಕೆ ಹಿಡ್ದ. ಏ ಕೇತಿಮಂಗ ಚಪ್ಲಿ ಎಲ್ಲಿ ಇದಾವೆ ನೋಡು ಅಂತ ತನ್ನ ಕರಿಮುಖದ ಕೆಂಗಣ್ಣಿಂದ ನೋಡ್ದಾ. ನಾನ್ ಸಣಣ್ಣ ಹಾಕ್ಯಂದು ಹೋದ್ನೇನಾ ಅಂದೆ. ತಗಾ ಬಿಗಿ ಅಂತ ಸುರು ಮಾಡ್ದ. ಅವನ್ ಗಟ್ಟಿ ದನಿಯ ಪದಗಳು ಯಂತವನಿಗಾದ್ರು ಇವರ್ ಮನೆಯಲ್ಲಿ ಅಪ್ಪ ಮಕ್ಳು ಹೊಡ್ಕಂತಿದಾರೆ ಅನ್ನೋದೆ ಸೈ.  ಆ ಹಡ್ಬೆ ನನ್ನ ಮಗಂಗೆ ನನ್ನ ಚಪ್ಲೆ ಬೇಕು. ತಂದ್ ಕೊಡೋಂವ ಯಾ ನನ್ ಮಗನೂ ಇಲ್ಲ. ಬೇವರ್ಷಿಗಳು ಬೇವರ್ಷಿಗಳು ಅಂತ ಎರಡೆರಡು ಸಾರಿ ಬೈದ. ಅಷ್ಟೊತ್ತಿಗೆ ದನಿಗೆ ಹುಲ್ ತರಕಂತ ಕಣಕ್ಕೆ ಹೋದ ಸಣಣ್ಣ ಅಪ್ಪನ್ ಕಾಲಷ್ಟೆ ಅಗಲವಾಗಿರೋ ಪ್ಯಾರಗಾನ್ ಚಪ್ಲಿ ಹಾಕೊಂಡು, ಹುಲ್ ಹೊತಗಂಡು ಚಟ ಚಟ ಸಬ್ದ ಮಾಡ್ಕಂಡು ಬಂದ. ಈ ಹೇಲ್ ತಿನ್ನೋ ಮುಂಡೆಗಂಡ್ರು ನನ್ ಚಪ್ಪಿನೂ ಉಳಿಸಲ್ಲ. ಇನ್ ಯಾವನಾರ್ ಮುಟ್ಬೇಕು. ಆಮೇಲಿದಾವೆ ಹಚಡ ಅಂತ ಗೇಸರಿ ಕಡೆ ಹೊಂಟ. ಇತ್ ಅಪ್ಪ ಹೋದದ್ದು ಗೊತ್ ಮಾಡ್ಕಂಡ ನಾನು ಸಣಣ್ಣಂಗೆ ನಿಂಗೆ ಅವ್ನ ಚಪ್ಪಿನೇ ಬೇಕಿತ್ತನಾ ಮರಾಯ ಅಂದೆ. ಅದಕ್ಕೆ ಅವ್ವ ನಿನ್ ಅಪ್ಪ ಹುಟ್ಟಾಪೂರ ಒಂಟ್ಗ್ಯಾ. ಅವರ್ ವಸ್ತು ಯಾರ್ ಮುಟ್ಟಾಂಗೆ ಇಲ್ಲ. ಸಾಯ ವಯಸ್ ಬಂದ್ರು ಯಾವಾಗೆಲ್ಲ ಕಲಿತಾವೇನಾ ಬುದ್ದಿ. ಅಂತ ಅಪ್ಪಂಗೆ ನಮ್ಮೆದುರಿಗೆ ಬೈದು ಸುಮ್ಮನಾದ್ಲು. 

