Wednesday, June 18, 2025

ಸತ್ಯ | ನ್ಯಾಯ |ಧರ್ಮ

ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ ಕೊರತೆ ಭರ್ತಿ ಮಾಡಲು ಸಿಎಂ ಸೂಚನೆ

ದಲಿತ ಉದ್ದಿಮೆದಾರರಿಗೆ 2009ರಲ್ಲಿ ನಿಗದಿ ಪಡಿಸಿದ ಮೀಸಲಾತಿಯಂತೆ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿನ ಕೊರತೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ತಮ್ಮನ್ನು ಭೇಟಿಯಾದ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ನಿಯೋಗದ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ, ಈ ವಿಷಯ ತಿಳಿಸಿದರು. ಇದಕ್ಕಾಗಿ ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಜೊತೆಯಾಗಿ ಲ್ಯಾಂಡ್ ಆಡಿಟ್ ಮಾಡಿ ವರದಿ ಸಲ್ಲಿಸಿ, ಕೊರತೆಯಾಗಿರುವ ಭೂಮಿ ಹಂಚಿಕೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನವನ್ನು ಶೇ. 60 ರಷ್ಟು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಹಾಗೂ ಶೇ. 40 ರಷ್ಟು ರಾಜ್ಯಮಟ್ಟದ ಸಮಿತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಆದರೆ ದಲಿತ ಉದ್ದಿಮೆದಾರರಲ್ಲಿ ಬಹುತೇಕ ಮಂದಿಯ ಯೋಜನಾ ವೆಚ್ಚ 15 ಕೋಟಿಗಿಂತ ಕಡಿಮೆ ಇರುವುದರಿಂದ ಜಿಲ್ಲಾ ಮಟ್ಟದಲ್ಲಿನ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸಂಘದವರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲಾಮಟ್ಟದಲ್ಲಿ ಶೇ. 70 ರಷ್ಟು ಹಾಗೂ ರಾಜ್ಯ ಮಟ್ಟದಲ್ಲಿ ಶೇ. 30 ರಷ್ಟು ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೆ.ಎಸ್.ಎಫ್.ಸಿ.ಯಲ್ಲಿ ಸಾಲ ಸೌಲಭ್ಯ ಪಡೆಯುವಾಗ ಸಮಾನಾಂತರ ಭದ್ರತೆಗೆ ಕೈಗಾರಿಕಾ ಭೂಮಿಯ ವಾಸ್ತವ ಬೆಲೆಯನ್ನು ಪರಿಗಣಿಸುವಂತೆ ಸಂಘದವರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Pee

ದಲಿತ ಉದ್ದಿಮೆದಾರರ ಕೈಗಾರಿಕೆಯಲ್ಲಿ ಕನಿಷ್ಠ 10 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರೆ ವೇತನ ಪ್ರೋತ್ಸಾಹಕವನ್ನು ನೀಡುವಂತೆ ಸಂಘವು ಮಾಡಿದ ಮನವಿಯನ್ನು ಮುಂದಿನ ಆಯವ್ಯಯದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page