ಬೇಲೂರು : ಹೈನುಗಾರಿಕೆ ಜಿಲ್ಲೆಯ ರೈತರ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿದೆ ಎಂದು ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್. ಪ್ರಕಾಶ್ ತಿಳಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಹಾಸನ ಸಹಕಾರ ಹಾಲು ಒಕ್ಕೂಟ, ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ಬೇಲೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಭೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಳಿಕ ಅವರು ಮಾತನಾಡಿದರು.ಸಹಕಾರ ಕ್ಷೇತ್ರದಲ್ಲಿ ಎಲ್ಲರನ್ನು ಒಗ್ಗೂಡಿಸಿ ಎಲ್ಲರ ಸಹಕಾರದಿಂದ ಸಂಘಗಳನ್ನು ಮುಂದುವರೆಸಿಕೊಂಡು ಹೋಗುವುದು ದೊಡ್ಡ ಸಾಧನೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಒಂದೇ ರೈತರ ಜೀವನೋಪಾಯಕ್ಕೆ ಆಧಾರವಾಗಿದೆ. ಹಾಗಾಗಿ ಸಹಕಾರ ಸಂಘಗಳು ಹೆಚ್ಚೆಚ್ಚು ಲಾಭಗಳಿಸಿ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಹಾಯವಾಗಬೇಕೆಂದರು.ಹಾಸನದ ಪಶುವೈದ್ಯಕೀಯ ಮಹಾ ವಿದ್ಯಾಲಯದ ಸಹ ಪ್ರಾಧ್ಯಪಕ ಡಾ|| ಚೇತನರವರು ವೈಜ್ಞಾನಿಕ ಹೈನುಗಾರಿಕೆ ಆಹಾರ ಪದ್ಧತಿ ಹಾಗೂ ಹೈನುರಾಸುಗಳಲ್ಲಿ ಹಾಲಿನ ಗುಣಮಟ್ಟದ ನಿರ್ವಹಣೆ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಸೌಜನ್ಯರವರು ಆಧುನಿಕ ಹೈನುಗಾರಿಕೆಯಲ್ಲಿ ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತಂತೆ ಹಾಗೂ ಬೇಲೂರು ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಸಹಕಾರ ಸಂಘಗಳ ಚುನಾವಣೆ, ವಾರ್ಷಿಕ ಸರ್ವ ಸದಸ್ಯರ ಸಭೆ ಕುರಿತಂತೆ ಉಪನ್ಯಾಸ ನೀಡಿದರು.ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಡಿ.ಪಿ. ಸೋಮೇಗೌಡ, ನಿರ್ದೇಶಕ ಸಿದ್ದೇಶ್, ಜಿ.ಆರ್. ರಾಮಚಂದ್ರೇಗೌಡ, ಒಕ್ಕೂಟದವಿಸ್ತರಣಾಧಿಕಾರಿ ಪುಟ್ಟರಾಮು, ದಿನೇಶ್, ಸುರೇಶ್ ಹಾಗೂ ಬೇಲೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ 80 ಜನ ಪ್ರತಿನಿಧಿಗಳು ಹಾಗೂ ಇತರ ಸಿಬ್ಬಂದಿಗಳು ಬಾಗವಹಿಸಿದ್ದರು.