ಅಂತು ಅಪ್ಪ ಗೇಸರಿಗೆ ಹೋಗಿ ಮುಂಜ್ ಸಣಪ್ಪನ ಹತ್ರ ಮಾತಾಡಿ  ಬರೋ ಬಾನುವಾರ ಹಬ್ಬ ಅಂತ ಸುದ್ದಿ ಅದೇ ರಾತ್ರಿ ತಂದ. ಹಬ್ಬದ್ ಸುದ್ದಿ ತಂದದಕ್ಕೆ ನಮಗೆ ಖುಷಿಯೋ ಖುಷಿ. ಅಷ್ಟೊತ್ತಿಗೆ ಅವ್ವ ಇದ್ದೋಳು ಹಕ್ಲ ಮನೆ ಲಲಿತ ರಜದ್ದು ದಿನ ಅಂತಿದ್ಲು. ಮನೆ ಹೆಂಗಸ್ರುನ ಸ್ವಲ್ಪ ಕೇಳಿದ್ರೆ ಗನಾಗಿತ್ತು ಅಂದ್ಲು. ಇದನ್ ಕೇಳಿದ್ ಅಪ್ಪ ನೀನೊಬ್ಲು ಚೌರ್ ಗಿತ್ತಿ. ಏನಾದ್ರು ತಂದಿಟ್ತಿ. ಹೆರಗಾಗ್ರು ಇದ್ದೆ ಬಚ್ಚಲು ಮನೆಯಲ್ಲಿ ಮಲಕ್ಕಂಡ್ಲಿ. ಇಲ್ಲಾ ಮನೆ ಬಿಡ್ಲಿ. ಇದ್ದರೋ ಹಬ್ಬ ಮಾಡ್ತಾರೆ. ಇನ್ ದಿನ ದಬ್ಬಾಕೆ ಅದ್ರೆ ಮಳೆ ಹಬ್ಬ ಬಿಡಬೇಕಷ್ಟೆ ಅಂತ ತನ್ನ ಕಡಕ್ ನಿರ್ಧಾರ ಮಾಡ್ದ. ತಮ್ಮಾ ನಾಳೆ ಬೆಳಿಗ್ಗೆ ಹೋಗಿ ಮನೆತನದವಕ್ಕೆ ಹೇಳು ಮುಂದಿನವಾರ ಹಬ್ಬ ಅಂತ ಅಂದ. ನಾನು ಬೆಳಗಾಗದನ್ನೆ ಕಾದು ಎಲ್ರಿಗೂ ಹೇಳ್ ಬಂದೆ. ಅದಕ್ ಯಾರಾದರೂ ಆಗಲ್ಲ ಪಾಗಲ್ಲ ಅಂದಾರೂ ಅಂತ, ಬಾನುವಾರ ಬಿಟ್ಟು ಬೇರೆ ವಾರ ಇಡಬಹುದಿತ್ತು ಅಂದಾರು ಅಂತ ಒಂದಷ್ಟು ಸುಳ್ಳನ್ನು ಸೇರಿಸಿ ಹೇಳ್ದೆ. ಮುಂದಿನ ಬಾನುವಾರ ಬಿಟ್ರೆ ಗೇಸರಿಯರಿಗೆ ಆಗಲ್ಲ ಅಂತೆ, ಅವರ್ ಮನೆಯ ನಾಕ್ ಜನ ಹೆಂಗಸ್ರು ವಾರ್ ಬಿಟ್ರೆ ರಜ ಆಗರು ಇದ್ದಾರಂತೆ ಹಂಗಾಗಿ ಮುಂದಿನವಾರ್ ಸೂಕ್ತ ಅಂತೆ ಹೇಳ್ದೆ. ಅದಕ್ಕೆ ಅವರ್ ಆಗ್ಲಿ ಎಲ್ಲರಿಗೂ ಆದಂಗೆ ನಮ್ಗೆ ಅಂದ್ರು. ಅಂತು ಸುದ್ದಿ ಮುಟ್ಸಿ ಮುಂದಿನ್ ವಾರ್ ಅದ್ರೆ ಮಳೆ ಹಬ್ಬದ್ ಖುಷಿಯಲ್ಲಿ ಬಂದೆ.

ಒಂದ್ ವಾರ ಒಂದ್ ವರ್ಷ ಕಳೆದ ರೀತಿಯಾದ ನಂಗೆ ಅವ್ವ ದುರ್ಗಿಗೆ ಬಿಟ್ ಕೋಳಿ ಒಂದ್ ವಾರ ಬದುಕಿದ್ರೆ ಸಾಕಪ್ಪ ಅಂತಿದ್ದೆ. ಹುಲಿಬೆಕ್ಕಿನ ಕಾಟ ಊರೆಲ್ಲ ಹಬ್ಬಿ ನಮ್ಮನೇ ಕೋಳಿ ಹೋತು ನಮ್ಮನೇ ಕೋಳಿ ಹೋತು ಅಂತ ಸುದ್ದಿಯಾಗಿತ್ತು. ನಮ್ಮನೆಯಲ್ಲಿ ನಾಯಿ ಕರಿಯನ್ ಮೇಲೆ ಅತಿಯಾದ ನಂಬಿಕೆ ಇದ್ರಿಂದ ಸ್ವಲ್ಪ ಧೈರ್ಯ ಇತ್ತು. ಆದ್ರೂ ಒಂದ್ ಅಳುಕಿತ್ತು. ಅವತ್ತು ಬುದುವಾರ ಸೊಗೇದ ಸೇಕ್ರಣ್ಣ ಬ್ಯಾಟ್ರಿಗಂತ ಹೋದಾಗ ನಮ್ಮನೇ ಕೆರೆ ಪಕ್ಕದಲ್ಲಿ ಹೊಂಚ್ ಹಾಕ್ತಿದ್ದ ಹುಲಿ ಬೆಕ್ಕು ಕಣ್ ಕೊಟ್ಟೈತೆ. ಚೆಂದ ಮಾಡಿ ಬಿಗ್ದಾನೆ. ನೆಗ್ದ ಬಿದ್ದೈತೆ.

