ಹಾಸನ : ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ, ಜಿಲ್ಲೆಯ ದಲಿತರ ಪರ ಹೋರಾಟಗಾರರ ಒಕ್ಕೂಟವು ದಲಿತ ಮುಖ್ಯಮಂತ್ರಿಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಕಳೆದ ತಿಂಗಳಿನಿಂದ ಮಾಧ್ಯಮಗಳಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಯನ್ನು ಉಲ್ಲೇಖಿಸಿದ ಸಂಘಟನೆಯ ನಾಯಕರು, ಕರ್ನಾಟಕ ಕಾಂಗ್ರೆಸ್ ನೇತೃತ್ವವನ್ನು ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇವರಿಬ್ಬರಲ್ಲೇ ಸೀಮಿತಗೊಳಿಸಲಾಗಿದೆ. ದಲಿತರಿಗೆ ಸಿಎಂ ಮಾಡುವ ಮನಸ್ಸು ಪಕ್ಷದ ನಾಯಕರಲ್ಲಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಮುನಿಯಪ್ಪ, ಪ್ರಿಯಂಕರ್ ಮುಂತಾದ ನಾಯಕರನ್ನು ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳೆಂದು ವಿವರಿಸಿದ ಅವರು, ಇವರೇ ಆಗಲಿ, ಆದರೆ ಒಟ್ಟಾಗಿ ನಿಲ್ಲಿ ದಲಿತರಿಗೆ ಸಿಎಂ ಸ್ಥಾನ ದೊರಕುವಂತೆ ಹೋರಾಟ ನಡೆಸಬೇಕು ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಪಾತ್ರದ ಕುರಿತು ಮಾತನಾಡಿದ ಒಕ್ಕೂಟದ ನಾಯಕರು, ಖರ್ಗೆ ಸಾಹೇಬರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಾಮಧೇಯ ಮಾತ್ರ. ವಾಸ್ತವಿಕ ಅಧಿಕಾರ ನೀಡದೆ ದಲಿತ ನಾಯಕರಿಗೆ ನ್ಯಾಯವಾಗುತ್ತಿಲ್ಲ. ಪಕ್ಷದ ಆಂತರಿಕ ನಿರ್ಧಾರಗಳಲ್ಲಿ ಅವರ ಅಭಿಪ್ರಾಯಕ್ಕೂ ಬೆಲೆ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಸನ ಕಾಂಗ್ರೆಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಸಿಎಂ ವಿಚಾರವಾಗಿ ಒಕ್ಕೂಟದ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ನೀಡಿದರು. ಹಾಸನದಿಂದಲೇ ದಲಿತ ಸಿಎಂಗಾಗಿ ದೊಡ್ಡ ಮಟ್ಟದ ಚಳುವಳಿ ಆರಂಭಿಸುವುದು ಅನಿವಾರ್ಯವೆಂದು ಒಕ್ಕೂಟ ತಿಳಿಸಿತು.