ಹುಲಿಬೆಕ್ಕು ಸತ್ ಸುದ್ದಿ ಶಾಲೆಯಿಂದ ಬಂದ ನಮಗೆ ತಿಳಿತಿದ್ದಂತೆ ಖುಷಿಯಿಂದ ಅಂಗಳ ತುದಿ ಹೋಗಿ ಕೋ ಕೋ ಅಂತ ಕೋಳಿ ಕರ್ದೆ. ಎಷ್ಟು ಕರೆದ್ರು ಬರಂಗಿಲ್ಲ. ಅತ್ತ ಯತ್ಲಾಗಿ ಹೋತು ಅಂತ ಕೆರೆಕಡೆ ಹೋಗಿ ನೋಡ್ದೆ. ಎಂದಿನಂತೆ ತನ್ನ ಪ್ರೇಯಸಿ ಹೆಂಟೆ ಜೊತೆ ಸರಸ ಸಲ್ಲಾಪದಲ್ಲಿ ಮುಳುಗಿ ಹೋಗಿದೆ. ಈ ಪರಪಂಚದಲ್ಲಿ ನನ್ನವಳು ಅಂತ ಇದ್ರೆ ನೀನೊಬ್ಬಳೆ. ಯಾರೂ ಇಲ್ಲ. ನಂಗೆ ನೀನು, ನಿಂಗೆ ನಾನು ಬಾ ನನ್ ಅರಸಿ ಅಂತ ತನ್ನ ಅಗಲ ರೆಕ್ಕೆ ಬಿಚ್ಚಿ ಅದರ ಸುತ್ತ ಪದೇ ಪದೇ ರೌಂಡ್ ಹೊಡಿತಾನೆ ಇದೆ. ಇದನ್ ಯಾವುದಕ್ಕು ಲೆಕ್ಕ ಹಾಕದ ಹೆಂಟೆ ಅತ್ತ ಇತ್ತ ಏನೇನೋ ನೋಡ್ತಾ. ಒಮ್ಮೆ ಮೇಲೆ ಒಮ್ಮೆ ಕೆಳಗೆ ನೋಡ್ತಾ ದಶ ದಿಕ್ಕಿನಲ್ಲಿ ತನ್ನ ಕಣ್ನೋಟವನ್ನು ಬೀರ್ತಾ ಇತ್ತು. ಆದರೆ ಹುಂಜ ತನ್ನರಸಿಯನ್ನು ಬಿಟ್ಟು ಜಗತ್ತೆಲ್ಲಾ ಶೂನ್ಯ ಅನ್ನೋ ತೆರೆದಿ ಪ್ರೇಮ ಕಾಮದಲ್ಲಿ ಮುಳುಗಿತ್ತು. ಇದನ್ನು ನೋಡ್ದಾ ನಾನು ಬಡ್ಡಿಮಗನ್ದು ಇಲ್ಲೇ ಇದಿಯಲ್ಲಾ ಅಂತ ಸಮಧಾನ ಮಾಡ್ಕಂಡೆ. ಇರು ಇರು ಇದ್ ಬದ್ ಹೆಂಟೆಗಲ್ಲ ನೀನೇ ಹೀರೋ. ಒಂದ್ ಎರಡ್ ದಿನ ತಡಿ. ನಿನ್ ಅರ್ಬಟ ಮುರಿತೀನಿ. ನಿನ್ನನ್ನು ಅವ್ವ ದುರ್ಗಿಗೆ ಬಿಟ್ಟಾಳೆ. ನಿನ್ ತೊಳ್ಳೆ ಹುರಿಯಾಕೆ ನಾ ರೆಡಿ ಇದೀನಿ ಅಂತ ಅದ್ಕೊಂಡು ಮನೆಗೆ ಬಂದೆ.‌

 ಅವತ್ ಅದ್ರೆ ಮಳೆ ಜೊರ್ರೊ ಅಂತ ಸುರಿತಿತ್ತು. ಅಂಗಳದಾಗೆ ಜಿಟಿ ಜಿಟಿ ಮಳೆಯಿಂದ ಕೆಸರ ರಾಡಿ ಎದ್ದಿತ್ತು. ಇದ್ ಬದ್ ಕೋಳಿಯೆಲ್ಲಾ ತಾವ್ ಓಡಾಡಿದೆಲೆಲ್ಲಾ ಪಿಚಿ ಪಿಚಿ ಹೇತು, ಆ ಹೇಲು ಕೆಸರಿನೊಂದಿಗೆ ಸೇರಿತ್ತು. ಕೆಸರು ಮತ್ತು ಹೇಲು ನಡುವೆ ವ್ಯತ್ಯಾಸ ಗೊತ್ತಾತಿರಲಿಲ್ಲ. ಅವ್ವ ಅಂಗಳದಾಗೆ ನಡಿತಿದ್ದಂಗೆ ಅವಳ ಕಾಲು ಬೆರಳು ಸಂದಿಯಲ್ಲಿ ಕೋಳಿ ಹೇಲು ಪಿಚ ಪಿಚ ಅಂತ ಏಳುತಿತ್ತು. ಅವ್ವ ನಾಳೆ ಬರೋ ಹಬ್ಬಕ್ಕೆ ತಯಾರಿಯ ಒತ್ತಡದಲ್ಲಿ ಮನೆ, ಕೊಟ್ಟಿಗೆ, ಬಚ್ಚಲು ಮನೆ ಅಂತ ಓಡಾಡ್ತ ಇದ್ರೆ, ಅವಳ ಹಿಂದೆ ಕೋಳಿಗಳೆಲ್ಲ ಏನಾದ್ರು ಸಿಗಬಹುದಾ ಅಂತ ಹೆಜ್ಜೆ ಹಾಕ್ತಾ ಇದ್ವು. ಕೋಳಿ ಹೆಜ್ಜೆ, ಅಲ್ಲಲ್ಲಿ ಕೆದರಿದ ಉಗುರಿನ ಬರೆಗಳು ಅಂಗಳದಲ್ಲಿ ಕೆಸರ ರಂಗೋಲಿ ಬಿಡಿಸಿದಂತಿತ್ತು. 

 ಮಾರ್ನೆ ದಿನದ ಅದ್ರೆ ಮಳೆ ಹಬ್ಬಕ್ಕೆ ಸಣಣ್ಣ ಇಡಿ ಬಾಳೆಗೊನೆ, ಬಾಳೆ ಚಿಪ್ಪು, ಬಾಳೆ ಎಲೆ ತಯಾರು ಮಾಡಿ ತೆಂಗಿನ ಮರದಡಿ ಇಟ್ಟಿದ್ದ. ಮನೆದೇವರು ಬೀರಪ್ಪಂಗೆ ಒಂದು ಇಡಿಗೊನೆ, ದುರ್ಗಮ್ಮಂಗೆ ಒಂದು ಇಡಿಗೊನೆ ಅಂತ ಎರಡು ಬುಟ್ಟಿ ಮಾಡಿ ಇಡ್ತಿದ್ದ. ಹೋದ್ ವರ್ಷ ದುರ್ಗಿಗೆ ಹರಕೆ ಐತಿ, ದನ ಕರ ಮರಿ ಒಳ್ಳೇದಾಗ್ಲಿ ಅಂತ ಹುಂಜನ್ ಬಿಟ್ಟೈತೆ. ಅದಕ್ಕೆ ಒಂದ್ ಕಾಯಿ, ಒಂದ್ ಚಿಪ್ಪು ಇಡಬೇಕು ಅಂತ ತಾಕೀತು ಮಾಡಿದ್ಲು. ಅಂತೂ ಅಣ್ಣ ದುರ್ಗಮ್ಮನ ಹಣ್ಣುಕಾಯಿ ಬುಟ್ಟಿಯಲ್ಲಿ ದುರ್ಗಮ್ಮಂಗೂ ಸೇರಿಸಿ ಉಳಿದ ದೈವಗಳಾದ ಬೂತಪ್ಪ, ಯಕ್ಷ, ಜಟಗ ಮುಂತಾದವುಗಳಿಗೆ ಒಂಬತ್ತು ಬಾಳೆ ಚಿಪ್ಪು, ಒಂಬತ್ತು ಕಾಯಿ, ಕೋಳಿ ಇದ್ರೆ ಹೆಚ್ಚುವರಿ ಕಾಯಿ, ಚಿಪ್ಪು ಅಂತ ಅನುಮಾನ ಬಂದಾಗೆಲ್ಲ ಅವ್ವನ ಸಲಹೆ ತಗೋತ ತುಂಬಿಟ್ಟ. 

ಇತ್ತ ಅವ್ವ ಇಷ್ಟು ವರ್ಷ ಆದ್ರು ದೇವರಿಗೆ ಸರಿಯಾಗಿ ಹಣ್ಣುಕಾಯಿ ತುಂಬಾಕೆ ಬರಲ್ಲ. ಹಿಂಗೆ ಮುದುಕರು ಆದ್ರಿ ನೋಡಿ ಅಂತ ಹೇಳ್ತಾನೆ ಬಚ್ಚಲುಮನೆಯನ್ನ ಸೆಗಣಿಯಂದ ಸಾರ್ಸತ್ತಾ ಇದ್ಲು. ಸಂಜೆ ಕೋಳಿ ಕಾಲ್ ಕಟ್ಟೋದು ಮರಿಬೇಡ ಅವ್ವ ಅಂದೆ. ಆ ಕೋಳಿ ಅವ್ವನ ಮಾತನ್ನ ಮಾತ್ರ ಕೇಳೋದು. ಬೇರೆಯವರ್ ಕಂಡ್ರೆ ಯಲ್ಡು ಮಾರ್ ದೂರ. ಹಂಗಾಗಿ ಅವ್ವನಿಗೂ ಇದು ಅರಿವಿತ್ತು. ಯಂತಾರೂ ಮಾಡಿ ಒಡ್ಡಿ ಕೂಡಿ ಇವತ್ತೆ ಹೆಡೆಮುರಿ ಕಟ್ಟಿ ಕೂರಿಸಬೇಕು ಅಂತ ಯೋಚಿಸ್ಕಂಡಿದ್ಲು. ಮುರಸಂಜಿಗೆ ಅವ್ವ ನನ್ ಕರೆದ್ದು, ಬಾ ತಮ್ನ ಹುಂಜನ್ ಹಿಡ್ದು ಕಾಲ್ ಕಟ್ಟಾನ. ನಾಳೆ ದುರ್ಗಮ್ಮಗೆ ಕೋಳಿ ಇಲ್ದೆ ಹೋದಾತು ಅಂತ ಕರೆದ್ಲು. ಇದನ್ನೆ ಕಾಯ್ತಿದ್ದ ನಾನು ಸೆಣಬಿನ ಹುರಿ ತಕ್ಕಂಡು ಅದರ ಕಾಲ ಬಿಗಿ ಹಿಡ್ದು ಕಟ್ಟಿ ಒಡ್ದಿಲೇ ಮಲಗಿಸಿದ್ದಾತು. 

 ಬೆಳಗ್ಗೆ ಹಬ್ಬದ ದಿನ ಅವ್ವ ಎದ್ದೋಳೆ ಒಡ್ಡಿಲಿದ್ದ ಉಳಿದ ಕೋಳಿ ಹೋಗ್ಲಿ, ಇದನ್ ನುಚ್ಚು ಹಾಕಿ ಕೌಂಚನಾ ಅಂತ ಬಾಗ್ಲು ತಗುದ್ರೆ ಮೊದ್ಲು ಓಡಿದ್ದೆ ಈ  ಹುಂಜ. ಅಯ್ಯೋ ದೇವರ್ರೆ ಅಂತ ಅವ್ವ ಒಂದೇ ಬಾರಿ ಕೂಗಿದ್ಲು. ಅವ್ವನ ದನಿಗೆ ಹಾಸಿಗೆಲಿದ್ದ ನಾನು, ಅಣ್ಣ, ಅಪ್ಪ, ತಿಂಡಿ ಮಾಡ್ತಿದ್ದ ಅಕ್ಕಂದಿರೆಲ್ಲಾ ಓಡಿದ್ದಾತು. ಇವತ್ತು ಕೋಳಿ ಸಿಗೋದು ಕನಸಿನ ಮಾತು ಆತು. ಕಾಲ್ ಹೆಂಗೆ ಕಟ್ಟಿದ್ದ ತಮ್ಮಾ ಅಂತ ಅವ್ವ ಕೇಳಿದ್ರೆ, ಅಪ್ಪ ಕಟ್ಟಿದ್ದು ನೀನೇನ. ಇವತ್ತು ಕೋಳಿ ತಿನ್ನೋದಲ್ಲ ಕೋಳಿ ಹೇಲು ತಿನ್ನು. ಹೆಣ್ ಗಂಟ್ ಹಾಕಿದ್ನೇನೋ ಹೆಣಗ. ಬಂಗಾರದಂತ ಕೋಳಿ. ಹಬ್ಬಕ್ಕೆ  ಬರಾಕೆ ಜನಕ್ಕೆ ಬೇರೆ  ಹೇಳಿರಿ. ಅವರಿಗೆ ಏನ್ ಹಾಕ್ತೀರ. ಎಲ್ಲಾರು ಸಗಣಿ ತಿನ್ನಾಕೆ ಹೋಗು. ಮುಕ್ಳಿ ಮುಚ್ಚಗಂಡು ಕೋಳಿ ಹಿಡ್ಕಂಡ ಬಾ. ಇಲ್ಲಾಂದ್ರೆ  ನಿನ್ ಮನೆ ಸೇರಸಾಂವ ಯಾಂವ ನೋಡ್ತೀನಿ ಅಂತ ಗದರಿಸಿದ. ಕೋಳಿ ಬಿಟ್ಟ ಅಪರಾಧಿಗಳು ನಾನು ಮತ್ತು ನನ್ನವ್ವ ಇಬ್ರೆ. ಏನ್ ಮಾಡೋದು  ಅಂತಿದ್ದಾಗ ಅವ್ವ ದುರ್ಗಮ್ಮ ಇದಾಳೆ. ಬೇಕಾದ್ರೆ ಸಿಗಂಗೆ ಮಾಡ್ತಾಳೆ ಅಂತ ಅಂದ್ಲು. ಒಂದು ಕೋಳಿ ಸಿಗೋ ಶಕ್ತಿ ದುರ್ಗಮ್ಮಂಗೆ ಇಲ್ಲಾಂದ್ರೆ ಯಂಥಕ್ಕೆ ಅವು ಅಂತ ಸಮಾಧಾನ ಮಾಡಿದ್ಲು. ಆದರೆ ಕೋಳಿ ಅವ್ವಂಗೆ ಗ್ಯಾರಂಟಿ ಸಿಗುತ್ತೆ ಅನ್ನೋದು ನಮ್ಮ ನಿರೀಕ್ಷೆ. 

ದೈವದ ಅಂಗಳ  ಕೆತ್ತೋಕೆ ಹೋಗಿ ಬಂದ ಸಣಣ್ಣ ಪೂಜೆ ಸಮಯ ಆತು ಕೋಳಿ ಕತೆ ಯಂತದೋ ಮರಾಯ ಅಂದ. ಅಲ್ಲೇ ಇದ್ದ ಅಪ್ಪ ಸಾಟ ಹರಿರಿ. ಕೋಳಿ ಸಿಗ್ತೈತ ಮತ್ಯಂತು. ಹೇಲ್ತಿನ್ನಿ. ಕ್ವಾಸ್ ನಾಡಿ ನನ್ ಮಕ್ಳು ಅಂತ ಮತ್ತೆ ಬೈಯಾಕೆ ಸುರು ಮಾಡ್ದ. ಒಡ್ಡಿ ಬಾಗ್ಲು ತಗಿಬಾಕರೆ ನೋಡಿ ತಗಿಯೋದಲ್ಲ ಹಂಗಾರೆ. ಬೇಬರ್ಸಿ ಮುಂಡೇವು ಅಂತ ಬೈದ. ಅಪ್ಪಂಗೆ ಸಂಜೆ ಕೋಳಿ ತುಕಡಿ ತಪ್ತಾಲ್ಲ ಅಂತ ಬಾರಿ ಸಿಟ್ಟು. ಎಲ್ಲಾರು ಸೇರಿ ಹಿಡಿಯನ ಇನ್ ಬೇರೆ ದಾರಿ ಇಲ್ಲ ಅಂತ ನಾ ಎಲ್ರೂನ ಕರೆದೆ. ಅಪ್ಪ ಹಿಡ್ಕಂಡು ಸಾಯ್ರಿ ಅಂತ ಹೋದ. ಕೋಳಿ ಹಿಡಿಯಕೆ ಒಂದಷ್ಟು ನುಚ್ಚು ತಗಡು ಹಂಗೆ ಒಂದ್ ದೊಡ್ ಜೆಲ್ಲಿ ತಗಂಡು ಅಮ್ಮ ರೆಡಿಯಾದ್ಲು. ಕೋ ಕೋ ಅಂತ ಅವ್ವ  ಕರೆದ್ ತಕ್ಷಣ ನಾಮುಂದು ತಾಮುಂದು ಅಂತ ಪುರ್ರನೆ ಹಾರಿ ಕೊಟ್ಟಿಗೆಗೆ ಬಂದ್ವು. ಹುಂಜನೂ ಬಂತು. ಆದರೆ ಅದಕ್ಕೆ ಈಗಾಗ್ಲೆ ಅನುಮಾನ್ ಇದ್ರಿಂದ ದೂರ ದೂರ ಹೆಜ್ಜೆ ಹಾಕ್ತು. ತಂದ್ ನುಚ್ಚು ಕಾಲಿಯಾದ್ರು ಕೋಳಿ ಸಿಗಲಿಲ್ಲ. ಇನ್ನು ಆ ಕಡೆ ಈ ಕಡೆ ಎಲ್ಲಾ ಸುತ್ತುವರಿದ್ದು ಹಿಡಿಲೇ ಬೇಕು ಅಂತ ಹಠ ತೊಟ್ಟಾಯಿತು. ಕೊಟ್ಟಿಗೆ ಸಕಲ ದಿಕ್ಕಿಗೂ ಒಬ್ಬೊಬ್ಬರಾಗಿ ನಿಂತಾಯಿತು. ಎಲ್ಲರೂ ದೀರರೇ. ನಿಂತ ಸ್ವರೂಪದಲ್ಲಿ. ಯಾರೂ ಹಿಡಿತರೋ ಸಂಜೆ ನಾಕು ತುಕುಡಿ ತುಂಡು ಜಾಸ್ತಿ ಅಂತ ಆಸೆ ಪಣ ಇಟ್ಟಾತು. ಕೋಳಿ ಆ ಕಡೆ ಈ ಕಡೆ ಬಂದು ನನ್ನ ಕೈ ಸಂದಿಯಲ್ಲಿ ತಪ್ಪಿಸಿಕೊಂಡು ಓಡಿ ಹೋತು.  ಅಯ್ಯೋ ಅಂತ ಕೂಗಿದ್ದಾತು. ಪುನಃ ಬೆರಸಿಗಂಡು ಓಡಿದ್ದಾತು. ನಮ್ಮ ಕೂಗಿಗೆ ಹಣ್ ಕಾಯಿ ಕೊಡಾಕೆ ಬಂದಾರೆಲ್ಲ ಸೇರ್ಕಂಡು ಕೋಳಿ ಹೋದಲೆಲ್ಲಾ ಬೆನ್ನಟ್ಟಿದ್ದಾತು. ಅಷ್ಟೊತ್ತಿಗೆ ಅವ್ವ ಕೋಳಿಗೆ ಯಾರಾದರೂ ಗಾಯ ಮಾಡಿದ್ರಾ. ಅದು ದುರ್ಗಿಗೆ ಕೊಯ್ಯ ಕೋಳಿ. ಹುಷಾರು. ಅಂತ ಕೂಗಿ ಕೂಗಿ ಹೇಳ್ತಿದ್ಲು. ನಮ್ಮ ಬೆರಸಾಟಕ್ಕೆ ಕೋಳಿ ಓಡಿ ಚೆಂಚೆಗೆ ಮಟ್ಟಿಗೆ ಸೇರ್ಕಂತು. ಇದೇ ಒಳ್ಳೆಯ ಸಮಯ ಅಂತ ನಾವೆಲ್ಲ ಸುತ್ತುವರಿದಿದ್ದಾತು. ನಾನು ನಿಧಾನ ಒರ್ಕಂಡು ಮಟ್ಟಿ ಒಳಗೆ ಹೋಗಿ ಅದರ ಕಾಲ್ ಹಿಡ್ಕಂಡು ಯಳ್ಕ ಬಂದೆ. ಅದರ ಎರಡು ಕಾಲಿನ ತೊಡೆ ಭಾಗಕ್ಕೆ ಗಟ್ಟಿಯಾಗಿ ಸೆಣಬಿ ದಾರದಾಗೆ ಬಿಗ್ದೆ. ಓಡಿ ಓಡಿ ಸೋತು ಸುಣ್ಣವಾಗಿದ್ದ ಕೋಳಿ ದುರ್ಗಮ್ಮಂಗೆ ಮತ್ತು ಅದರ ಭಕ್ತರಿಗೆ ಆಹಾರವಾಗುವುದಂತು ನಿಶ್ಚಿತವಾಯ್ತು. 

 ಇತ್ತ ಹದಿನೈದು ಮನೆಯವರು ಹಣ್ಣುಕಾಯಿ ಹಿಡ್ಕಂಡು ನಾವು ಬರೋದನ್ನೆ ಕಾಯ್ತಿದ್ರು. ದುರ್ಗಮ್ಮಂಗೆ ತಾವು ತಂದ ಇಡಿಗೊನೆ, ಚಿಪ್ಪು, ಕಾಯಿ ಇಟ್ಟಿದ್ರು. ಹುಡ್ರೆಲ್ಲಾ ನಮ್ಮನೇ ಕೋಳಿ ದೊಡ್ಡದು, ನಿಮ್ಮದು ಸಣ್ಣದು ಅಂತ ಲೆಕ್ಕ ಹಾಕ್ತಿದ್ದವು. ಅದರ ಕೆಲವರು ಕೋಳಿ ತುಂಬಿದ ಚೀಲ ಜಂಬೆ ಮರಕ್ಕೆ ನೇತು ಹಾಕಿದ್ರು. ಕೆಲವು ಕೋಳಿ ಚೀಲದೊಳಗೆ ಕೊಕ್ಕಕ್ಕ ಅಂತಿದ್ರೆ, ಕೆಲವು ಅಮಾಯಕರಂತೆ ಕಣ್ ಪಿಳಿ ಪಿಳಿ ಬಿಡ್ತಿದ್ವು. ಕೆಲವು ತೆವಳಿ ತೆವಳಿ ಬಿದರಮಟ್ಟಿ ಸೇರಿದ್ವು. 

 ಅಪ್ಪ ಬಂದಮೇಲೆ ದುರ್ಗಮ್ಮನ ಪೂಜೆ ಸುರು. ನಿಮ್ಮ ಕಲಗತಿಯಿಂದ ಲೇಟಾತು ಮರಾಯ. ಇನ್ ಹದಗಬ್ಯಾಡ ಬೇಗ ಮಾಡು ಎಂದು ಗೇಸರಿ ಯೋಗೇಂದ್ರಣ್ಣ ಹೇಳಿದ್ದೇ ತಡ. ತುಣ್ಣಿಮೇಲ್ನವ ಎಷ್ಟು ಪೂಜೆ ಮಾಡಿಯಾ ಗೊತ್ತು ಸುಮ್ಮನಿರು. ಲೇಟಾಗಿದ್ದಕ್ಕೆ ನಾನ ಕಾರಣ. ಯಾರ ಕಾರಣ ಕೇಳು. ನಾನು ಪೂಜೆ ಮಾಡಾಂಗೆ ಮಾಡ್ತಿನಿ. ತೆಪ್ಪಗಿರು ಅಂದ. ಮಾತಿಗೆ ಮಾತು ಬೆಳಿತಿತ್ತು. ಅಷ್ಟೊತ್ತಿಗೆ ನಮ್ಮನೇ ಅಯ್ಯ ಸುಮ್ಕಿರ್ರಾ ಯಂತಾ ವಾದ. ಬೇಗ ಬೇಗ ಮುಗಿಸಿ. ಇನ್ನೂ ಕೋಳಿ ಸೋಸದು, ಹುಲ್ಲು ತರೋದು ಅಂತ ಕೆಲಸ ಇವೆ ಅಂತ ಸುಮ್ಮನಿರಿಸಿದ. 

 ಹಳೆ ಊರಿಂದ ಈ ಊರಿಗೆ ನೆಲೆ ಹಾಕಿದ ದುರ್ಗಮ್ಮಂಗೆ ವರ್ಷಕ್ಕೆರಡೇ ಪೂಜೆ. ಎರಡು ಮನೆತನದಲ್ಲಿ ಹಿರಿಯರಾದವರು ಮೊದಲ ಪೂಜೆ ಮಾಡ್ಕಂಡು ಬರೋದು ವಾಡಿಕೆ. ಹಂಗಾಗಿ ಅಪ್ಪ ನಂಗೊತ್ತಿದ್ದ ಹಾಗೆ ಅನೇಕ ವರ್ಷಗಳಿಂದಲೂ ಅವನ್ದೆ ಪೂಜೆ. ದುರ್ಗಮ್ಮನ ಜೊತೆಗೆ ಯಕ್ಷೆ, ಬೂತ, ಜಟಗ ಮುಂತಾದವುಕೆಲ್ಲ ಏಕಕಾಲಕ್ಕೆ ಪೂಜೆ. ಎಲ್ರೂ ಪೂಜೆ ಅರ್ಪಿಸಿದ ಮೇಲೆ ಕೋಳಿ ಕೊಯ್ಯದು. ಅಷ್ಟೊತ್ತಿಗೆ ಯಾರಾದ್ರು ಕೋಳಿ ಕೊಯ್ರಾ ಅಂತ ಅಪ್ಪ ಪರಮಾನು ಹೊರಡಿಸಿದ. ಹರಕೆ ಮಾಡ್ಕಂಡವರೆಲ್ಕ ಹೇಳ್ಕಳಿ. ಮನೆ, ಮಟ, ದನ, ಕರ, ಮರಿ, ಊರಿಗೆಲ್ಲ ಒಳ್ಳೇದು ಮಾಡು ದುರ್ಗಮ್ಮ ಅಂತ ಅಪ್ಪ ಬೇಡ್ಕಂಡು ಅಡ್ಡಡ್ಡ ಬಿದ್ದ.  ಕೋಳಿಗೆ ಕಾಲಿಗೆ ನೀರ್ ಹಾಕೋರು ಒಬ್ಬರೂ, ಅಪ್ಪ ಪ್ರಸಾದ ಹಾಕಿ ಬಿಡ್ತಿದ್ದ. ಅತ್ತ ನಮ್ಮನೇ ರಾಜು ಕೈಯಲ್ಲಿ ಒಂದೊಂದೆ ಕೋಳಿ ಚರ ಚರ ಬೀಳ್ತಿದ್ವು. ಇದೇನ ಬಾಳ ಹಾರಾಡಿದ ಕೋಳಿ ಅಂತ ನಮ್ಮನೇ ಹುಂಜನ ಅಣಕಿಸಿ, ಕೋಳಿ ಕತ್ ಮೇಲೆ ಕತ್ತಿ ಎಳೆದ. ಈಗಾಗ್ಲೆ ಸುಸ್ತಾದ ಅದು ಅಲ್ಲೇ ಬಿದ್ದು ಎರಡೇ ಪಲ್ಟಿಗೇ ಸುಮ್ಮನಾತು. ಆದರೆ  ಕೊಯ್ಯದ ಉಳಿದ ಕೋಳಿಯೆಲ್ಲಾ ಹತ್ತಾರು ಪಲ್ಟಿ ಹೊಡಿತಾ ಬಿದಿರ ಮಟ್ಟಿಯೊಳಗೆ ಸೇರ್ಕಂಡವು. ಅಲ್ಲೂ ನುಗ್ಗಿ ತರೋ ಧೀರರ ಸಂಖ್ಯೆ ಕಡಿಮೆಯೇನಿರಲಿಲ್ಲ. ಹಣ್ಣು ಕಾಯಿ, ಕೋಳಿ, ಕೋಳಿ ಮಂಡೆ ಹೊತ್ಗಂಡು ಸಂಜೆ ಊಟಕ್ಕೆ ನಮ್ಮನಿಗೆ ಬನ್ರೋ ಅಂತ ಎಲ್ರೂ ಅವರವರ ಮನೆಗೆ ಕರ್ಕಂಡು ಮನೆಕಡೆ ಹೊಂಟೆವು. ಅಪ್ಪನೂ ತೀರ್ಥದ ಚಂಬು ಹಿಡ್ಕಂಡು, ಯಾರಾದ್ರೂ ಏನಾದ್ರು ಬಿಟ್ರನಾ ನೋಡ್ಕಂಡು ತಗಳಿ ಅಂತ ಹೇಳಿ ಮನೆಕಡೆ ಹೆಜ್ಜೆ ಹಾಕಿದ.

ಡಾ. ಅಣ್ಣಪ್ಪ ಎನ್. ಮಳೀಮಠ್‌

ಸಹಾಯಕ ಪ್ರಾಧ್ಯಾಪಕರು, ಸ.ಪ್ರ. ಕಾಲೇಜು ನರಸಿಂಹರಾಜಪುರ

ಇದನ್ನೂ ಓದಿ-ಮನೆಮಗಳು ಈ ನಮ್ಮ ಗೌರಿ

You cannot copy content of this page

Exit mobile version